ತುಸು ಹೆಚ್ಚೇ ಆಯ್ತು, ಮಹಾನಗರಿ ಮುಂಬೈಗೆ ಮುಂಗಾರಿನ ಅಭಿಷೇಕ!
ಮುಂಬೈ, ಜೂನ್ 08: ಒಂದೆಡೆ ವಿಶಾಲ ಕಡಲು, ಮತ್ತೊಂದೆಡೆ ಗಗನ ಚುಂಬಿ ಕಟ್ಟಡದ್ದೇ ಸಾಲು... ಗಿಜಿಗುಡುವ ಜನದಟ್ಟಣೆಯ ನಡುವಲ್ಲೂ ವಾಣಿಜ್ಯ ನಗರಿ ಎಂಬ ಬಿರುದು... ಇದು ಮುಂಬೈ ಎಂಬ ಸುಂದರ ನಗರದ ಚಿತ್ರಣ. ಈ ದುಬಾರಿ ನಗರದಲ್ಲೀಗ ಮುಂಗಾರಿನ ಅಭಿಷೇಕ ಆರಂಭವಾಗಿದೆ.
ಎಲ್ಲೆಲ್ಲೂ ಕಾಂಕ್ರೀಟ್ ನೆಲ, ರಿಯಲ್ ಎಸ್ಟೇಟ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ ನಾಯಿಕೊಡೆಯಂತೆ ಎದ್ದುನಿಂತಿರುವ ಕಟ್ಟಡಗಳಿಂದಾಗಿ ಮಳೆ ಬಂದರೆ ಸಾಕು ಮುಂಬೈ ಜನರ ಬದುಕು ದುರ್ಬರವಾಗುತ್ತದೆ. ಕಳೆದ ವರ್ಷವೂ ಭಾರೀ ಮಳೆಯಿಂದ ತತ್ತರಿಸಿದ್ದ ಮುಂಬೈಯಿಗರಿಗೆ ಈಗಾಗಲೇ ಭಯ ಆರಂಭವಾಗಿದೆ. ಮುಂಗಾರು ಆರಂಭವಾಗುತ್ತಿದ್ದಂತೆಯೇ, ಮುಂಬೈಯನ್ನು ತುಸು ಹೆಚ್ಚೇ ತೊಪ್ಪೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ!
ಇನ್ನೆರಡು ದಿನಗಳಲ್ಲಿ ಮುಂಬೈಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ(ಜೂನ್ 9-10) ನೀಡುತ್ತಿದ್ದಂತೆಯೇ, ಮುಂಬೈ ನಿವಾಸಿಗಳ್ಯಾರೂ ಮನೆಯಿಂದ ಆಚೆ ಬರದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಮುಂಬೈಯನ್ನು ತೊಪ್ಪೆಯಾಗಿಸಿದ್ದ ಮುಂಗಾರು ಪೂರ್ವ ಮಳೆ
ಮುಂಬೈಯಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಸುರಿದಿದ್ದ ಮಳೆಯಿಂದಲೇ ಸಾಕಷ್ಟು ಹಾನಿಯಾಗಿದೆ. ಜೂನ್ 07 ರಂದು ಇಲ್ಲಿ ಸುಮಾರು 27.6 ಮಿಮೀ ಯಿಂದ 37.8 ಮಿಮೀ ಮಳೆಯಾಗಿದೆ. ನಗರದಲ್ಲಿ ಎಲ್ಲೆಲ್ಲೂ ನೀರು ತುಂಬಿಕೊಂಡ ಕಾರಣ ಸಂಚಾರ ಅಸ್ತವ್ಯಸ್ಥವಾಗಿತ್ತು. ವಾರಾಂತ್ಯದಲ್ಲೂ ನಗರದಲ್ಲಿ ಸಾಕಷ್ಟು ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ.

