ಉದ್ಧವ್ ಠಾಕ್ರೆ ಜೊತೆ 6 ಮಂದಿ ಸಚಿವರಾಗಿ ಪ್ರಮಾಣ ವಚನ
ಮುಂಬೈ, ನವೆಂಬರ್ 28: ಇನ್ನೂ ಒಂದು ಚುನಾವಣೆ ಎದುರಿಸದ ಉದ್ಧವ್ ಅವರು ಈಗ ಶಿವಾಜಿ ಪಾರ್ಕ್ ಒಳಗೊಂಡಿರುವ ಮಾಹಿಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಠಾಕ್ರೆ ಕುಟುಂಬದಿಂದ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಉದ್ಧವ್ ಠಾಕ್ರೆ ಅವರ ಪ್ರತಿಜ್ಞಾ ವಿಧಿ ಸ್ವೀಕಾರಕ್ಕೂ ಸಾಕ್ಷಿಯಾಗಲಿದೆ. ಉದ್ಧವ್ ಜೊತೆಗೆ ಯಾರು? ಯಾರು? ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಈ ನಡುವೆ ಎನ್ಸಿಪಿ ಹಿರಿಯ ನಾಯಕ ಅಜಿತ್ ಪವಾರ್ ಅವರು ಇಂದು ಉದ್ಧವ್ ಠಾಕ್ರೆ ಸಂಪುಟ ಸೇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಸದನದಲ್ಲಿ ಎನ್ಸಿಪಿ- ಶಿವಸೇನಾ-ಕಾಂಗ್ರೆಸ್ ಪಕ್ಷವು ಬಹುಮತ ಸಾಬೀತುಪಡಿಸಿದ ಬಳಿಕ, ಇನ್ನೊಂದು ವಾರದಲ್ಲಿ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಿವಾಜಿಪಾರ್ಕಿನಲ್ಲಿ ಇಂದು ಸಂಜೆ ಉದ್ಧವ್ ಠಾಕ್ರೆ ಜೊತೆಗೆ ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನಾದಿಂದ ತಲಾ 2 ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಿಂದ ಬಾಳಾಸಾಹೇಬ್ ಥೋರಟ್, ನಿತಿನ್ ರಾವತ್, ಎನ್ಸಿಪಿಯಿಂದ ಛಗನ್ ಭುಜ್ ಬಲ್, ಜಯಂತ್ ಪಾಟೀಲ್, ಶಿವಸೇನಾದಿಂದ ಸುಭಾಷ್ ದೇಸಾಯಿ, ಏಕನಾಥ್ ಶಿಂಧೆ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆದರ್ಶ್ ಸೊಸೈಟಿ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಟ್ಟಿಯಿಂದ ಅವರ ಹೆಸರನು ತೆಗೆದು ಹಾಕಲಾಗಿದೆ.
288 ಮಂದಿ ವಿಧಾನಸಭಾ ಸದಸ್ಯರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಚುನಾವಣೆ ಬಳಿಕ ಯಾವೊಂದು ಪಕ್ಷವು ಅಧಿಕಾರ ಸ್ಥಾಪಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 145 ದಾಟಲು ಸಾಧ್ಯವಾಗಲಿಲ್ಲ. 105 ಸದಸ್ಯ ಬಲದ ಬಿಜೆಪಿ ಜೊತೆ 54 ಸದಸ್ಯ ಬಲದ ಎನ್ಸಿಪಿ ಕೈ ಜೋಡಿಸಿದರೆ 159 ಸ್ಥಾನದೊಂದಿಗೆ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಕೊನೆಗೆ 56 ಸೀಟು ಪಡೆದ ಶಿವಸೇನಾ, 44 ಗಳಿಸಿದ ಕಾಂಗ್ರೆಸ್, 54 ಗೆದ್ದ ಎನ್ಸಿಪಿ ಹಾಗೂ ಬೆಂಬಲಿತ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ.












Click it and Unblock the Notifications