ಪ್ರಾಣ ಒತ್ತೆಯಿಟ್ಟು ಬಾಲಕನನ್ನು ರಕ್ಷಿಸಿದ ಸಿಬ್ಬಂದಿಗೆ ಪ್ರಶಸ್ತಿ ಘೋಷಿಸಿದ ರೈಲ್ವೆ ಸಚಿವಾಲಯ
ಮುಂಬೈ, ಏಪ್ರಿಲ್ 21: ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆರು ವರ್ಷದ ಬಾಲಕನನ್ನು ರಕ್ಷಿಸಿದ ಕೇಂದ್ರ ರೈಲ್ವೆ ನೌಕರ ಮಯೂರ್ ಶೇಲ್ಕೆಗೆ ರೈಲ್ವೆ ಸಚಿವಾಲಯ 50 ಸಾವಿರ ರೂಪಾಯಿಯ ಪ್ರಶಸ್ತಿ ಘೋಷಣೆ ಮಾಡಿದೆ.
ರೈಲಿನಡಿ ಸಿಲುಕಬೇಕಿದ್ದ ಮಗುವನ್ನು ಕ್ಷಣಮಾತ್ರದಲ್ಲಿ ಮಯೂರ್ ಶೆಲ್ಕೆ ಅವರು ರಕ್ಷಣೆ ಮಾಡಿದ್ದ ಸಂಗತಿ ಮುಂಬೈನ ವಾಂಗಾನಿ ಉಪನಗರ ರೈಲ್ವೆ ನಿಲ್ದಾಣದಲ್ಲಿ ಕಳೆದ ಶನಿವಾರ ನಡೆದಿತ್ತು. ಈ ದೃಶ್ಯ ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಂಜೆ 5 ಗಂಟೆ ವೇಳೆಗೆ ಮಹಿಳೆ ಹಾಗೂ ಆರು ವರ್ಷದ ಬಾಲಕ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 2ರಲ್ಲಿ ನಡೆದು ಸಾಗುತ್ತಿದ್ದ ಸಂದರ್ಭ ಪ್ಲಾಟ್ಫಾರ್ಮ್ನಲ್ಲಿ ರೈಲ್ವೆ ಹಳಿಯ ಸಮೀಪ ಸಾಗಿದ ಮಗು ಆಯ ತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದಿದೆ. ಕೂಡಲೇ ಮಗು ಹಳಿಯಿಂದ ಎದ್ದು ಪ್ಲಾಟ್ಫಾರ್ಮ್ ಮೇಲೆ ಏರಲು ಪ್ರಯತ್ನಿಸಿದ್ದು, ರೈಲು ಬರುತ್ತಿರುವ ಸದ್ದು ಕೇಳುತ್ತಿದ್ದಂತೆ ಮಹಿಳೆ ಗಾಬರಿಯಿಂದ ಕಂಗಾಲಾಗಿ ಅಳುತ್ತಾ ನಿಂತಿದ್ದರು.
ಪ್ಲಾಟ್ಫಾರ್ಮ್ ಹತ್ತಲು ಪ್ರಯತ್ನಿಸುತ್ತಿದ್ದ ಮಗುವಿಗೆ ಎತ್ತರ ಎಟುಕದೆ ಮತ್ತೆ ಹಳಿ ಮೇಲೆ ಬೀಳುತ್ತಿದ್ದು, ಎದುರಿನಿಂದ ರೈಲೊಂದು ವೇಗವಾಗಿ ಬರುತ್ತಿತ್ತು. ಇದನ್ನು ಕಂಡ ಮಯೂರ್ ಶೆಲ್ಕೆ, ಆ ಬಾಲಕನ ತಾಯಿಯನ್ನು ಗಮನಿಸಿದ್ದಾರೆ. ಆ ಬಾಲಕನ ತಾಯಿ ಏನೂ ತೋಚದೇ ಗಾಬರಿಯಲ್ಲಿ ಕೂಗಾಡುತ್ತಿದ್ದು, ಆಕೆಗೆ ಕಣ್ಣು ಕಾಣುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಕೂಡಲೇ ಹಳಿಯ ಮೇಲೆ ಹಾರಿ ಮಗುವಿನತ್ತ ಧಾವಿಸಿದ್ದರು. ಕೆಲವೇ ಸೆಕೆಂಡಿನಲ್ಲಿ ಮಗುವನ್ನು ಪ್ಲಾಟ್ಫಾರ್ಮ್ ಮೇಲೆ ಎತ್ತಿ ಇರಿಸಿ ತಾವೂ ಸುರಕ್ಷಿತರಾಗಿ ಪ್ಲಾಟ್ಫಾರ್ಮ್ ಮೇಲೆ ಏರಿದ್ದರು.

ಈ ವಿಡಿಯೋವನ್ನು ಕೇಂದ್ರ ರೈಲ್ವೆ ಹಂಚಿಕೊಂಡು ಮಯೂರ್ ಅವರ ಕಾರ್ಯವನ್ನು ಶ್ಲಾಘಿಸಿತ್ತು. ಈ ವಿಡಿಯೋ ವೈರಲ್ ಆಗಿದ್ದು, ತಮ್ಮ ಪ್ರಾಣವನ್ನೂ ಲಕ್ಕಿಸದೇ ಬಾಲಕನ ಪ್ರಾಣ ಉಳಿಸಿದ ಮಯೂರ್ ಅವರ ಶೌರ್ಯವನ್ನು ಎಲ್ಲರೂ ಕೊಂಡಾಡಿದ್ದರು. ಇದೀಗ ರೈಲ್ವೆ ಮಂಡಳಿಯ ನಿರ್ದೇಶಕ ಕೇಂದ್ರ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಧೈರ್ಯ, ಶೌರ್ಯ, ಸಮಯಪ್ರಜ್ಞೆ ಪ್ರದರ್ಶಿಸಿದ ಮಯೂರ್ ಅವರಿಗೆ ಪ್ರಶಸ್ತಿ ಘೋಷಿಸಿದ್ದಾರೆ.












Click it and Unblock the Notifications