ಮಹಾರಾಷ್ಟ್ರ ಚುನಾವಣೆ: ನೆರೆ ಪೀಡಿತ ಜಿಲ್ಲೆಗಳಲ್ಲಿ ಬಿಜೆಪಿ ಧೂಳೀಪಟ
ತಾಳ್ಮೆಗೂ ಒಂದು ಮಿತಿಯಿರುತ್ತದೆ ಎನ್ನುವ ರೀತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಮತದಾರ ಬಿಜೆಪಿಗೆ ಪಾಠ ಕಲಿಸಿದ್ದಾನೆ. ಪ್ರಮುಖವಾಗಿ ಎರಡು ಜಿಲ್ಲೆಗಳಲ್ಲಿ, ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.
ಕರ್ನಾಟಕ - ಮಹಾರಾಷ್ಟ್ರ ಗಡಿಭಾಗಗಳಲ್ಲಿ ಕಂಡು ಕೇಳರಿಯದ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದರು. ಈ ನೈಸರ್ಗಿಕ ವಿಕೋಪವನ್ನು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರ ಸರಿಯಾಗಿ ನಿಭಾಯಿಸಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿತ್ತು.
ಪ್ರಮುಖವಾಗಿ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆ ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಕೊಲ್ಹಾಪುರ ಭಾಗದ ಪಂಚಗಂಗಾ ನದಿ ಮತ್ತು ಸಾಂಗ್ಲಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಸಾವಿರಾರು ಜನ ನಿರಾಶ್ರಿತರಾಗಿದ್ದರು.
ಎರಡು ಜಿಲ್ಲೆಗಳ ಜಿಲ್ಲಾಡಳಿತ, NDRF ಜೊತೆ ಪರಿಸ್ಥಿತಿ ನಿಭಾಯಿಸಿದ ರೀತಿ ತುಂಬಾ ಟೀಕೆಗೆ ಗುರಿಯಾಗಿತ್ತು. ಈಗ, ಎರಡು ಜಿಲ್ಲೆಗಳ ಮತದಾರ ತನ್ನ ಶಕ್ತಿಯನ್ನು ತೋರಿಸಿದ್ದಾನೆ. ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ, ಮತದಾರ ಯಾವ ರೀತಿ ಮ್ಯಾನ್ಡೇಟ್ ನೀಡಬಲ್ಲ ಎನ್ನುವುದಕ್ಕೆ ಈ ಅಸೆಂಬ್ಲಿ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ. ಎರಡು ಜಿಲ್ಲೆಗಳಲ್ಲಿ ಬಿಜೆಪಿ ಧೂಳೀಪಟ..

ಕೊಲ್ಹಾಪುರ ಜಿಲ್ಲೆ
ಕೊಲ್ಹಾಪುರ ಜಿಲ್ಲೆಯಲ್ಲಿ ಬರುವ ಒಟ್ಟು ಹತ್ತು ಅಸೆಂಬ್ಲಿ ಕ್ಷೇತ್ರಗಳೆಂದರೆ, ಚಂದಗುಡ್, ಹತ್ತಕಾನಾಗಲೆ, ಇಚಲ್ ಕಾರಂಜಿ, ಕಾಗಲ್, ಕರ್ವೀರ್, ಕೊಲ್ಹಾಪುರ ಉತ್ತರ, ಕೊಲ್ಹಾಪುರ ದಕ್ಷಿಣ, ರಾಧಾನಗರಿ, ಶಾಹುವಾಡಿ ಮತ್ತು ಶಿರೋಲ್. ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು, ಮಹಾರಾಷ್ಟ್ರದಲ್ಲಿ ಕಣಕ್ಕಿಳಿದಿರುವುದು ಗೊತ್ತೇ ಇದೆ.

ಬಿಜೆಪಿ-ಶಿವಸೇನೆ ಗೆದ್ದದ್ದು ಒಂದೇ ಒಂದು ಕ್ಷೇತ್ರ
ಕೊಲ್ಹಾಪುರ ಜಿಲ್ಲಾ ವ್ಯಾಪ್ತಿಯ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಗೆದ್ದದ್ದು ಒಂದೇ ಒಂದು ಕ್ಷೇತ್ರವೆಂದರೆ, ಪ್ರವಾಹ ಸಂತ್ರಸ್ತರ ಸಿಟ್ಟು ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಶಿವಸೇನೆ, ರಾಧಾನಗರಿ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದರೆ, ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ, ಎನ್ಸಿಪಿ ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮತ್ತು ಒಂದು ಕ್ಷೇತ್ರದಲ್ಲಿ ಜೆಎಸ್ಎಸ್ ಪಕ್ಷದ ಅಭ್ಯರ್ಥಿ ಜಯ ಸಾಧಿಸಿದರು.

ಸಾಂಗ್ಲಿ ಜಿಲ್ಲೆಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರ
ಇನ್ನು ಸಾಂಗ್ಲಿ ಜಿಲ್ಲೆಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳೆಂದರೆ, ಮೀರಜ್, ಸಾಂಗ್ಲಿ, ಇಸ್ಲಾಂಪುರ, ಶಿರಾಲ, ಪಾಲುಸ್-ಕುಡೆಗಾಂ, ಖಾನ್ಪುರ, ತಾಸ್ಗನ್ - ಕವಥೇ ಮಹಾನ್ಕುಲ್, ಜ್ಯಾಟ್. ಈ ಜಿಲ್ಲೆಗಳಲ್ಲೂ, ಮೈತ್ರಿಕೂಟದ್ದು ನಿರಾಶಾದಾಯಕ ಸಾಧನೆ.

ಎನ್ಸಿಪಿ ಮೂರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಎರಡು
ಸಾಂಗ್ಲಿಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆದ್ದದ್ದು ಮೂರು ಕ್ಷೇತ್ರಗಳಲ್ಲಿ. ಇನ್ನುಳಿದ ಐದು ಕ್ಷೇತ್ರಗಳಲ್ಲಿ ಎನ್ಸಿಪಿ ಮೂರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಎರಡು ಪ್ರವಾಹ ಪೀಡಿತ ಜಿಲ್ಲೆಗಳ ಹದಿನೆಂಟು ಕ್ಷೇತ್ರ
ಒಟ್ಟಾರೆಯಾಗಿ ಎರಡು ಪ್ರವಾಹ ಪೀಡಿತ ಜಿಲ್ಲೆಗಳ ಹದಿನೆಂಟು ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆಲ್ಲಲು ಸಾಧ್ಯವಾಗಿದ್ದು ಕೇವಲ ನಾಲ್ಕು ಕ್ಷೇತ್ರಗಳನ್ನು, ಉಳಿದ ಹದಿನಾಲ್ಕು ಕ್ಷೇತ್ರಗಳು, ಕಾಂಗ್ರೆಸ್, ಎನ್ಸಿಪಿ ಸೇರಿದಂತೆ, ಇತರ ಪಕ್ಷಗಳ ಪಾಲಾಗಿದೆ.












Click it and Unblock the Notifications