ಗಡ್ಕರಿ ಹೇಳಿದ ಕ್ರಿಕೆಟ್, ರಾಜನೀತಿ ಕಥೆ: ರಿವರ್ಸ್ ಸ್ವಿಂಗಿಗೆ ಫಡ್ನವೀಸ್ ಕ್ಲೀನ್ ಬೌಲ್ಡ್
ಮುಂಬೈ, ನ 27: ಬೆಳ್ಳಂಬೆಳಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್, ಡಿಸಿಎಂ ಆಗಿ ಅಜಿತ್ ಪವಾರ್, ಅಧಿಕಾರ ಸ್ವೀಕರಿಸಿದಾಗ, ಬಿಜೆಪಿ, ಭಾರೀ ರಾಜಕೀಯ ರಣತಂತ್ರವನ್ನು ರೂಪಿಸಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು.
ಆದರೆ, ಅಮಿತ್ ಶಾ ಗಿಂತ ವಯಸ್ಸಿನಲ್ಲಿ, ರಾಜಕೀಯದಲ್ಲಿ ಪಳಗಿದ್ದ ಶರದ್ ಪವಾರ್, ಹೂಡಿದ ಪ್ರತಿತಂತ್ರ, ಬಿಜೆಪಿಯನ್ನು ನಿಬ್ಬೆರಗಾಗಿಸಿತ್ತು. ಪರಿಣಾಮ, ತರಾತುರಿಯಲ್ಲಿ ಪದಗ್ರಹಣ ಮಾಡಿದ್ದ ದೇವೇಂದ್ರ ಫಡ್ನವೀಸ್ ರಾಜೀನಾಮೆ.
ಮಹಾರಾಷ್ಟ್ರದ ಬಿಜೆಪಿ ಘಟಕ - ಶಿವಸೇನೆಯ ನಡುವಿನ ಭಿನ್ನಮತ ಏನಿದ್ದರೂ, ಒಂದೇ ಸಿಟ್ಟಿಂಗ್ ನಲ್ಲಿ ಪರಿಹಾರ ಕಂಡುಕೊಳ್ಳುವ ಚಾಣಾಕ್ಷತನ, ಪಕ್ಷದ ಪಾಲಿಗೆ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸಂಬಂಧ ಅವರು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ.
ಅದು ಪಕ್ಷದ ಅಥವಾ ಆರ್ ಎಸ್ ಎಸ್ ಸೂಚನೆಯೋ ಗೊತ್ತಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ರಚನೆ ಸಂಬಂಧ, ಅವರು ನೀಡಿದ್ದ 'ಕ್ರಿಕೆಟ್ - ರಾಜನೀತಿ' ಹೇಳಿಕೆಯನ್ನು, ಈಗ ಹೇಗೇಗೋ ವ್ಯಾಖ್ಯಾನಿಸಲಾಗುತ್ತಿದೆ.

ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನನ್ನೂ ಮೊದಲೇ ಊಹಿಸಲೂ ಸಾಧ್ಯವಿಲ್ಲ
"ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನನ್ನೂ ಮೊದಲೇ ಊಹಿಸಲೂ ಸಾಧ್ಯವಿಲ್ಲ. ಇನ್ನೇನು, ಮ್ಯಾಚ್ ಕೈತಪ್ಪಿತು ಎನ್ನುವಷ್ಟರಲ್ಲಿ ಫಲಿತಾಂಶ ಬೇರೆ ಬಂದಿರುತ್ತದೆ" ಎಂದು ನಿತಿನ್ ಗಡ್ಕರಿ ಹೇಳಿದ್ದರು. "Edge - 2019" ಉದ್ಯಮಿಗಳ ಜೊತೆ ಸಂವಾದದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸಂಬಂಧದ ಪ್ರಶ್ನೆ ಕೇಳಿ ಬಂದಾಗ ಈ ರೀತಿ ಹೇಳಿಕೆಯನ್ನು ನೀಡಿದ್ದರು.

ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪದಗ್ರಹಣ
ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪದಗ್ರಹಣದ ನಂತರ ಗಡ್ಕರಿ ಹೇಳಿಕೆಯ ಸೂಕ್ಷ್ಮತೆಯನ್ನು ಶಿವಸೇನೆ ಅರಿಯದೇ ಹೋಯಿತು ಎಂದು ಹೇಳಲಾಗುತ್ತಿತ್ತು. ಯಾರಿಗೂ ತಿಳಿಯದಂತೇ, ಬಿಜೆಪಿ ಗೇಮ್ ಪ್ಲಾನ್ ಮಾಡಿತು. ಇದನ್ನು ಶಿವಸೇನೆಯ ಮುಖಂಡರು ಅರಿಯದೇ ಹೋದರು. (ಚಿತ್ರ:ಪಿಟಿಐ)

ಸುಪ್ರೀಂಕೋರ್ಟ್ ತೀರ್ಪು
ಆದರೆ, ಸುಪ್ರೀಂಕೋರ್ಟ್ ತೀರ್ಪಿನ ನಂತರ, ನಿತಿನ್ ಗಡ್ಕರಿ ಹೇಳಿಕೆಯನ್ನು ಅವರಿಗೆ ತಿರುಗುಬಾಣ ಆಗುವ ಹಾಗೇ ವಿರೋಧಿಗಳು ಲೇವಡಿ ಮಾಡುತ್ತಿದ್ದಾರೆ. ಎನ್ಸಿಪಿ ಮುಖಂಡರೊಬ್ಬರು, ನಿತಿನ್ ಗಡ್ಕರಿಗೆ ಕ್ರಿಕೆಟ್ ಸ್ಟೈಲಿನಲ್ಲೇ ತಿರುಗೇಟು ನೀಡಿದ್ದಾರೆ. (ಚಿತ್ರ:ಪಿಟಿಐ)

ಮೋದಿ ಮತ್ತು ಶಾಗೆ ಆದ ಮಹಾಮುಖಭಂಗ
ತಂತ್ರಗಾರಿಕೆ ರೂಪಿಸುವಲ್ಲಿ ಚಾಣಕ್ಯ ಎಂದು ಕರೆಯಲ್ಪಡುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅವರ ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಪ್ಲಾನ್ ವರ್ಕೌಟ್ ಆಗಲಿಲ್ಲ. ಮೋದಿ ಮತ್ತು ಶಾಗೆ ಆದ ಮಹಾಮುಖಭಂಗ ಇದೆಂದು ವಿಶ್ಲೇಷಿಸಲಾಗುತ್ತಿದೆ. (ಚಿತ್ರ:ಪಿಟಿಐ)

ದೇವೇಂದ್ರ ಫಡ್ನವೀಸ್, ರಾಜಕೀಯದ ಹಲವು ರಿವರ್ಸ್ ಸ್ವಿಂಗಿಗೆ ಬೌಲ್ಡ್
ಒಟ್ಟಿನಲ್ಲಿ ದೆಹಲಿ ದೊರೆಗಳ ಆದೇಶ ಪಾಲಿಸಿ, ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಮತ್ತೆ ಅದೇ ವೇಗದಲ್ಲಿ ರಾಜೀನಾಮೆ ನೀಡಿದ ದೇವೇಂದ್ರ ಫಡ್ನವೀಸ್, ರಾಜಕೀಯದ ಹಲವು ರಿವರ್ಸ್ ಸ್ವಿಂಗಿಗೆ ಬೌಲ್ಡ್ ಆಗಿದ್ದಾರೆ.












Click it and Unblock the Notifications