ಮುಂಬೈನ ಪ್ರಸಿದ್ಧ ಲಾಲ್ ಬಗೂಚ ರಾಜ ಗಣೇಶೋತ್ಸವ ರದ್ದು
ಮುಂಬೈ, ಜುಲೈ 01 : ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಮುಂಬೈನ ಲಾಲ್ ಬಗೂಚ ರಾಜದಲ್ಲಿ ನಡೆಯುವ ಗಣೇಶೋತ್ಸವ ರದ್ದುಗೊಳಿಸಲಾಗಿದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಇರುವ ನಗರ ಮುಂಬೈ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಲಾಲ್ ಬಗೂಚ ರಾಜ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸುಧೀರ್ ಸಾಲ್ವಿ ಈ ಕುರಿತು ಮಾಹಿತಿ ನೀಡಿದರು. "ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಈ ಬಾರಿ ಗಣೇಶೋತ್ಸವ ನಡೆಸುವುದಿಲ್ಲ" ಎಂದು ಹೇಳಿದರು.
"ಗಣೇಶೋತ್ಸವ ನಡೆಯುವ ಜಾಗದಲ್ಲಿ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಅದ್ದೂರಿಯಾಗಿ ನಡೆಯುತ್ತಿದ್ದ ಉತ್ಸವಕ್ಕೆ ಆಗುತ್ತಿದ್ದ ಖರ್ಚನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತದೆ" ಎಂದರು.

"ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಗಣೇಶೋತ್ಸವ ಸಮಿತಿ ಪರವಾಗಿ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ" ಎಂದು ಸುಧೀರ್ ಸಾಲ್ಪಿ ತಿಳಿಸಿದರು.
84 ವರ್ಷಗಳ ಇತಿಹಾಸ : ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ನಗರದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಲಾಲ್ ಬಗೂಚ ರಾಜ ಗಣೇಶೋತ್ಸವಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. 84 ವರ್ಷಗಳಿಂದ ಇಲ್ಲಿ ಗಣಪತಿ ವಿಗ್ರಹ ಕೂರಿಸಿ ಪೂಜಿಸಲಾಗುತ್ತದೆ.
ದೊಡ್ಡ ಗಣೇಶ ವಿಗ್ರಹವನ್ನು ಇಟ್ಟು ಒಟ್ಟು 11 ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಗಣೇಶೋತ್ಸವಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ದೇವರ ದರ್ಶನ ಪಡೆಯಲು ಒಂದು ಸಾಲು, ಭಕ್ತರು ಕೋರಿಕೆಗಳನ್ನು ಸಲ್ಲಿಸಲು ಮತೊಂದು ಸಾಲು ಮಾಡಲಾಗುತ್ತದೆ. ಆಗಸ್ಟ್ನಲ್ಲಿ ನಡೆಯಬೇಕಿದ್ದ ಈ ಬಾರಿಯ ಗಣೇಶೋತ್ಸವ ಈ ಬಾರಿ ಕೊರೊನಾ ಪರಿಣಾಮದಿಂದ ರದ್ದಾಗಿದೆ.
ಮಹಾರಾಷ್ಟ್ರದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1,74,761. ಇವುಗಳಲ್ಲಿ 77,658 ಪ್ರಕರಣಗಳು ಮುಂಬೈ ನಗರದಲ್ಲಿ ಇವೆ. ಮುಂಬೈ ನಗರದಲ್ಲಿ ಕೊರೊನಾ ವೈರಸ್ ಸೋಂಕು ಹತೋಟಿಗೆ ತರಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸತತ ಪ್ರಯತ್ನ ನಡೆಸುತ್ತಿದೆ.












Click it and Unblock the Notifications