ಇಂದು ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಅಜಿತ್ಗೆ ಉಪ ಮುಖ್ಯಮಂತ್ರಿ ಸ್ಥಾನ?
Recommended Video
ಮುಂಬೈ, ಡಿಸೆಂಬರ್ 30: ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಸಂಪುಟ ವಿಸ್ತರಣೆಗೆ ನಿರ್ಧರಿಸಿದ್ದಾರೆ. ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ಸಿಪಿಗಳ ನಡುವೆ ಕೊನೆಗೂ ಸಮನ್ವಯ ಏರ್ಪಟ್ಟಿದ್ದು, ಶರದ್ ಪವಾರ್ ಸಹೋದರ ಸಂಬಂಧ ಅಜಿತ್ ಪವಾರ್ಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
ಇದರ ಜೊತೆಗೆ ಎನ್ಸಿಪಿಗೆ ಗೃಹ, ಹಣಕಾಸು, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಗುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ನಾಟಕವಾಡಿದ್ದ ಅಜಿತ್ ಪವಾರ್ ಎನ್ಸಿಪಿಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರನ್ನು ನಿರ್ಲಕ್ಷಿಸುವುದು ಸುಲಭವಲ್ಲ, ಹೀಗಾಗಿ ಸುಮಾರು ಮೂರು ವಾರಗಳ ಸರ್ಕಸ್ಗಳ ಬಳಿಕ ಕೊನೆಗೂ ಶಿವಸೇನೆ ಹಾಗೂ ಕಾಂಗ್ರೆಸ್ ಮನವೊಲಿಸಿ ಸಚಿವ ಸ್ಥಾನ ಒದಗಿಸಲು ಶರದ್ ಪವಾರ್ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ ಅಜಿತ್ ಪವಾರ್ಗೆ ಸಂಪುಟದಲ್ಲಿ ಸ್ಥಾನ ದೊರೆಯುವುದೇ ಅಸಾಧ್ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್ ಹಾಗೂ ಶಿವಸೇನೆಯಲ್ಲಿ ಈ ಕುರಿತು ಸಾಕಷ್ಟು ವಿರೋಧಗಳಿದ್ದವು.ಈಗ ಅಜಿತ್ ಪವಾರ್ಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರಭಾವಿ ಗೃಹ ಇಲಾಖೆ ಕೂಡ ದೊರೆಯಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಉಳಿದಂತೆ ಧನಂಜಯ ಮುಂಡೆಗೆ ಹಣಕಾಸು, ಶಾಸಕಾಂಗ ಪಕ್ಷದ ನಾಯಕರಾಗಿರುವ ಜಯಂತ್ ಪಾಟೀಲ್ಗೆ ನೀರಾವರಿ, ಹಿರಿಯ ಮುಖಂಡ ಚಗನ್ ಭುಜಬಲ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.