ಮಹಾರಾಷ್ಟ್ರ ಬರಕ್ಕೆ 2,160 ಕೋಟಿ ಕೇಂದ್ರ ಹೆಚ್ಚುವರಿ ನೆರವು
ಮುಂಬೈ, ಮೇ 9: ತೀವ್ರ ಬರಗಾಲಕ್ಕೊಳಗಾಗಿರುವ ಮಹಾರಾಷ್ಟ್ರಕ್ಕೆ ಹೆಚ್ಚುವರಿಯಾಗಿ 2,160 ಕೋಟಿ ರೂ ಕೇಂದ್ರ ಸರ್ಕಾರ ನೀಡಿದೆ.
ಈಗಾಗಲೇ ಮೊದಲ ಹಂತದಲ್ಲಿ 2,088.59 ಕೋಟಿ ಆರ್ಥಿಕ ನೆರವನ್ನು ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ನೀಡಿತ್ತು. ಮಹಾರಾಷ್ಟ್ರದ 151 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು, ವಿದರ್ಭ ಸೇರಿ ಬಹುತೇಕ ಪ್ರದೇಶಗಳು ಬರದಿಂದ ಕಂಗೆಟ್ಟಿವೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್,ಕೇಂದ್ರ ಸರ್ಕಾರದಿಂದ 4,700 ಕೋಟಿ ರೂ ಆರ್ಥಿಕ ನೆರವು ದೊರೆತಿದ್ದು ಇದರಲ್ಲಿ 4,278.59 ಕೋಟಿ ರೂ ಬಿಡುಗಡೆಯಾಗಿದೆ.
ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಲಿದೆ. ಇದಕ್ಕಾಗಿ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಭಾಗಶಃ ತೆಗೆದು ಹಾಕಲು ಹಾಗೂ ದೈನಂದಿನ ಆಡಳಿತಕ್ಕೆ ಅನುವು ಮಾಡಿಕೊಡಲು ಮುಂದಾಗಿದೆ.
ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೋರಿದ್ದು, ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದೆ ಆದರೆ ರಾಜ್ಯಕ್ಕೆ ಕೇಂದ್ರ ತಂಡ ಬರಪರಿಶೀಲನೆಗೆ ಭೇಟಿ ನೀಡಬೇಕಿದ್ದು,ರಾಜ್ಯ ಸರ್ಕಾರದಿಂದಲೂ ವಿಶೇಷ ಪ್ರಯತ್ನ ಇನ್ನಷ್ಟೇ ನಡೆಯಬೇಕಿದೆ.