ಮಹಾರಾಷ್ಟ್ರದಲ್ಲೇ ಅತ್ಯಧಿಕ ಸೋಂಕು ಪೀಡಿತರು: ಅಸಲಿ ಕಾರಣ ಏನು?
ನವದೆಹಲಿ, ಮೇ 14: ಭಾರತದಲ್ಲಿ ಇಲ್ಲಿಯವರೆಗೂ 78,768 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೂ 2,564 ಜನರು ಕೋವಿಡ್-19 ಗೆ ಬಲಿಯಾಗಿದ್ದಾರೆ.
Recommended Video
ಹಾಗ್ನೋಡಿದ್ರೆ, ಭಾರತದಲ್ಲಿ ಅತಿ ಹೆಚ್ಚು ಸೋಂಕು ಪೀಡಿತರು ಇರುವುದು ಮಹಾರಾಷ್ಟ್ರದಲ್ಲಿ. ದೇಶದ 33% ಸೋಂಕಿತರು ಮಹಾರಾಷ್ಟ್ರದಲ್ಲಿದ್ದಾರೆ. ಇನ್ನೂ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರವೊಂದರಲ್ಲೇ ಭಾರತದ 20% ಸೋಂಕು ಪೀಡಿತರಿದ್ದಾರೆ.
ಸದ್ಯದ ಅಂಕಿ-ಅಂಶದ ಪ್ರಕಾರ, ಮಹಾರಾಷ್ಟ್ರದಲ್ಲಿ 25,922 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 5,547 ಮಂದಿ ಗುಣಮುಖರಾಗಿದ್ದರೆ, 975 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಮುಂಬೈನಲ್ಲಿ 15,747 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, 596 ಮಂದಿ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಲು ಕಾರಣವಾಗಿದ್ದೇನು.? ಮಹಾರಾಷ್ಟ್ರ ಸರ್ಕಾರ ಎಡವಿ ಬಿದ್ದಿದ್ದು ಎಲ್ಲಿ.?

ಮೊದಲ ಪ್ರಕರಣ ದಾಖಲಾಗಿದ್ದು ಯಾವಾಗ.?
ಮಹಾರಾಷ್ಟ್ರದ ಮೊದಲ ಕೊರೊನಾ ವೈರಸ್ ಸೋಂಕಿತ ಪ್ರಕರಣ ದಾಖಲಾಗಿದ್ದು ಮಾರ್ಚ್ 9 ರಂದು ಪುಣೆಯಲ್ಲಿ. ಯು.ಎ.ಇ ಇಂದ ವಾಪಸ್ ಆದ ದಂಪತಿಗೆ ಕೊರೊನಾ ವೈರಸ್ ಸೋಂಕು ಕಂಡುಬಂದಿತ್ತು. ಇಲ್ಲಿಂದ ಮಹಾರಾಷ್ಟ್ರದಲ್ಲಿ ಶುರುವಾದ ಕೊರೊನಾ ವೈರಸ್ ಆರ್ಭಟ ಒಂದು ತಿಂಗಳ ಅಂತರದಲ್ಲಿ ಆತಂಕಕಾರಿ ಮಟ್ಟ ತಲುಪಿದೆ.

ಮೂಲ ಕಾರಣ
'ಕೊರೊನಾ ವೈರಸ್ ಪ್ಯಾಂಡೆಮಿಕ್' ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ್ದು ಮಾರ್ಚ್ 11 ರಂದು. ಇನ್ನೂ, ಭಾರತದಲ್ಲಿ ದೇಶೀಯ ಮತ್ತು ವಿದೇಶಿಯ ವಿಮಾನಯಾನ ಸ್ಥಗಿತಗೊಂಡಿದ್ದು ಮಾರ್ಚ್ 22 ರಂದು. ಅಷ್ಟರೊಳಗಾಗಲೇ, 42 ಸಾವಿರಕ್ಕೂ ಅಧಿಕ ಪ್ರಯಾಣಿಕರು ಮುಂಬೈಗೆ ಬಂದಿಳಿದಿದ್ದರು. ಮುಂಬೈ ಏರ್ ಪೋರ್ಟ್ ನಲ್ಲಿ ಮಾರ್ಚ್ 3ನೇ ವಾರದ ವರೆಗೂ ಸ್ಕ್ರೀನಿಂಗ್ ವ್ಯವಸ್ಥೆ ಇರಲೇ ಇಲ್ಲ. ಹೀಗಾಗಿ, ವಿದೇಶಗಳಿಂದ ಬಂದ ಸಾವಿರಾರು ಮಂದಿಯಿಂದ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ವಿಪರೀತವಾಗಿದೆ. ಆರಂಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಅತ್ಯಧಿಕವಾಗಿದೆ.

ಸಿಎಂ ಗೆ ಅನುಭವ ಇಲ್ಲ
ಹಾಲಿ ಸಿಎಂ ಉದ್ಧವ್ ಠಾಕ್ರೆ ಅವರ ರಾಜಕೀಯ ಅನುಭವದ ಕೊರತೆ ಕೋವಿಡ್-19 ಸಮಸ್ಯೆ ಬಿಗಡಾಯಿಸಲು ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಕೋವಿಡ್-19 ನಿರ್ವಹಣೆಗಿಂತ ಉದ್ಧವ್ ಠಾಕ್ರೆ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳುವಲ್ಲೇ ಹೆಚ್ಚು ಗಮನ ಕೇಂದ್ರೀಕರಿಸಿದ್ದರು ಎಂದು ಪ್ರತಿಪಕ್ಷಗಳು ಬೆಟ್ಟು ಮಾಡಿ ತೋರಿಸುತ್ತಿವೆ.

ಸೋಂಕು ಸಂಪರ್ಕ ಪತ್ತೆಯೇ ದೊಡ್ಡ ತಲೆನೋವು
ಮುಂಬೈನ ಕೊಳಗೇರಿ ಪ್ರದೇಶಗಳಲ್ಲಿ ಸೋಂಕು ಕಂಡುಬಂದ ಮೇಲೆ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದೇ ಬೃಹನ್ ಮುಂಬೈ ಮುನಿಸಿಪಾಲ್ ಕಾರ್ಪೊರೇಷನ್ ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತು.

ಸರ್ಕಾರದ ವಾದವೇನು.?
ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೂ 2.35 ಲಕ್ಷಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಹೆಚ್ಚು ಪರೀಕ್ಷೆ ಮಾಡಿದ್ರಿಂದ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ ಎಂಬುದು ಮಹಾರಾಷ್ಟ್ರ ಸರ್ಕಾರದ ವಾದ.

ಕೊರೊನಾಗೆ ಕಡಿವಾಣ ಬೀಳುವುದು ಯಾವಾಗ.?
ಒಟ್ಟಿನಲ್ಲಿ ಒಂದಲ್ಲಾ ಒಂದು ಕಾರಣದಿಂದ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಅಬ್ಬರಿಸುತ್ತಿರುವ ಕೊರೊನಾ ವೈರಸ್ ಅದ್ಯಾವಾಗ ಮಾಯವಾಗುತ್ತೋ.?!












Click it and Unblock the Notifications