ರೋಗಿಯ ಸಂಬಂಧಿಯನ್ನು ಎಳೆದು ಸಾಯಿಸಿದ ಎಂಆರ್ ಐ ಯಂತ್ರ!
Recommended Video

ಮುಂಬೈ, ಜನವರಿ 29: ಎಂಆರ್ ಐ (Magnetic resonance imaging) ಸ್ಕ್ಯಾನ್ ಮಾಡಿಸಿಕೊಳ್ಳುವವರು ಸಹವಾಸವೇ ಸಾಕು ಎಂದು ಆಸ್ಪತ್ರೆಗಳಿಗೆ ಕೈಮುಗಿಯುವಂಥ ದುರ್ಘಟನೆಯೊಂದು ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ನಡೆದಿದೆ.
ಸಂಬಂಧಿಯೊಬ್ಬರ ತಾಯಿಗೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸುವುದಕ್ಕಾಗಿ 'ನಾಯರ್ ಆಸ್ಪತ್ರೆ'ಗೆ ತೆರಳಿದ್ದ ರಾಜೇಶ್ ಮಾರು(32) ಎಂಬ ವ್ಯಕ್ತಿ ವೈದ್ಯರ, ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಏನಿದು ಘಟನೆ?
ಇತ್ತೀಚೆಗೆ ತಾನೇ ಉದ್ಯೋಗ ಪಡೆದ ಸಂತಸದಲ್ಲಿದ್ದ ರಾಜೇಶ್ ಮಾರು ತಮ್ಮ ಸಂಬಂಧಿಯೊಬ್ಬರ ತಾಯಿಗೆ ಅನಾರೋಗ್ಯವೆಂದು ಅವರಿಗೆ ಸಹಾಯ ಮಾಡಲು ಆಸ್ಪತ್ರೆಗೆ ಬಂದಿದ್ದರು. ಈ ಸಂದರ್ಭದಲ್ಲಿ ರೋಗಿಗೆ ಎಂಆರ್ ಐ ಸ್ಕ್ಯಾನ್ ಮಾಡಿಸಬೇಕೆಂದು ವೈದ್ಯರು ಹೇಳಿದ್ದರು. ಎಂಆರ್ ಐ ಸ್ಕ್ಯಾನ್ ಮಾಡಿರುವ ಕೋಣೆಯಲ್ಲಿ ಯಾವುದೇ ರೀತಿಯ ಲೋಹವನ್ನೂ ಕೊಂಡೊಯ್ಯುವಂತಿಲ್ಲ. ಈ ವಿಷಯ ಗೊತ್ತೇ ಇದ್ದುದರಿಂದ ಆಸ್ಪತ್ರೆ ಸಿಬ್ಬಂದಿ ರೋಗಿ ಮತ್ತು ಅವರ ಕಡೆಯವರಿಗೆ ಹೇರ್ ಕ್ಲಿಪ್, ಒಡವೆ, ಪಿನ್, ಸೇರಿದಂತೆ ಎಲ್ಲಾ ಲೋಹದ ವಸ್ತುಗಳನ್ನೂ ಕೋಣೆಯಿಂದ ಆಚೆಯೇ ಇಟ್ಟು ಬರುವುದಕ್ಕೆ ಹೇಳಿದ್ದಾರೆ.

ಆದರೆ ರೋಗಿಗೆ ಅಗತ್ಯವೆಂದು ಆಮ್ಲಜನಕದ ಸಿಲಿಂಡರ್ ಅನ್ನು ಮಾತ್ರ ಹಿಡಿಸು ತರುವಂತೆ ಹೇಳಿದ್ದಾರೆ. ಆದರೆ ಈ ಸಿಲಿಂಡರ್ ಸಹ ಲೋಹದ್ದಾಗಿದ್ದರಿಂದ ರೋಗಿಯ ಕಡೆಯವರು ಹಲವು ಬಾರಿ ಈ ಬಗ್ಗೆ ವಿಚಾರಿಸಿ, ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಆತ್ಮವಿಶ್ವಾಸದಲ್ಲಿ, ರೋಗಿಗೆ ಆಕ್ಸಿಜನ್ ಅಗತ್ಯವಿರುತ್ತದೆ. ಇದನ್ನು ತರಲೇಬೇಕು. ಏನೂ ಸಮಸ್ಯೆಯಾಗೋಲ್ಲ ಎಂದು ಗ್ಯಾರಂಟಿ ನೀಡಿದ್ದಾರೆ.
ರೋಗಿ ಮತ್ತು ಆಕ್ಸಿಜನ್ ಸಿಲಿಂಡರ್ ಎರಡನ್ನೂ ಹೊತ್ತ ಟ್ರಾಲಿಯೊಂದನ್ನು ಎಂಆರ್ ಐ ಕೋಣೆಗೆ ತರಲಾಗಿತ್ತು. ಆಕ್ಸಿಜನ್ ಸಿಲಿಂಡರ್ ಮತ್ತು ಎಂಆರ್ ಐ ಮಧ್ಯೆ ನಿಂತಿದ್ದ ಮಾರು ಅವರಿಗೆ ತಾವು ಇನ್ನು ಕೆಲವೇ ಸೆಕೆಂಡ್ ಗಳಲ್ಲಿ ಇಹಲೋಕ ತ್ಯಜಿಸುತ್ತೇನೆ ಎಂಬ ಪರಿವೆಯೇ ಇರಲಿಲ್ಲ. ಆಕ್ಸಿಜನ್ ಸಿಲಿಂಡರ್ ಹೊತ್ತ ಟ್ರಾಲಿ, ಎಂಆರ್ ಐ ಮಶಿನ್ ಹತ್ತಿರ ಬರುತ್ತಿದಂತೆಯೇ ಯಂತ್ರ ಆ ಸಿಲಿಂಡರ್ ಅನ್ನೂ, ತನ್ನ ಪಕ್ಕದಲ್ಲೇ ಇದ್ದ ರಾಜೇಶ್ ಅವರನ್ನೂ ಎಳೆದುಕೊಂಡು ನುಂಗಿಹಾಕಿದೆ!
ತಕ್ಷಣವೇ ಎಂಆರ್ ಐ ಮಶಿನ್ ಅನ್ನು ಆಫ್ ಮಾಡಲಾಯಿತಾದರೂ, ಅವರು ಅತಿಯಾದ ಆಕ್ಸಿಜನ್ ಸೇವಿಸಿದ್ದರಿಂದ ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದರು!
ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುವುದಾಗಿ ಆಸ್ಪತ್ರೆಯೇನೋ ಹೇಳಿದೆ. ಆದರೆ ರಾಜೇಶ್ ಅವರನ್ನು ಹಿಂತಿರುಗಿಸಿ ಕೊಡುವುದಕ್ಕಾಗುತ್ತದಾ? ಅವರನ್ನೇ ನಂಬಿರುವ ಅವರ ಕುಟುಂಬದ ಗತಿಯೇನು? ವೈದ್ಯರ ಬೇಜವಾಬ್ದಾರಿಯ ಇಂಥ ಇನ್ನೆಷ್ಟು ಘಟನೆ ನಡೆಯಬೇಕೋ!












Click it and Unblock the Notifications