Drishyam 3: ಬಾಕ್ಸ್ ಆಫೀಸ್ನಲ್ಲಿ 'ದೃಶ್ಯಂ 3' ಅಬ್ಬರ: ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದ ಸಿನಿಮಾ
ಮಲಯಾಳಂ ಚಿತ್ರರಂಗದ ಮೋಸ್ಟ್ ಅವೈಟೆಡ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' (Drishyam 3) ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಲು ಸಿದ್ಧವಾಗಿದೆ. ನಟ ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಕಾಂಬಿನೇಶನ್ನ ಈ ಚಿತ್ರವು ಬಿಡುಗಡೆಗೆ ಮೊದಲೇ ಮುಂಗಡ ಬುಕ್ಕಿಂಗ್ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾ ವಿಶ್ಲೇಷಕರ ಪ್ರಕಾರ ಕೇರಳವೊಂದರಲ್ಲೇ ಮೊದಲ ದಿನದ ಮುಂಗಡ ಟಿಕೆಟ್ ಮಾರಾಟವು ಈಗಾಗಲೇ 2 ಕೋಟಿ ರೂಪಾಯಿ ಗಡಿಯನ್ನು ದಾಟಿದೆ.
ಕೇವಲ ಕೇರಳ ಮಾತ್ರವಲ್ಲದೆ, ವಿಶ್ವಾದ್ಯಂತ ಈ ಮೊತ್ತವು 4 ಕೋಟಿ ರೂಪಾಯಿಗಳಿಗೂ ಹೆಚ್ಚು ದಾಟುವ ಮೂಲಕ ಚಿತ್ರಕ್ಕೆ ಅದ್ಭುತ ಆರಂಭ ಸಿಕ್ಕಿದೆ. ಮೇ 21ರಂದು ಸಿನಿಮಾ ತೆರೆಕಾಣಲಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮುಗಿಲು ಮುಟ್ಟಿದೆ. ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಜೀತು ಜೋಸೆಫ್ ಚಿತ್ರದ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. "ಮೊದಲ ಎರಡು ಭಾಗಗಳಲ್ಲಿ ತನ್ನ ಹಿಂದೆ ಪೊಲೀಸರು ಬಿದ್ದಿದ್ದಾರೆ ಎಂಬುದು ಜಾರ್ಜ್ಕುಟ್ಟಿಗೆ ತಿಳಿದಿತ್ತು. ಆದರೆ ಈ ಬಾರಿ ತನ್ನ ಬೆನ್ನತ್ತಿರುವುದು ಯಾರು ಮತ್ತು ಯಾಕೆ ಎಂಬುದು ಅವನಿಗೆ ತಿಳಿದಿಲ್ಲ. ಇದೇ ಈ ಬಾರಿಯ ಕಥೆಯ ಜೀವಾಳ" ಎಂದು ಅವರು ವಿವರಿಸಿದ್ದಾರೆ.

ಹಳೆಯ ಸರಣಿಯ ನಟರಾದ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್ ಅವರೊಂದಿಗೆ ಸಿದ್ದಿಕ್, ಆಶಾ ಶರತ್ ಮತ್ತು ಮುರಳಿ ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಟ್ರೈಲರ್ ಲಾಂಚ್ ವೇಳೆ ಮಾತನಾಡಿದ ಮೋಹನ್ ಲಾಲ್, ಪ್ರೇಕ್ಷಕರಿಗೆ ಇಷ್ಟವಾದರೆ ಈ ಸರಣಿಯು 4 ಅಥವಾ 5ನೇ ಭಾಗಕ್ಕೂ ಮುಂದುವರಿಯಬಹುದು ಎಂಬ ಸುಳಿವು ನೀಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಈ ಚಿತ್ರವು ಮೇ 21ರಂದು ಜಾಗತಿಕವಾಗಿ ತೆರೆಕಾಣಲಿದೆ. ದೃಶ್ಯಂ ಸರಣಿಯ ಮೊದಲ ಎರಡು ಭಾಗಗಳು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದವು. ಈಗ ಮೂರನೇ ಭಾಗವು ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಜಾರ್ಜ್ಕುಟ್ಟಿಯ ಬುದ್ಧಿವಂತಿಕೆ ಈ ಬಾರಿ ಯಾವ ಹಂತಕ್ಕೆ ತಲುಪಲಿದೆ ಎಂಬ ನಿರೀಕ್ಷೆಯಲ್ಲಿ ಸಿನಿಪ್ರಿಯರಿದ್ದಾರೆ.
ಟ್ರೈಲರ್ನಲ್ಲಿ ಏನಿದೆ?
