'ಕೊರೊನಾ ಮುಕ್ತ ಗ್ರಾ.ಪಂ' ಸ್ಪರ್ಧೆ: ಗೆದ್ದ ಗ್ರಾಮಕ್ಕೆ 50 ಲಕ್ಷ ರೂ. ಬಹುಮಾನ
ಮುಂಬೈ, ಜೂನ್ 3: ಕೊರೊನಾ ಸೋಂಕು ಪ್ರಕರಣಗಳ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರಕಾರ ಸ್ಪರ್ಧೆಯನ್ನು ಘೋಷಿಸಿದ್ದು, ಈ ಮೂಲಕ ಗ್ರಾಮಗಳಿಗೆ ಕೊರೊನಾ ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ನಿರ್ಧರಿಸಿದೆ. ಅದಕ್ಕಾಗಿ "ಕೊರೊನಾ ಮುಕ್ತ ಗ್ರಾಮ' ಸ್ಪರ್ಧೆಯನ್ನು ಘೋಷಿಸಿದೆ.
ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಕೆಲವು ಗ್ರಾಮಗಳು ಮಾಡಿದ ಪ್ರಯತ್ನಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇದೀಗ 'ಮೈ ವಿಲೇಜ್ ಕೊರೋನಾ ಫ್ರೀ' ಉಪಕ್ರಮವನ್ನು ಪ್ರಕಟಿಸಿದ್ದಾರೆ.
ಈ ಸ್ಪರ್ಧೆ ಮೂಲಕ ಪ್ರತಿ ಕಂದಾಯ ವಿಭಾಗದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಮೂರು ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50 ಲಕ್ಷ ರೂ., ದ್ವಿತೀಯ ಸ್ಥಾನಕ್ಕೆ 25 ಲಕ್ಷ ರೂ. ಮತ್ತು ತೃತೀಯ ಸ್ಥಾನಕ್ಕೆ 15 ಲಕ್ಷ ರೂ. ನೀಡಲಾಗುವುದು. ಇನ್ನು ರಾಜ್ಯದಲ್ಲಿ ಆರು ಕಂದಾಯ ವಿಭಾಗಗಳಿದ್ದು, ಒಟ್ಟು 18 ಬಹುಮಾನಗಳು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟು ಬಹುಮಾನದ ಮೊತ್ತ 5.4 ಕೋಟಿ ರೂ. ಆಗಲಿದ್ದು, ಸ್ಪರ್ಧೆಯಲ್ಲಿ ಗೆಲ್ಲುವ ಹಳ್ಳಿಗಳಿಗೆ ಬಹುಮಾನದ ಮೊತ್ತವನ್ನು ಹಂಚಲಾಗುವುದು. ಇದನ್ನು ಆ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ. 22 ಮಾನದಂಡಗಳ ಮೇಲೆ ತೀರ್ಪನ್ನು ನಿರ್ಣಯಿಸಲಾಗುವುದು. ಗ್ರಾಮಗಳನ್ನು ನಿರ್ಣಯಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಸಿಎಂ ಹೇಳಿದರು.
ಭಾನುವಾರ ವರ್ಚುವಲ್ ಭಾಷಣದಲ್ಲಿ ಸಿಎಂ ಉದ್ಧವ್ ಠಾಕ್ರೆ, ಸೋಲಾಪುರ ಜಿಲ್ಲೆಯ ಘಾಟ್ನೆ ಗ್ರಾಮವನ್ನು ಕೊರೊನಾ ವೈರಸ್ ಮುಕ್ತವಾಗಿಡಲು ಶ್ರಮಿಸುತ್ತಿರುವ ಮಹಾರಾಷ್ಟ್ರದ ಕಿರಿಯ ಸರಪಂಚ್ 21 ವರ್ಷದ ರುತುರಾಜ್ ದೇಶ್ಮುಖ್ ಮತ್ತು ಅವರ ಕಾರ್ಯಪಡೆಯನ್ನು ಶ್ಲಾಘಿಸಿದ್ದರು.