2005 ರಲ್ಲಿ ಮುಂಬೈಯನ್ನು ನಡುಗಿಸಿದ್ದ ಮಳೆ
2005 ರ ಜುಲೈ 26 ರಂದು ಮುಂಬೈಯಲ್ಲಿ ಸುರಿದಿದ್ದ ಮಳೆ ವಾಣಿಜ್ಯ ನಗರಿಯ ಚಿತ್ರಣವನ್ನೇ ಬದಲಿಸಿತ್ತು. ಕೇವಲ 24 ಗಂಟೆಯಲ್ಲಿ ಸುರಿದ 944 ಮಿಮೀ ಮಳೆಗೆ ಎಲ್ಲೆಲ್ಲೂ ಪ್ರವಾಹ ಎದ್ದಿತ್ತು. ಈ ಸಸಂದರ್ಭದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನ ಮೃತರಾಗಿದ್ದರೆಂದು ವರದಿಯಾಗಿತ್ತು. 550 ಕೋಟಿಗೂ ರೂ.ಹೆಚ್ಚು ಆಸ್ತಿ ನಷ್ಟವಾಗಿತ್ತು.

ಈ ದಶಕದಲ್ಲೇ ಎರಡು ಬಾರಿ ಪ್ರವಾಹ ಕಂಡ ಮುಂಬೈ
ಈ ದಶಕದಲ್ಲಿ ಅಂದರೆ 2011 ಮತ್ತು 2017 ರಲ್ಲಿ ಮುಂಬೈಯಲ್ಲಿ ಎರಡು ಬಾರಿ ಪ್ರವಾಹ ಉಂಟಾಗಿದ್ದು, ಇಲ್ಲಿನ ಜನರ ನಿದ್ದೆ ಕೆಡಿಸಿತ್ತು. ಸಮುದ್ರದ ಪಕ್ಕದಲ್ಲೇ ಇರುವ ಕರಾವಳಿ ನಗರವಾಗಿರುವುದರಿಂದ ಮುಂಬೈಗೆ ಪ್ರವಅಹ ಭೀತಿ ಹೆಚ್ಚು. ಅದೂ ಅಲ್ಲದೆ, ಇಂದಿಗೂ 150 ವರ್ಷ ಹಳೆಯ ಚರಂಡಿ ವ್ಯವಸ್ಥೆಯನ್ನೇ ಅನುಸರಿಸುತ್ತಿರುವುದು ಸಹ ಮುಂಬೈಯಲ್ಲಿ ಬಹುಬೇಗನೆ ಪ್ರವಾಹ ತಲೆದೂರುತ್ತಿರುವುದಕ್ಕೆ ಕಾರಣ.

ಮಹಾನಗರ ಪಾಲಿಕೆಯ ಬೇಜವಾಬ್ದಾರಿ?!
ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಏಷ್ಯಾದಲ್ಲೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು ನಿಜ. ಆದರೂ ಪ್ರತಿವರ್ಷ ಮಳೆಗಾಲಕ್ಕೂ ಮುನ್ನ ಮಾಡಬೇಕಾದ ಚರಂಡಿ ಸ್ವಚ್ಛತೆ ಮತ್ತು ಮಳೆಗಅಲದ ಮುನ್ನೆಚ್ಚರಿಕೆಯನ್ನು ಪಾಲಿಕೆ ಸರಿಯಾಗಿ ಕೈಗೊಳ್ಳುತ್ತಿಲ್ಲ. ಆದ್ದರಿಂದಲೇ ವಾಣಿಜ್ಯ ನಗರ ಸಣ್ಣ ಮಳೆಗೂ ಪ್ರವಾಹಕ್ಕೆ ತುತ್ತಾಗುವಂತಾಗಿದೆ. ಮುಂಬೈ ಮಹಾನಗರ ಪಾಲಿಕೆಯ ಬಜೆಟ್ ದೇಶದ ಹಲವು ರಾಜ್ಯಗಳ ಬಜೆಟ್ ಗಾತ್ರಕ್ಕಿಂತ ದೊಡ್ಡದಾಗಿದ್ದರೂ ಮುನ್ನೆಚ್ಚರಿಕೆ ಕ್ರಮ ಮಾತ್ರ ಕೈಗೊಳ್ಳಲಾಗದಿರುವುದು ದುರಂತವೇ ಸರಿ.












Click it and Unblock the Notifications