ಕೇರಳದ ಸಿನಿಮಾ ಪ್ರಿಯರು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದ್ದ 'ದೃಶ್ಯಂ 3' ಟ್ರೈಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದೆ. ಜಾರ್ಜ್ಕುಟ್ಟಿ ಮತ್ತು ಅವನ ಕುಟುಂಬದ ಸುತ್ತ ಮತ್ತೊಮ್ಮೆ ಕಾನೂನಿನ ಸಂಕೋಲೆ ಬಿಗಿಯಾಗುತ್ತಿರುವುದನ್ನು ಟ್ರೈಲರ್ ಸ್ಪಷ್ಟವಾಗಿ ತೋರಿಸುತ್ತಿದೆ. ಟ್ರೈಲರ್ನ ಆರಂಭದಲ್ಲೇ ಜಾರ್ಜಕುಟ್ಟಿಯ ಕುಟುಂಬಕ್ಕೆ ಎಚ್ಚರಿಕೆಯ ಮಾತು ಕೇಳಿಬರುತ್ತದೆ. "ಪೊಲೀಸರು ಮತ್ತು ಸಮಾಜದ ದೊಡ್ಡ ವರ್ಗಕ್ಕೆ ಈ ಕೇಸ್ನ ನಿಜವಾದ ಸತ್ಯವೇನೆಂದು ಈಗಾಗಲೇ ತಿಳಿದಿದೆ" ಎಂಬ ಮಾತು ಬೆಚ್ಚಿಬೀಳಿಸುವಂತಿದೆ. ಇಷ್ಟು ದಿನ ಜಾರ್ಜ್ಕುಟ್ಟಿಯ ಪರವಾಗಿದ್ದ ಜನ ಈಗ ಅವನ ವಿರುದ್ಧ ತಿರುಗುತ್ತಿದೆಯೇ ಎಂಬ ಅನುಮಾನ ಕಾಡುತ್ತದೆ.
ಪೊಲೀಸರು ಕೂಡ ಜಾರ್ಜ್ಕುಟ್ಟಿಯ ಚಾಣಾಕ್ಷತನಕ್ಕೆ ಮನಸೋತಿದ್ದಾರೆ. "ಅವನು ಪೊಲೀಸರ ಮುಂದಿನ ನಡೆಯನ್ನು ಮುಂಚಿತವಾಗಿಯೇ ಊಹಿಸಿ ಪ್ರತಿತಂತ್ರ ಹೂಡುತ್ತಾನೆ" ಎಂದು ಸ್ವತಃ ಅಧಿಕಾರಿಗಳೇ ಒಪ್ಪಿಕೊಳ್ಳುವ ದೃಶ್ಯ ಅವನ ವ್ಯಕ್ತಿತ್ವದ ತೂಕವನ್ನು ಹೆಚ್ಚಿಸಿದೆ. ಆದರೆ, ಈ ಬಾರಿ ಮೀಡಿಯಾ ಕೂಡ ಅವನ ಬೆನ್ನತ್ತಿದ್ದು, ಜಾರ್ಜಕುಟ್ಟಿಯ ಏಕಾಂತವನ್ನು ಭೇದಿಸಲು ಯತ್ನಿಸುತ್ತಿದೆ.
ಕುಟುಂಬದೊಂದಿಗೆ ಊಟ ಮಾಡುತ್ತಿರುವಾಗಲೂ ಜಾರ್ಜ್ಕುಟ್ಟಿ ಫೋನ್ನಲ್ಲಿ ಏನನ್ನೋ ಕೇಳಿಸಿಕೊಳ್ಳುತ್ತಾ ಮೌನಕ್ಕೆ ಶರಣಾಗುತ್ತಾನೆ. ಪತ್ನಿ ರಾಣಿ (ಮೀನಾ) ಕೇಳುವ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿರುವುದಿಲ್ಲ. ಇದೇ ವೇಳೆ ಟ್ರೈಲರ್ನಲ್ಲಿ 'ಆಸಿಡ್' ಬಗ್ಗೆ ಪ್ರಸ್ತಾಪವಾಗುತ್ತದೆ. "ನಾನು ಮಾಡಿದ್ದು ನನ್ನ ಮಕ್ಕಳಿಗೆ ತಿಳಿದರೆ, ಅವರು ತಮ್ಮ ತಂದೆ ಒಬ್ಬ ಅಪರಾಧಿ ಎಂದು ಭಾವಿಸುವುದಿಲ್ಲವೇ?" ಎಂದು ಜಾರ್ಜ್ಕುಟ್ಟಿ ಕೇಳುವ ಪ್ರಶ್ನೆ ಅವನ ಒಳಗಿನ ಸಂಘರ್ಷವನ್ನು ಬಿಂಬಿಸುತ್ತದೆ. ಇಷ್ಟು ವರ್ಷಗಳ ಹಳೆಯ ಸತ್ಯಗಳು ಈಗ ಆಸಿಡ್ನಂತೆ ಅವನ ಜೀವನವನ್ನೇ ಸುಡಲು ಹತ್ತಿವೆಯೇ? ಈ ಬಾರಿ ಅವನು ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಅಥವಾ ಕಾನೂನಿಗೆ ಸಿಕ್ಕಿಬೀಳುತ್ತಾನಾ? ಈ ಎಲ್ಲ ಪ್ರಶ್ನೆಗಳಿಗೆ ಮೇ 21ರಂದು ಉತ್ತರ ಸಿಗಲಿದೆ.












Click it and Unblock the Notifications