ರಾಷ್ಟ್ರಪತಿ ಹುದ್ದೆಗೆ ಶರದ್?: ಪ್ರಶಾಂತ್, ಗಾಂಧಿ ಭೇಟಿ ಬಳಿಕ ಊಹಾಪೋಹಕ್ಕೆ ಪವಾರ್ ಹೇಳಿದ್ದಿಷ್ಟು..
ಮುಂಬೈ, ಜು.15: ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಮೂವರು ಗಾಂಧಿಯರೊಂದಿಗೆ ಸಭೆ ನಡೆಸಿದ ಬಳಿಕ ಹರಡಿದ ಊಹಾಪೋಹಗಳಲ್ಲಿ ಹಿರಿಯ ರಾಜಕೀಯ ನಾಯಕ ಶರದ್ ಪವಾರ್ ಮುಂದಿನ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಎಂಬುದು ಕೂಡಾ ಒಂದಾಗಿದೆ. ಆದರೆ ಈ ಊಹಾಪೋಹವನ್ನು ಸ್ವತಃ ಶರದ್ ಪವಾರ್ ತಳ್ಳಿಹಾಕಿದ್ದಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸೋನಿಯಾ ಗಾಂಧಿಯನ್ನು ಭೇಟಿಯಾಗುವುದಕ್ಕೂ ಮೊದಲು ಪ್ರಶಾಂತ್ ಕಿಶೋರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶರದ್ ಪವಾರ್ ಅನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ಅಭ್ಯರ್ಥಿ ಶರದ್ ಎಂಬ ಊಹಾಪೋಹಗಳು ಹರಿದಾಡಿದವು.
ಆದರೆ ಗಾಂಧಿ ಪರಿವಾರದೊಂದಿಗೆ ಕಿಶೋರ್ ಭೇಟಿಯ ಬಳಿಕ ತನ್ನ ಹಾಗೂ ಕಿಶೋರ್ ಭೇಟಿ ಬಗ್ಗೆ ಮಾತನಾಡಿದ ಶರದ್, ''ಈ ಸಭೆ ಯಾವುದೇ ರಾಜಕೀಯ ಚರ್ಚೆಯನ್ನು ಮಾಡಲು ಸೇರಿದಲ್ಲ,'' ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್, ''ಚುನಾವಣಾ ಕಾರ್ಯತಂತ್ರ ಮಾಡುವ ವ್ಯವಹಾರವನ್ನು ಪ್ರಶಾಂತ್ ಕಿಶೋರ್ ಈಗ ತ್ಯಜಿಸಿದ್ದಾರೆ ಎಂದು ನನ್ನ ಬಳಿ ಹೇಳಿದ್ದಾರೆ,'' ಎಂದು ತಿಳಿಸಿದ್ದಾರೆ.
"ಪ್ರಶಾಂತ್ ಕಿಶೋರ್ ನನ್ನನ್ನು ಎರಡು ಬಾರಿ ಭೇಟಿಯಾದರು. ಆದರೆ ಅದು ಪ್ರಶಾಂತ್ ಕಂಪನಿಯ ಬಗ್ಗೆ ಮಾತನಾಡಲೆಂದು ಆದ ಭೇಟಿ. 2024 ರ ಚುನಾವಣೆಯ ನಾಯಕತ್ವ ಅಥವಾ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ," ಎಂದು ಪವಾರ್ ಸ್ಪಷ್ಟನೆ ನೀಡಿದರು.
ಮಂಗಳವಾರದಂದು ರಾಹುಲ್ ಗಾಂಧಿ ನಿವಾಸಕ್ಕೆ ಕಿಶೋರ್ ತೆರಳಿದ್ದು, ಈ ವೇಳೆ ಪ್ರಿಯಾಂಕಾ ಗಾಂಧಿ ಖುದ್ದಾಗಿ ಅಲ್ಲಿ ಹಾಜರಿದ್ದರೆ, ಸೋನಿಯಾ ಗಾಂಧಿ ವಿಡಿಯೋ ಚಾಟ್ ಮೂಲಕ ಸಭೆ ಸೇರಿದ್ದರು ಎಂದು ಹೇಳಲಾಗಿದೆ. ಈ ಬಳಿಕ ಈ ಹಿಂದೆ ಪ್ರಶಾಂತ್ ಕಿಶೋರ್, ಶರದ್ ಪವಾರ್ ಅನ್ನು ಭೇಟಿ ಆಗಿರುವುದೂ ಕೂಡಾ ಮುನ್ನಲೆಗೆ ಬಂದಿದೆ. ಹಲವು ಊಹಾಪೋಹಗಳನ್ನು ಸೃಷ್ಟಿಸಿದೆ.
ಇನ್ನು ಈ ಭೇಟಿ ರಾಜ್ಯ ಚುನಾವಣೆ ಬಗ್ಗೆ ಅಲ್ಲ, ಆದರೆ ಬೇರೊಂದು ದೊಡ್ಡ ವಿಷಯದಲ್ಲಿ ಸೇರಲಾಗಿದೆ ಎಂದು ಮೂಲಗಳು ತಿಳಿಸಿದೆ. ಈ ನಡುವೆ ಪ್ರಶಾಂತ್, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ವದಂತಿ ಹಬ್ಬಿದೆ. ಹಾಗೆಯೇ ಪ್ರಶಾಂತ್ ಮುಂದಿನ ಚುನಾವಣೆಯ ವೇಳೆ ಕಾಂಗ್ರೆಸ್ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಕೂಡಾ ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಶರದ್ ಪವಾರ್, "ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದು ತಪ್ಪು," ಎಂದಿದ್ದಾರೆ. ಬಿಜೆಪಿಯನ್ನು ಉಲ್ಲೇಖಿಸಿದ ಪವಾರ್, "ಒಂದೇ ಪಕ್ಷವು 300 ಕ್ಕೂ ಹೆಚ್ಚು ಸಂಸದರನ್ನು ಹೊಂದಿದೆ. ಚುನಾವಣೆಯ ಫಲಿತಾಂಶ ಏನು ಎಂದು ನನಗೆ ತಿಳಿದಿದೆ. ನಾನು ರಾಷ್ಟ್ರಪತಿ ಅಭ್ಯರ್ಥಿಯಾಗುವುದಿಲ್ಲ. ಆದರೆ ರಾಜಕೀಯ ಸ್ಥಿತಿ ಬದಲಾಗುತ್ತಿದೆ," ಎಂದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications