ಶೀನಾ ಬೋರಾ ಕೇಸ್ ತನಿಖಾಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ
ಮುಂಬೈ, ಸೆ. 08: ಮುಂಬೈನಗರಿಯಲ್ಲಿ 'ಮಾಂಸ ಬ್ಯಾನ್' ಬಗೆಗ್ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಶೀನಾ ಬೊರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ತಂಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹಾರಾಷ್ಟ್ರ ಸರ್ಕಾರ ಅಚ್ಚರಿಯ ಆದೇಶ ಹೊರಡಿಸಿದೆ. ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರಿಗೆ ಬಡ್ತಿ ನೀಡಿ ಡಿಜಿಪಿ ಹುದ್ದೆಗೇರಿಸಲಾಗಿದೆ.
ಮುಂಬೈ ನಗರದ ಹೊಸ ಪೊಲೀಸ್ ಆಯುಕ್ತರಾಗಿ ಅಹ್ಮದ್ ಜಾವೇದ್ ರನ್ನು ನೇಮಿಸಲಾಗಿದೆ. ಹಾಲಿ ಆಯುಕ್ತ ರಾಕೇಶ್ ಮಾರಿಯಾ ಅವರನ್ನು ಹೋಂ ಗಾರ್ಡ್ ಡೈರೆಕ್ಟರ್ ಜನರಲ್ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದು ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಂಗಳವಾರ ನೀಡಿರುವ ತನ್ನ ಆದೇಶದಲ್ಲಿ ಹೇಳಿದೆ.[ ಶೀನಾ ಬೋರಾ ಡಿಎನ್ಎ ಪರೀಕ್ಷೆ ವರದಿ ಬಹಿರಂಗ]

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಮಾರಿಯಾ ಅವರು ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ, ವಿಚಾರಣೆ ನಡೆಸುತ್ತಿದ್ದರು.
ಸೋಮವಾರ ಈ ಪ್ರಕರಣದಲ್ಲಿ ಪ್ರಮುಖ ವಿಚಾರಗಳು ಬೆಳಕಿಗೆ ಬಂದಿತ್ತು. ನಿನ್ನೆ ದಿನಪೂರ್ತಿ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಪತಿ ಪೀಟರ್ ಮುಖರ್ಜಿ ಅವರ ವಿಚಾರಣೆ ನಡೆಸಲಾಗಿತ್ತು. ಜೊತೆಗೆ ಶೀನಾ ಅಸ್ಥಿಪಂಜರದ ಡಿಎನ್ ಎ ಹಾಗೂ ಇಂದ್ರಾಣಿಯ ಡಿಎನ್ ಎ ಮ್ಯಾಚ್ ಆಗಿರುವ ಅಂಶ ವರದಿಯಲ್ಲಿ ಹೇಳಲಾಗಿದೆ. ಅದರೆ, ಈಗ ರಾಕೇಶ್ ಮಾರಿಯಾ ಅವರನ್ನು ಸೇರಿದಂತೆ ತನಿಖಾ ತಂಡದಲ್ಲಿದ್ದ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮಾರಿಯಾ vs ಜಾವೇದ್: ಕಳೆದ ವರ್ಷ ರಾಕೇಶ್ ಮಾರಿಯಾರನ್ನು ಪೊಲೀಸ್ ಆಯುಕ್ತ ಹುದ್ದೆಗೆ ಆಯ್ಕೆ ಮಾಡಿದಾಗ ಅಹ್ಮದ್ ಜಾವೇದ್ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹೋಂ ಗಾರ್ಡ್ ವಿಭಾಗದ ಡಿಜಿ ಆಗಿದ್ದ ಜಾವೇದ್ ಈಗ ಮುಂಬೈನ ಟಾಪ್ ಕಾಪ್ ಹುದ್ದೆಗೇರಿದ್ದಾರೆ. ಸೆ. 30ಕ್ಕೆ ಪೊಲೀಸ್ ಆಯುಕ್ತರಾಗಿ ಮಾರಿಯಾ ಅವರ ಅಧಿಕಾರ ಅವಧಿ ಮುಗಿಯಲಿತ್ತು.
ಶೀನಾ ಬೋರಾ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿದ್ದ ರಾಕೇಶ್ ಮಾರಿಯಾ ಅವರು ಇತ್ತೀಚಿಗೆ ಈ ಪ್ರಕರಣ ಮತ್ತೊಂದು ಆರುಷಿ ಮರ್ಡರ್ ಕೇಸ್ ಆಗುವುದು ನನಗಿಷ್ಟವಿಲ್ಲ, ಶೀಘ್ರವೇ ಆರೋಪಿಗಳಿಗೆ ಶಿಕ್ಷೆ ಸಿಗಲಿದೆ ಎಂದಿದ್ದರು. ದಕ್ಷ ಅಧಿಕಾರಿ ಎನಿಸಿಕೊಂಡಿರುವ ರಾಕೇಶ್ ಮಾರಿಯಾರನ್ನು ಹೋಂಗಾರ್ಡ್ ವಿಭಾಗಕ್ಕೆ ವರ್ಗ ಮಾಡಿರುವುದು ಹಲವಾರು ಮಂದಿ ಹುಬ್ಬೇರಿಸಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications