ಫಡ್ನವೀಸ್ ಸರ್ಕಾರದ ಭವಿಷ್ಯ ಭಾನುವಾರದಂದು ನಿರ್ಧಾರ
ನವದೆಹಲಿ, ನವೆಂಬರ್ 24: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರದಂದು ಉಂಟಾದ ಕ್ಷಿಪ್ರ ಬೆಳವಣಿಗೆ ಕಂಡು ಶಿವಸೇನಾ ಹಾಗೂ ಕಾಂಗ್ರೆಸ್ ಅಲ್ಲದೆ ಎನ್ಸಿಪಿ ಕೂಡಾ ಬೆಚ್ಚಿದೆ. ಆದರೆ ಈ ಹೊಸ ಮೈತ್ರಿ ಕೂಟ ಕಾನೂನಿನ ಮೊರೆ ಹೋಗಿವೆ. ಸುಪ್ರೀಂ ತೀರ್ಪು ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ.
ಕಾಂಗ್ರೆಸ್, ಶಿವಸೇನೆ ಮತ್ತು ಎನ್ಸಿಪಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ತ್ವರಿತವಾಗಿ ವಿಚಾರಣೆ ನಡೆಸಲು ನ್ಯಾಯಪೀಠ ಮುಂದಾಗಿದೆ. ಭಾನುವಾರ ಬೆಳಗ್ಗೆ 11:30ಕ್ಕೆ ವಿಚಾರಣೆ ನಡೆಯಲಿದೆ.

ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ವಿಚಾರಣೆ ನಡೆಸಲಿದ್ದು, ದೇವೇಂದ್ರ ಫಡ್ನವೀಸ್ ಅವರಿಗೆ 24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವುದು, ರಾಜ್ಯಪಾಲರ ಕ್ರಮ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.
ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದ ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಸಲಾಗಿತ್ತು. ದೇವೇಂದ್ರ ಫಡ್ನವೀಸ್ ಎನ್ಸಿಪಿಯ ಅಜಿತ್ ಪವಾರ್ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
ಎನ್ಸಿಪಿಯ ಎಲ್ಲಾ 54 ಶಾಸಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬೆಂಬಲ ಕೊಟ್ಟಿಲ್ಲ. ಅಜಿತ್ ಪವಾರ್ ಜೊತೆಗಿದ್ದ ಶಾಸಕರು ಬೆಂಬಲ ನೀಡಿದ್ದು, ಅಜಿತ್ ಪವಾರ್ಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಕ್ಕಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಪ್ರಯತ್ನದಲ್ಲಿದ್ದ ಕಾಂಗ್ರೆಸ್, ಶಿವಸೇನೆ ಮತ್ತು ಎನ್ಸಿಪಿಗೆ ಇದು ದೊಡ್ಡ ಅಘಾತ ನೀಡಿದೆ.
288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಿಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರಕ್ಕೆ ಈಗ ಬೆಲೆ ಸಿಕ್ಕಿದೆ.
ಎನ್ಸಿಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವ ಮೂಲಕ ಶಿವಸೇನಾದ ಬಹುಕಾಲದ ಉಪಟಳಕ್ಕೆ ಹಾಗೂ ಕಾಂಗ್ರೆಸ್ಸಿನ ಅವಕಾಶಗಳಿಗೆ ಒಂದೇ ಬಾರಿಗೆ ಕಡಿವಾಣ ಹಾಕಬಹುದು. ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ, ಎನ್ಸಿಪಿಯ ಎಲ್ಲಾ ಶಾಸಕರು ಅಜಿತ್ ಬೆನ್ನಿಗೆ ನಿಲ್ಲುತ್ತಾರಾ ಎಂಬುದನ್ನು ಮುಂದೆ ಕಾದು ನೋಡಬೇಕಿದೆ.












Click it and Unblock the Notifications