ಐಎಸ್ಐಎಸ್ ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು
ಬೆಂಗಳೂರು, ಜನವರಿ 23 : ದೇಶಾದ್ಯಂತ ಶುಕ್ರವಾರ ಎನ್ಐಎ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಎಸ್ಐಎಸ್) ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದ್ದ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಉಗ್ರರು ಮುಂಬೈನಿಂದ ಬರುವ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು.
ಶುಕ್ರವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸಿದ ದಾಳಿಯಲ್ಲಿ ಹೆಚ್ಚು ಉಗ್ರರನ್ನು ಬಂಧಿಸಿರುವುದು ಕರ್ನಾಟಕದಲ್ಲಿ. ಎಲ್ಲಾ ಶಂಕಿತ ಉಗ್ರರು ಮುಂಬೈನಲ್ಲಿ ನೆಲೆಸಿರುವ ಮುದಬ್ಬೀರ್ ಮುಷ್ತಾಖ್ (34) ಸೂಚನೆಯಂತೆ ಕಾರ್ಯಚರಣೆ ಮಾಡುತ್ತಿದ್ದರು. ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಈತ ಇತರ ಉಗ್ರರಿಗೆ ಸೂಚನೆಗಳನ್ನು ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. [ಉಗ್ರರ ಬಳಿ ಸುಧಾರಿತ ಸ್ಫೋಟಕ ಪತ್ತೆ]

ದೇಶದ ವಿವಿಧ ನಗರಗಳಲ್ಲಿ ನಡೆಸಿದ ದಾಳಿಯ ವೇಳೆ 5 ಶಂಕಿತ ಉಗ್ರರನ್ನು ಬಂಧಿಸಲಾಗಿದೆ. 9 ಶಂಕಿತ ಉಗ್ರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ. ಮುಸ್ತಾಖ್ ಯೂಸೂಫ್ ಎಂಬಾತನೊಂದಿಗೆ ನಂಟು ಹೊಂದಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ. [ನನ್ನ ಮಗ ಉಗ್ರನಲ್ಲ, ಅಮಾಯಕ : ತಾಯಿಯ ಕರುಳು]
ಯೂಸೂಫ್ ಭಟ್ಕಳ ಮೂಲದ ಸುಲ್ತಾನ್ ಅರ್ಮರ್ ಸಂಬಂಧಿಯಾಗಿದ್ದಾನೆ. ಸುಲ್ತಾನ್ ಭಾರತದ ಯುವಕರನ್ನು ಐಎಸ್ಐಎಸ್ಗೆ ನೇಮಕ ಮಾಡಿಕೊಳ್ಳಲು ಅನ್ಸರ್-ಉಲ್-ತವಾಹಿದ್ ಎಂಬ ಸಂಘಟನೆಯನ್ನು ಆರಂಭಿಸಿದ್ದ. ಸುಲ್ತಾನ್ ಹತ್ಯೆಯ ಬಳಿಕ ಆತನ ಸಹೋದರ ಶಾಫಿ ಅರ್ಮರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ.
20 ಲಕ್ಷ ಹಣ ಎಲ್ಲಿಂದ ಬಂತು? : ಮುಂಬೈನಲ್ಲಿ ಶುಕ್ರವಾರ ಬಂಧಿಸಲಾದ ಮುದಬ್ಬೀರ್ ಮುಷ್ತಾಖ್ ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದ. ಆದರೆ, ಆತನ ಬ್ಯಾಂಕ್ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಹಣವಿದೆ. ಈ ಹಣ ಎಲ್ಲಿಂದ ಬಂತು? ಎಂದು ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮುಷ್ತಾಖ್ ವಿವಿಧ ನಗರಗಳಲ್ಲಿ ಬಂಧಿಸಲಾದ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಎಲ್ಲಾ ಉಗ್ರರು ದೇಶದಲ್ಲಿ ದಾಳಿ ನಡೆಸುವ ಸಂಚನ್ನು ರೂಪಿಸಿದ್ದರು. ಜನವರಿ 26ರಂದು ವಿವಿಧ ನಗರದಲ್ಲಿ ದಾಳಿ ನಡೆಯುವ ಸಾಧ್ಯತೆ ಇತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಕರ್ನಾಟಕದಲ್ಲಿ ಬಂಧಿಸಲಾದ ಎಲ್ಲಾ ಉಗ್ರರನ್ನು ಇಂದು ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.












Click it and Unblock the Notifications