ಅತೃಪ್ತ ಶಾಸಕರು ರಾತ್ರೋರಾತ್ರಿ ಮುಂಬೈನಿಂದ ಗೋವಾಗೆ ಶಿಫ್ಟ್
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅತೃಪ್ತ ಶಾಸಕರು ಹಾಗೂ ಒಬ್ಬರು ಪಕ್ಷೇತರ ಶಾಸಕರನ್ನು ಮುಂಬೈನಲ್ಲಿನ ಬಾಂದ್ರಾ ಕುರ್ಲಾದಲ್ಲಿರುವ ಸೋಫಿಟೆಲ್ ಹೋಟೆಲ್ ನಿಂದ ಗೋವಾಗೆ ಸ್ಥಳಾಂತರ ಮಾಡಲಾಗಿದೆ. ಈ ಎಲ್ಲ ಶಾಸಕರ ಜತೆಗೆ ಮುಂಬೈನ ಬಿಜೆಪಿ ಯುವ ಘಟಕದ ಅಧ್ಯಕ್ಷ ಮೋಹಿತ್ ಭಾರತೀಯಾ ಇದ್ದರು.
ಮುಂಬೈನ ಈ ವಿಲಾಸಿ ಹೋಟೆಲ್ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಈ ನಿರ್ಧಾರ ಮಾಡಲಾಗಿದೆ. ಅತೃಪ್ತ ಶಾಸಕರು ರಸ್ತೆ ಮೂಲಕ ಗೋವಾಗೆ ತೆರಳಿದ್ದು, ಸೋಮವಾರ ರಾತ್ರಿ ಮುಂಬೈನಿಂದ ಹೊರಟು ಮಂಗಳವಾರ ಬೆಳಗ್ಗೆ ಗೋವಾಗೆ ತಲುಪಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಹೊಸ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೋಮವಾರ ನೀಡಿದ ಆಹ್ವಾನವನ್ನು ಅತೃಪ್ತ ಶಾಸಕರು ತಿರಸ್ಕರಿಸಿದ್ದರು. ಪಕ್ಷೇತರ ಶಾಸಕರಾದ ನಾಗೇಶ್ ಹಾಗೂ ಶಂಕರ್ ಇಬ್ಬರೂ ಮೈತ್ರಿ ಸರಕಾರದಿಂದ ಹೊರಬಂದು ಇನ್ನಷ್ಟು ಸಂಕಷ್ಟ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆ ಎದುರಾಗಿದೆ.

ಹೇಗಾದರೂ ಮಾಡಿ ಮೈತ್ರಿ ಸರಕಾರವನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ನ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.












Click it and Unblock the Notifications