ಸ್ಟಾರ್ ನಟನ ಪುತ್ರನಿಗ ಜೈಲಾ? ಬೇಲಾ? - ಎನ್ಸಿಬಿ ಸ್ಪೋಟಕ ಹೇಳಿಕೆ
ಮುಂಬೈ ಅಕ್ಟೋಬರ್ 13: ಬಾಲಿವುಡ್ ಬಾದ್ ಶಾ ಪುತ್ರನಿಗೆ ಅದ್ಯಾಕೋ ಬಿಡುಗಡೆ ಭಾಗ್ಯ ಸಿಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಶಾರೂಖ್ ದಂಪತಿಗೆ ಟೆನ್ಶನ್ ಶುರುವಾಗಿದೆ. ಹಗಲಿರುಳು ಮಗನ ಬಗ್ಗೆ ಯೋಚಿಸುತ್ತಿರುವ ದಂಪತಿಗೆ ಇಂದಾದರೂ ಸಿಹಿ ಸುದ್ದಿ ಸಿಗುತ್ತಾ ಅನ್ನೋ ನಿರೀಕ್ಷೆ ಇದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ವಿಚಾರಣೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಸ್ಪೋಟಕ ಹೇಳಿಕೆಯನ್ನು ನೀಡಿದೆ. ಎನ್ಸಿಬಿ ಬುಧವಾರ ಆರ್ಯನ್ ಖಾನ್ ಜಾಮೀನು ಅರ್ಜಿಗೆ ತನ್ನ ಉತ್ತರವನ್ನು ಸಲ್ಲಿಸಿದೆ. ಆರ್ಯನ್ ಖಾನ್ ಇತರ ಆರೋಪಿಗಳಂತೆ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಸಿಬಿ ಹೇಳಿದೆ. ಇಂದು ಮಧ್ಯಾಹ್ನ 2:45 ರ ಸುಮಾರಿಗೆ ಆರ್ಯನ್ ಖಾನ್ ಜಾಮೀನ್ ಅರ್ಜಿ ವಿಚಾರಣೆ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಆರಂಭವಾಗಿದೆ.
ಮೂಲಗಳ ಪ್ರಕಾರ, ಕ್ರೂಸ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಎನ್ಸಿಬಿ ವಿರೋಧಿಸುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಇದುವರೆಗೆ 20 ಜನರನ್ನು ಬಂಧಿಸಲಾಗಿದೆ.

ಕಳೆದ ವಾರ ಆರ್ಯನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಪಡುತ್ತಿದ್ದಂತೆ ಆರ್ಯನ್ ಖಾನ್ ತಕ್ಷಣ ನ್ಯಾಯಾಲಯಕ್ಕೆ ಜಾಮೀನು ಕೋರಿದರು. ಆದರೆ ಆರ್ಯನ್ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಕ್ಟೋಬರ್ 8 ರಂದು ತಿರಸ್ಕರಿಸಿತು. ಜಾಮೀನು ಅರ್ಜಿಯನ್ನು ಕಳೆದ ಸೋಮವಾರ ವಿಶೇಷ NDPS ನ್ಯಾಯಾಲಯದ ಮುಂದೆ ಮತ್ತೆ ವಿಚಾರಣೆ ನಡೆಸಲಾಯಿತು. ಆದರೆ ನ್ಯಾಯಾಲಯ NCB ಯ ಉತ್ತರವನ್ನು ಕೋರಿ ಬುಧವಾರದಂದು ಹೆಚ್ಚಿನ ವಿಚಾರಣೆಗೆ ಮುಂದೂಡಿದೆ.
ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಸ್ಟಾರ್ ನಟನ ಪುತ್ರನಿಗೆ ಜೈಲಾ? ಬೇಲಾ? ಕಾದು ನೋಡಬೇಕಿದೆ.












Click it and Unblock the Notifications