ಪ್ರಿಯಾಂಕಾ ಗಾಂಧಿಯನ್ನು ಮುಟ್ಟಲು ಅವರಿಗೆಷ್ಟು ಧೈರ್ಯ?: ಬಿಜೆಪಿ ನಾಯಕಿ ಕಿಡಿ
ಮುಂಬೈ, ಅಕ್ಟೋಬರ್ 5: ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಪ್ರತಿಭಟನೆ ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಟ್ಟೆ ಹಿಡಿದು ಪೊಲೀಸರು ಎಳೆದ ಘಟನೆಗೆ ಬಿಜೆಪಿ ನಾಯಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ನಾಯಕರ ಪರ ಧ್ವನಿ ಎತ್ತಿದ್ದಾರೆ.
ದೆಹಲಿ-ಉತ್ತರ ಪ್ರದೇಶ ಗಡಿ ಭಾಗದಲ್ಲಿ ನಡೆದ ಮಾತಿನ ಚಕಮಕಿ ವೇಳೆ ಪ್ರಿಯಾಂಕಾ ಗಾಂಧಿ ಅವರ ಬಟ್ಟೆ ಹಿಡಿದುಕೊಂಡ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಗ್ ಆಗ್ರಹಿಸಿದ್ದಾರೆ.
ಕಳೆದ ವರ್ಷ ಬಿಜೆಪಿ ಸೇರ್ಪಡೆಯಾಗಿದ್ದರೂ ಚಿತ್ರಾ ಅವರು ತಮ್ಮ 'ಸಂಸ್ಕಾರ'ವನ್ನು ಮರೆತಿಲ್ಲ ಎಂದು ಕಾಂಗ್ರೆಸ್ ನಾಯಕರು ಈ ಬೆಂಬಲವನ್ನು ಶ್ಲಾಘಿಸಿದ್ದಾರೆ.

'ಮಹಿಳಾ ರಾಜಕೀಯ ಮುಖಂಡರೊಬ್ಬರ ಬಟ್ಟೆಗಳ ಮೇಲೆ ಕೈ ಹಾಕಲು ಪುರುಷ ಪೊಲೀಸ್ ಸಿಬ್ಬಂದಿಗೆ ಎಷ್ಟು ಧೈರ್ಯ? ಪೊಲೀಸರು ಅವರ ಮಿತಿಯಲ್ಲಿ ವರ್ತಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇರಿಸಿರುವ ಯೋಗಿ ಆದಿತ್ಯನಾಥ್ ಅವರು ಅಂತಹ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ಚಿತ್ರಾ ವಾಗ್ ಆಗ್ರಹಿಸಿದ್ದಾರೆ.
ತಮ್ಮ ಟ್ವೀಟ್ ಜತೆಗೆ ಅವರು ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಿಯಾಂಕಾ ಗಾಂಧಿ ಅವರ ಕುರ್ತಾವನ್ನು ಹಿಡಿದುಕೊಂಡಿರುವ ಫೋಟೊವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರ ಕ್ಷಮೆ ಯಾಚಿಸಿದ್ದ ಗೌತಮ್ ಬುದ್ಧ ನಗರ ಪೊಲೀಸರು, ಘಟನೆ ಕುರಿತು ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದರು.












Click it and Unblock the Notifications