ಸ್ವಯಂ ಘೋಷಿತ ದೇವಮಾತೆ ರಾಧೇ ಮಾಗೆ ರಿಲೀಫ್
ಮುಂಬೈ, ಅ. 08: ಸ್ವಯಂ ಘೋಷಿತ ದೇವಮಾತೆ ರಾಧೇ ಮಾ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಬಾಂಬೆ ಹೈಕೋರ್ಟ್ ಗುರುವಾರ ದೇವಮಾತೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜಸ್ಟೀಸ್ ರೇವತಿ ಮೋಹಿತೆ ದೇರೆ ಅವರು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ರಾಧೇ ಮಾ ಅಲಿಯಾಸ್ ಸುಖ್ವಿಂದರ್ ಕೌರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಇದಕ್ಕೂ ಮುನ್ನ ಇದೇ ಕೋರ್ಟಿನಿಂದ ರಾಧೇ ಮಾ ಅವರು ಮಧ್ಯಂತರ ಜಾಮೀನು ಪಡೆದುಕೊಂದಿದ್ದರು.[ರಾಧೇ ಮಾಗಾಗಿ ಸ್ವಾಮೀಜಿ- ಸಾಧ್ವಿ ಬಿಗ್ ಫೈಟ್]
ರಾಧೇ ಮಾ ವರದಕ್ಷಿಣೆ ಕಿರುಕುಳ, ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದರು. ಸೆಷನ್ಸ್ ಕೋರ್ಟಿನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆಗಸ್ಟ್ 5ರಂದು 32 ವರ್ಷ ವಯಸ್ಸಿನ ಮಹಿಳೆಯೊಬ್ಬರು ರಾಧೇ ಮಾ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಬೊರಿವಿಲಿ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣ ಬಂದಿತ್ತು. ಸಿಆರ್ ಪಿಸಿ ಸೆಕ್ಷನ್ 156(3) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.
ರಾಧೇ ಮಾ ಅವರು ನನ್ನ ಪತಿ, ಅತ್ತೆ, ಮಾವ ಅವರನ್ನು ನಿಯಂತ್ರಿಸುತ್ತಿದ್ದಾರೆ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಇವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ, ಮಾನಸಿಕ ಹಿಂಸೆ ನೀಡಿದ್ದಾರೆ, ವರದಕ್ಷಿಣೆ ತರುವಂತೆ ತವರಿಗೆ ಅಟ್ಟಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದರು.
ಅದರೆ, ಕುಟುಂಬ ಕಲಹವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳದೆ, ರಾಧೇ ಮಾ ಅವರ ಮಾನ ಕಳೆಯುವ ದುರುದ್ದೇಶದಿಂದ ಅವರನ್ನು ಆರೋಪಿಯನ್ನಾಗಿಸಲಾಗಿದೆ ಎಂದು ರಾಧೇ ಮಾ ಪರ ವಕೀಲ ಅಬದ್ ಪೊಂಡಾ ವಾದಿಸಿದರು. ರಾಧೇ ಮಾ ವಿರುದ್ಧ ಯಾವುದೇ ನೇರ ಆರೋಪ ಹಾಗೂ ಅದಕ್ಕೆ ತಕ್ಕ ಸಾಕ್ಷಿ ಲಭ್ಯವಿಲ್ಲದ ಕಾರಣ ಜಾಮೀನು ಮಂಜೂರಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications