ಮಹಾರಾಷ್ಟ್ರ ಬಿಕ್ಕಟ್ಟಿಗೆ ಹೊಸ ತಿರುವು: ಏಕನಾಥ್ ಶಿಂಧೆ ಸ್ಫೋಟಕ ಟ್ವೀಟ್
ಗುವಹಾಟಿಯಲ್ಲಿನ ಪಂಚತಾರಾ ಹೊಟೇಲ್ನಿಂದ ರಾಜಕೀಯ ದಾಳ ಉರುಳಿಸುತ್ತಿರುವ ಭಿನ್ನಮತೀಯ ಗುಂಪಿಗೆ ಸುಪ್ರೀಂಕೋರ್ಟ್ ಕೊಂಚ ರಿಲೀಫ್ ನೀಡಿದೆ. ಸರ್ಕಾರದ ವಿರುದ್ದ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
Recommended Video
ದಿನಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಮಧ್ಯೆ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರು ಕೊರೊನಾದಿಂದ ಮುಕ್ತರಾಗಿದ್ದು, ಅವರ ಮುಂದಿನ ನಡೆಯೂ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇವೆಲ್ಲದರ ನಡುವೆ, ಭಿನ್ನಮತೀಯ ಗುಂಪಿನ ನಾಯಕ ಏಕನಾಥ್ ಶಿಂಧೆ, ಭಾನುವಾರ (ಜೂನ್ 26) ರಾತ್ರಿ ಮಾಡಿದ ಟ್ವೀಟ್ ಸಂಚಲನ ಮೂಡಿಸಿದೆ. ಸಿಎಂ ಉದ್ದವ್ ಠಾಕ್ರೆ ವಿರುದ್ದ ಸಿಡಿದೇಳಲು ಕಾರಣವೇನು ಎನ್ನುವುದನ್ನು ಶಿಂಧೆ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಶಿಂಧೆಯವರ ಟ್ವೀಟ್ ಹಲವು ಚರ್ಚೆಗೆ ನಾಂದಿ ಹಾಡಿದ್ದು, ಶಿವಸೇನೆಯ ಪ್ರಭಾವಿ ಮುಖಂಡ ಸಂಜಯ್ ರಾವತ್ ಅವರನ್ನು ಟ್ಯಾಗ್ ಮಾಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ನಡುವೆ, ರಾಜ್ಯಪಾಲರು ಸಿಎಂ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಪಾಲರ ನಡೆಯ ಮೇಲೆ ಎಲ್ಲರ ಕಣ್ಣಿದೆ
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬೇಗುದಿ ಹೊತ್ತಿ ಉರಿಯುತ್ತಿದೆ. ಹಾಗಾಗಿ, ರಾಜ್ಯಪಾಲರ ನಡೆಯ ಮೇಲೆ ಎಲ್ಲರ ಕಣ್ಣಿದೆ. ಪರಿಸ್ಥಿತಿಯನ್ನು ತನ್ನ ನಿಯತ್ರಣಕ್ಕೆ ತರಲು ಸಾಧ್ಯವಾಗದೇ ಇದ್ದರೆ, ಸಿಎಂ ಠಾಕ್ರೆ ರಾಜೀನಾಮೆ ನೀಡಿ ಅಸೆಂಬ್ಲಿ ವಿಸರ್ಜನೆಗೆ ಶಿಫಾರಸನ್ನು ಮಾಡಬಹುದು. ಆದರೆ, ರಾಜ್ಯಪಾಲರು ಇದಕ್ಕೆ ಸಮ್ಮತಿ ಸೂಚಿಸುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ. ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಯಾವ ಕಾರಣಕ್ಕಾಗಿ ನಾವೆಲ್ಲಾ ಠಾಕ್ರೆ ಸರಕಾರದ ವಿರುದ್ದ ಸಿಡಿದೇಳಬೇಕಾಯಿತು ಎನ್ನುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮರಾಠಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ
ಮರಾಠಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆಯ ಕನ್ನಡ ಪಾಠ, "ಮುಂಬೈ ಬಾಂಬ್ ಸ್ಫೋಟ ನಡೆಸಿ ಅಮಾಯಕ ಮುಂಬೈಗರನ್ನು ಕೊಂದ ದಾವೂದ್ ಇಬ್ರಾಹಿಂ ನೊಂದಿಗೆ ನೇರ ಸಂಪರ್ಕ ಹೊಂದಿರುವ, ಹಿಂದೂ ಹೃದಯ ಚಕ್ರವರ್ತಿ ವಂದನಿಯಾ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ? ಇದನ್ನು ವಿರೋಧಿಸಿ ನಾವಿಟ್ಟ ಹೆಜ್ಜೆ ಇನ್ನೂ ಉತ್ತಮ, ಇದು ನಮ್ಮೆಲ್ಲರನ್ನೂ ಸಾವಿನ ಅಂಚಿಗೆ ಕೊಂಡೊಯ್ದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ". ಇದು ಶಿಂಧೆ ಮಾಡಿರುವ ಟ್ವೀಟಿನ ಅನುವಾದ.

ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ
ಶಿಂಧೆ ಮಾಡಿರುವ ಟ್ವೀಟ್ 8,500ಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದ್ದು, ಆ ಟ್ವೀಟಿಗೆ ಸಂಜಯ್ ರಾವತ್ ಅವರನ್ನೂ ಟ್ಯಾಗ್ ಮಾಡಲಾಗಿದೆ. ಇನ್ನೊಂದು ಟ್ವೀಟ್ ಮಾಡಿರುವ ಶಿಂಧೆ, "ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವದ ಚಿಂತನೆಗಳಿಗೆ ಮತ್ತು ಬಾಳಾಸಾಹೇಬರ ಶಿವಸೇನೆಯನ್ನು ಉಳಿಸಲು ನಾವು ಮಡಿದರೂ ಉತ್ತಮವೇ. ಅದು ಸಂಭವಿಸಿದಲ್ಲಿ, ನಾವೆಲ್ಲರೂ ಅದೃಷ್ಟಶಾಲಿಗಳು"ಎಂದು ಏಕನಾಥ್ ಶಿಂಧೆ ಇನ್ನೊಂದು ಟ್ವೀಟ್ ಅನ್ನು ಮಾಡಿದ್ದಾರೆ.

ಸುಪ್ರೀಂಕೋರ್ಟ್ ಜುಲೈ 11ರವರೆಗೆ ವಿಚಾರಣೆಯನ್ನು ಮುಂದೂಡಿದೆ
ಏಕನಾಥ್ ಶಿಂಧೆಯವರ ಟ್ವೀಟ್ ಅನ್ನು ಅವಲೋಕಿಸಿದರೆ ಅವರ ಜೊತೆಗಿರುವ ಅಷ್ಟೂ ಶಾಸಕರಿಗೆ ದಾವೂದ್ ಇಬ್ರಾಹಿಂ ಲಿಂಕ್ ಸಿಎಂ ಠಾಕ್ರೆ ಜೊತೆ ಸಿಡಿದೇಳಲು ಕಾರಣವಾಯಿತೇ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಸುಪ್ರೀಂಕೋರ್ಟ್ ಜುಲೈ 11 ವಿಚಾರಣೆಯನ್ನು ಮುಂದೂಡಿದ್ದರಿಂದ, ಮಹಾ ನಾಟಕ ಇನ್ನಷ್ಟು ಮುಂದುವರಿದರೂ ಆಶ್ಚರ್ಯವಿಲ್ಲ.












Click it and Unblock the Notifications