ಮುಂಬೈ ಮಹಾನಗರಿಯಲ್ಲಿ ಆರ್ಭಟಿಸಿದ ಮುಂಗಾರುಮಳೆ: ಇಬ್ಬರು ಬಲಿ
ಮುಂಬೈ, ಜೂನ್ 25: ಮುಂಬೈ ಮಹಾನಗರಿಯಲ್ಲಿ ಮುಂಗಾರಿನ ಆರ್ಭಟ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ವಾಣಿಜ್ಯನಗರಿಯಲ್ಲಿ 231.4 ಮಿ.ಮೀ. ಮಳೆಯಾಗಿದೆ. ಸುನಾಮಿ ಮುನ್ನೆಚ್ಚರಿಕೆ ನೀಡಿಲ್ಲವಾದರೂ, ಕಡಲು ಸಹ ಮಳೆಯ ಆರ್ಭಟಕ್ಕೆ ಉಕ್ಕುತ್ತಲೇ ಇದೆ.
ಈ ವರ್ಷ ಮುಂಬೈಯಲ್ಲಿ ಸುರಿದ ಅತೀ ಹೆಚ್ಚು ಮಳೆ ಇದು ಎಂದು ದಾಖಲೆ ಬರೆದಿದೆ. ಇಂದು ಸಹ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತಾದರೂ ಭೀಕರ ಮಳೆಗೆ ಇಬ್ಬರು ಅಸುನೀಗಿದ್ದಾರೆ.
ತುಸು ಹೆಚ್ಚೇ ಆಯ್ತು, ಮಹಾನಗರಿ ಮುಂಬೈಗೆ ಮುಂಗಾರಿನ ಅಭಿಷೇಕ!
ಹಲವೆಡೆ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಭಯಂಕರ ಟ್ರಾಫಿಕ್ ಜಾಮ್ ಗೆ ಜನ ಸಾಕ್ಷಿಯಾಗಬೇಕಾಗಿದೆ. ರೈಲು ಸಂಚಾರವೂ ಅಸ್ತವ್ಯಸ್ತವಾಗಿದೆ. ಪಾರ್ಕ್ ಮಾಡಲಾಗಿದ್ದ ಕೆಲವು ವಾಹನಗಳ ಮೇಲೆ ಮರಗಳು ಬಿದ್ದ ಪರಿಣಾಮ ವಾಹನಗಳು ಜಕಂ ಆಗಿವೆ. ಟ್ವಿಟ್ಟರ್ ನಲ್ಲಿ ಮುಂಬೈ ರೇನ್ಸ್ ಟ್ರೆಂಡಿಂಗ್ ಆಗಿದ್ದು, ಮುಂಬೈ ಮಳೆಯ ಚಿತ್ರಗಳು, ವಿಡಿಯೋಗಳು ಅಪ್ಡೇಟ್ ಆಗುತ್ತಲೇ ಇವೆ!
|
ಶಾಮಿನ್ ಶಫಿಕ್
ಮುಂಬೈ ನಿವಾಸಿಗಳಿಗೆ ದಕ್ಷವಾಗಿ ಕೆಲಸ ಮಾಡಬಲ್ಲ ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್ನಿನ ಅಗತ್ಯವಿದೆ ಎಂದು ಶಾಮಿನ್ ಎಂಬುವವರು ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಜೊತೆಗೆ ಮಳೆಯಿಂದಾಗಿ ಕುಸಿದ ರಸ್ತೆ, ಗೋಡೆ ಮತ್ತು ಅವಶೇಷವಾದ ವಾಹನಗಳ ಚಿತ್ರವನ್ನೂ ಅವರು ನೀಡಿದ್ದಾರೆ.
|
ಅಸಲಿ ಮಳೆ ಈಗ ಶುರುವಾಗಿದೆ!
ಮುಂಬೈಯ ಅಸಲಿ ಮಳೆ ಈಗ ಶುರುವಾಗಿದೆ. ಮಜ ತಗೊಳ್ಳಿ. ಹಾಗೆಯೇ ಎಲ್ಲ ಮುಂಬೈ ನಿವಾಸಿಗಳು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸಿ ಎಂದಿದ್ದಾರೆ ಸ್ವಪ್ನಿಲ್ ಫನ್ಸೆ.
|
ಎಲ್ಲೆಲ್ಲೂ ನೀರು,ನೀರು!
ಮುಂಬೈ ಸಮುದ್ರದಲ್ಲಿ ಬೃಹತ್ ಅಲೆ ಏಳುತ್ತಿದ್ದು, ಜನರಲ್ಲಿ ಸುನಾಮಿ ಭಯ ಆವರಿಸಿದೆ. ಚರಂಡಿಯಿಂದ ಹರಿದುಹೋಗುತ್ತಿರುವ ನೀರು ರಸ್ತೆಯ ತುಂಬೆಲ್ಲಾ ತುಂಬಿ ಸಾಕಷ್ಟು ಅವ್ಯವಸ್ಥೆ ಸೃಷ್ಟಿಸಿದೆ. ಸಮುದ್ರ ಅಲೆಗಳ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಪಲ್ಲವಿ ಪ್ರಸಾದ್.
|
ಭಯಂಕರ ಟ್ರಾಫಿಕ್!
ಮುಂಬೈಯಲ್ಲಿ ಕೊಂಚ ಮಳೆಯಾದರೆ ಸಾಕು ಟ್ರಾಫಿಕ್ ನ ಭಯಂಕರ ಸಮಸ್ಯೆ ಆರಂಭವಾಗುತ್ತದೆ. ಅಷ್ಟೇ ಅಲ್ಲ, ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ, ಹಣ್ನು ಮಾರುವವರಿಗಂತೂ ಪೇಚಾಟವೋ ಪೇಚಾಟ. ಅವರು ಬದುಕು ನಿಂತಿರುವುದೇ ಆ ದಿನದ ಆದಾಯದ ಮೇಲೆ. ಅದಕ್ಕೂ ಕೊಕ್ಕೆ ಬಿದ್ದರೆ ಅವರ ಸ್ಥಿತಿ ದೇವರಿಗೇ ಪ್ರೀತಿ!
|
ಬಿಎಂಸಿಯ ನಿರ್ಲಕ್ಷ್ಯವೇ ಎಲ್ಲಕ್ಕೂ ಕಾರಣ
ಮುಂಬೈ ಮಹಾನಗರದ ಚರಂಡಿಗಳನ್ನು ಸರಿಪಡಿಸಲು ಬಿಎಂಸಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದೆ. ಆದರೆ ಜನರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ. ಬಿಎಂಸಿಯ ನಿರಂತರ ನಿರ್ಲಕ್ಷ್ಯದಿಂದಾಗಿ ಮುಂಬೈ ನಿವಾಸಿಗಳು ಸುಖಾಸುಮ್ಮನೆ ತಮ್ಮ ಪ್ರಾಣ ಮತ್ತು ಆಸ್ತಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಮದು ಅವಿನಾಶ್ ಪಾಂಡೆ ಎಂಬುವವರು ಟ್ವೀಟ್ ಮಾಡಿದ್ದಾರೆ.