ಮಹಾರಾಷ್ಟ್ರ ಕಾಂಗ್ರೆಸ್ಗೆ ನಾನಾ ಪಟೋಲೆ ಅಧ್ಯಕ್ಷರಾಗಿ ನೇಮಕ
ಮುಂಬೈ, ಫೆಬ್ರವರಿ 5: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿದ್ದ ನಾನಾ ಪಟೋಲೆ ಅವರನ್ನು ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಾಲಾಸಾಹೇಬ್ ಥೋರಟ್ ಅವರ ಜಾಗಕ್ಕೆ ಪಟೋಲೆ ನೇಮಕವಾಗಿದ್ದಾರೆ.
ಭಂಡಾರಾ ಜಿಲ್ಲೆಯ ಸಕೋಲಿ ಕ್ಷೇತ್ರದ ಶಾಸಕರಾಗಿರುವ ಪಟೋಲೆ ಗುರುವಾರವಷ್ಟೇ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 'ಕಾಂಗ್ರೆಸ್ ಅಧ್ಯಕ್ಷರು ನಾನಾ ಪಟೋಲೆ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ' ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮಗಳು ಪ್ರಣತಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಶಿವಾಜಿ ರಾವ್ ಮೊಗೆ, ಬಸವರಾಜ ಪಾಟೀಲ್, ಮೊಹಮ್ಮದ್ ಆರಿಫ್ ನಸೀಮ್, ಕುನಾಲ್ ರೋಹಿದಾಸ್ ಪಾಟೀಲ್ ಮತ್ತು ಚಂದ್ರಕಾಂತ್ ಹಂಡೋರೆ ಅವರನ್ನು ಕೂಡ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪಕ್ಷವು ಹತ್ತು ಮಂದಿ ಉಪಾಧ್ಯಕ್ಷರನ್ನು ನೇಮಕ ಮಾಡಿದೆ. ಶಿರಿಶ್ ಮಧುಕರರಾವ್, ಚೌಧರಿ, ರಮೇಶ್ ಆನಂದ ರಾವ್ ಬಗ್ವೆ, ಹುಸೇನ್ ದಳವಾಯಿ, ಮೋಹನ್ ಜೋಷಿ, ರಂಜಿತ್ ಪ್ರತಾಪ್ ಕಾಂಬ್ಲೆ, ಕೈಲಾಶ್ ಕೃಷ್ಣರಾವ್ ಗೊರಂಟ್ಯಲ್, ನಗರಾಲೆ, ಶರದ್ ಅಹೆರ್, ಎಂಎಂ ಶೇಖ್ ಮತ್ತು ಮಾಣಿಕ್ ಮೋತಿರಾಮ್ ಜಗಪತ್ ಹೊಸ ಉಪಾಧ್ಯಕ್ಷರಾಗಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಕಾರ್ಯತಂತ್ರ, ಪರಿಶೀಲನೆ ಮತ್ತು ಸಮನ್ವಯ ಸಮಿತಿ ಮತ್ತು 37 ಸದಸ್ಯರ ಸಂಸದೀಯ ಮಂಡಳಿಯನ್ನು ರಚಿಸಿದೆ.
ಎಂಸಿಸಿಪಿ ಅಧ್ಯಕ್ಷರಾಗಿದ್ದ ಬಾಲಾಸಾಹೇಬ್ ಥೋರಟ್ ಅವರ ಜಾಗಕ್ಕೆ ಪಟೋಲೆ ಅವರನ್ನು ನೇಮಿಸಲು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿರುವುದು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ಮಿತ್ರಪಕ್ಷಗಳಾದ ಶಿವಸೇನಾ ಮತ್ತು ಎನ್ಸಿಪಿಯಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.
ಸರ್ಕಾರ ಸುಗಮವಾಗಿ ಸಾಗುತ್ತಿದ್ದು, ಅದರ ಕಾರ್ಯಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದಿತ್ತು. ಅವರ ರಾಜೀನಾಮೆಯಿಂದ ಈಗ ಸ್ಪೀಕರ್ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಯಬೇಕಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರ ಬಳಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.












Click it and Unblock the Notifications