ವಿಚಾರವಾದಿಗಳ ಬಂಧನ: ಸುದ್ದಿಗೋಷ್ಠಿ ನಡೆಸಿದ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿ
ಮುಂಬೈ, ಸೆಪ್ಟೆಂಬರ್ 03: ಭೀಮಾ ಕೊರೆಗಾಂವ್ ಹಿಂಸಾಚಾರ, ಮಾವೋವಾದಿಗಳ ಜತೆ ನಂಟು, ಪ್ರಧಾನಿ ಮೋದಿ ಹತ್ಯೆ ಸಂಚು ಆರೋಪಗಳಲ್ಲಿ ವಿಚಾರವಾದಿಗಳನ್ನು ಬಂಧಿಸಿರುವ ಪುಣೆ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿ ಹಾಕಿದೆ.
ವಿಚಾರಿವಾದಿಗಳ ಬಂಧನ ಪ್ರಕರಣವನ್ನು ಪುಣೆ ಪೊಲೀಸರಿಂದ ಎನ್ಐಎಗೆ ವಹಿಸಬೇಕು ಎಂದು ಉದ್ಯಮಿಯೊಬ್ಬರ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಪುಣೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು.
ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವಾಗ ಏಕೆ ಪತ್ರಿಕಾಗೋಷ್ಠಿ ನಡೆಸಿ ಅನಗತ್ಯ ಗೊಂದಲ ಮೂಡಿಸಿದರಿ. ಅಲ್ಲದೆ ಹಲವು ದಾಖಲೆಗಳನ್ನೂ ಬಹಿರಂಗಪಡಿಸಿದ್ದೀರಿ ಎಂದು ಬಾಂಬೆ ಹೈಕೋರ್ಟ್ ಪೊಲೀಸರಿಗೆ ಪ್ರಶ್ನೆಗಳನ್ನು ಕೇಳಿತು.

ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸರು
ವಿಚಾರವಾದಿಗಳ ಬಂಧನ ಕುರಿತು ಪೊಲೀಸರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಕೆಲವು ಪತ್ರಗಳನ್ನು ಮಾಧ್ಯಮಗಳ ಮುಂದೆ ಓದಿ ಹೇಳಿದ್ದರು. ಇವು ಪ್ರಕರಣದ ಸಾಕ್ಷ್ಯಗಳೆಂದು ಪೊಲೀಸರು ಹೇಳಿದ್ದರು.

ಆಂಧ್ರದ ಕವಿ ವರವರ ರಾವ್ ಬಂಧನ
ಪುಣೆ ಪೊಲೀಸರು ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.

ಗೃಹ ಬಂಧನ ನೀಡಿ ಆದೇಶ
ಬಂಧಿತರೆಲ್ಲರಿಗೂ ಗೃಹಬಂಧನವನ್ನೂ ನೀಡಿ ಪ್ರಕರಣವನ್ನು ಸೆಪ್ಟೆಂಬರ್ 6ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಈ ನಡುವೆ ಪುಣೆ ಪೊಲೀಸರು ಸುದ್ದಿಗೋಷ್ಠಿ ನಡೆಸಿರುವುದು ಬಾಂಬೆ ಹೈಕೋರ್ಟ್ನ ಕಣ್ಣು ಕೆಂಪಗಾಗಿಸಿದೆ.

ಮೋದಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು
ಸುದ್ದಿಗೋಷ್ಠಿ ನಡೆಸಿದ್ದ ಪುಣೆ ಪೊಲೀಸ್ ಉನ್ನತ ಅಧಿಕಾರಿ, ಬಂಧನದ ವೇಳೆ ವಿಚಾರವಾದಿಯೊಬ್ಬರ ಮನೆಯಿಂದ ವಶಪಡಿಸಿಕೊಂಡಿದ್ದ ಎನ್ನಲಾದ ಪತ್ರವೊಂದನ್ನು ಓದಿ ಹೇಳಿದರು. ಅದರಲ್ಲಿ ಮೋದಿ ಯನ್ನು ರಾಜೀವ್ ಗಾಂಧಿ ಮಾದರಿಯಲ್ಲಿ ಕೊಲ್ಲಬೇಕೆಂದು ಮತ್ತು ಅದಕ್ಕೆ ಹಣ ಸಂಗ್ರಹಿಸಬೇಕೆಂದು ಉಲ್ಲೇಖಿಸಲಾಗಿತ್ತು.












Click it and Unblock the Notifications