ಧರ್ಮ ಸಂಸತ್ನ ಹೇಳಿಕೆಗಳು ಹಿಂದುತ್ವ ಅಲ್ಲ: ಮೋಹನ್ ಭಾಗವತ್
ನಾಗ್ಪುರ, ಫೆಬ್ರವರಿ 7: ಧರ್ಮ ಸಂಸದ್ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಲಾದ ಹೇಳಿಕೆಗಳು ಹಿಂದುತ್ವ ಅಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಈ ಹೇಳಿಕೆಗಳನ್ನು ಹಿಂದುತ್ವವನ್ನು ಆಚರಿಸುವವರು ಆ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಆರ್ ಎಸ್ ಎಸ್ ಮುಖ್ಯಸ್ಥರು, ಸಾವರ್ಕರ್ ಸಹ ಹಿಂದೂ ಸಮುದಾಯ ಒಗ್ಗೂಡಬೇಕು, ಸಂಘಟಿತವಾಗಬೇಕು ಎಂದು ಹೇಳಿದ್ದರೆ, ಅದು ಭಗವದ್ಗೀತೆಯ ಬಗ್ಗೆ ಮಾತಾಡುತ್ತದೆಯೇ ಹೊರತು ಮತ್ತೋರ್ವರನ್ನು ಹಿಂಸಿಸುವ ಬಗ್ಗೆಯಲ್ಲ ಎಂದು ಮೋಹನ್ ಭಾಗ್ವತ್ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಭಾರತ ಹಿಂದೂ ರಾಷ್ಟ್ರವಾಗುವ ಹಾದಿಯಲ್ಲಿದೆಯೇ? ಎಂಬ ಬಗ್ಗೆಯೂ ಮಾತನಾಡಿರುವ ಅವರು, "ಹಿಂದೂ ರಾಷ್ಟ್ರವೆಂಬುದು ಸೃಷ್ಟಿಸುವುದಲ್ಲ. ಯಾರು ಒಪ್ಪಲಿ, ಬಿಡಲಿ ಹಿಂದೂ ರಾಷ್ಟ್ರ ಇದ್ದೇ ಇದೆ" ಎಂದು ಹೇಳಿದ್ದಾರೆ.

ಲೋಕಮಾತ್ ಮೀಡಿಯಾ ಸಮೂಹದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಹಿಂದುತ್ವ ಹಾಗೂ ರಾಷ್ಟ್ರೀಯ ಸಮಗ್ರತೆ ಎಂಬ ವಿಷಯದ ಬಗ್ಗೆ ಮಾತನಾಡಿರುವ ಮೋಹನ್ ಭಾಗವತ್, ಇತ್ತೀಚೆಗಷ್ಟೇ ಧರ್ಮ ಸಂಸದ್ ನಲ್ಲಿ ಬಂದ ಹೇಳಿಕೆಗಳು ಹಿಂದೂಗಳ ಶಬ್ದಗಳಲ್ಲ. ಯಾರಾದರೂ ಕೋಪದಲ್ಲಿ ಏನಾದರೂ ಹೇಳಿದರೆ ಅದು ಹಿಂದುತ್ವವಲ್ಲ. ಆರ್ ಎಸ್ಎಸ್ ಅಥವಾ ಹಿಂದುತ್ವವನ್ನು ಪಾಲಿಸುವ ಯಾರೇ ಆಗಿರಲಿ ಅದರಲ್ಲಿ ನಂಬಿಕೆ ಹೊಂದಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಚತ್ತೀಸ್ ಗಢದಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರು ಮಹಾತ್ಮ ಗಾಂಧಿ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿ ನಾಥುರಾಮ್ ಗೋಡ್ಸೆ ಅವರನ್ನು ಸ್ತುತಿಸುತ್ತಿದ್ದ ಪ್ರಕರಣ ಹಾಗೂ ಉತ್ತರಾಖಂಡ್ ನಲ್ಲಿ ಡಿಸೆಂಬರ್ ನಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದವರು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದಿಸುವ ಭಾಷಣ ಮಾಡಿದ್ದರ ಪ್ರಕರಣಗಳ ಬಗ್ಗೆ ಮೋಹನ್ ಭಾಗ್ವತ್ ತಮ್ಮ ಅಭಿಪ್ರಾಯವನ್ನು ಭಾಷಣದಲ್ಲಿ ವ್ಯಕ್ತಪಡಿಸಿದ್ದಾರೆ.
ಸಂಘವು ಜನರನ್ನು ವಿಭಜಿಸುವುದರಲ್ಲಿ ಅಲ್ಲ, ಅವರ ಭಿನ್ನಾಭಿಪ್ರಾಯಗಳನ್ನು ದೂರ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ. ಇದರಿಂದ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗುತ್ತದೆ, ನಾವು ಹಿಂದುತ್ವ ಮೂಲಕ ಈ ಕೆಲಸವನ್ನು ಮಾಡಲು ಬಯಸುತ್ತೇವೆ ಎಂದರು.
2018ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಬಗೆಗಿನ ನೆನಪು ಮೆಲುಕು ಹಾಕಿದ ಅವರು, ಆ ಸಮಯದಲ್ಲಿ ಘರ್ ವಾಪಸಿ ವಿಷಯವು ತುಂಬಾ ಚರ್ಚೆಯಲ್ಲಿತ್ತು. ಸಂಸತ್ನಲ್ಲಿಯೂ ಗದ್ದಲವೆದ್ದಿತ್ತು ಎಂದರು.












Click it and Unblock the Notifications