ಮುಂಬೈ ಸರಣಿ ಬಾಂಬ್ ಸ್ಪೋಟ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮುಂಬೈ ಮೇ 30: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೇ 12 ರಂದು ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಮುಂಬೈ ನಿವಾಸಿಗಳಾದ ಅಬುಬಕರ್, ಸೈಯದ್ ಖುರೇಷಿ, ಮೊಹಮ್ಮದ್ ಶೋಯಿಬ್ ಖುರೇಷಿ ಮತ್ತು ಮೊಹಮ್ಮದ್ ಯೂಸುಫ್ ಇಸ್ಮಾಯಿಲ್ನನ್ನು ಬಂಧಿಸಿತ್ತು. ಬಳಿಕ ಬಂಧಿತರನ್ನು 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ತನಿಖೆ ಸಂಬಂಧ ಮೇ 21 ರಂದು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸಿಬಿಐನ ವಿಶೇಷ ನ್ಯಾಯಾಧೀಶರಾದ ಆರ್. ಆರ್. ಭೋಸಲೆ ನಾಲ್ವರು ಆರೋಪಿಗಳನ್ನು ಜೂನ್ 13 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದರು.

ರೆಡ್ ಅಲರ್ಟ್ ನೋಟಿಸ್ ಜಾರಿ; ಆರೋಪಿಗಳು ತಮ್ಮ ಗುರುತು ಮರೆಮಾಚಿ, ನಕಲಿ ದಾಖಲೆಗಳ ಮೂಲಕ ಪಾಸ್ಪೋರ್ಟ್ ಪಡೆದು 1995 ರಲ್ಲಿ ವಿದೇಶಕ್ಕೆ ತೆರಳಿ, ಅಲ್ಲಿ ತಲೆಮರೆಸಿಕೊಂಡಿದ್ದರು. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಂಟರ್ಪೋಲ್ ರೆಡ್ ಅಲರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಹಿಂದೆ ಈ ನಾಲ್ವರು ಆರೋಪಿಗಳ ವಿಚಾರಣೆ ನಡೆಸಿದ ಸಿಬಿಐ, 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಇವರ ಪಾತ್ರ ಹಾಗೂ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ನೊಂದಿಗೆ ಇವರ ಸಂಬಂಧದ ಕುರಿತು ವಿಚಾರಣೆ ನಡೆಸಿತು.

ಈ ಆರೋಪಿಗಳು ಸರಣಿ ಬಾಂಬ್ ಸ್ಫೋಟದ ಮೊದಲು ದುಬೈನಲ್ಲಿ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮನ್ ಭೇಟಿಯಾಗಿ ಬಾಂಬ್ ಸ್ಫೋಟದ ಕುರಿತ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದರು ಎನ್ನುವ ಆರೋಪವಿದೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ನಾಲ್ವರು ಆರೋಪಿಗಳು ಭಾಗಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಇತ್ತೀಚಿಗೆ ಗುಜರಾತ್ ಪೊಲೀಸರು ಹೇಳಿದ್ದರು.
1993ರ ಮಾರ್ಚ್ನಲ್ಲಿ ಮುಂಬೈನ 12 ಸ್ಥಳಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಮೃತಪಟ್ಟಿದ್ದರು ಹಾಗೂ 1400 ಜನರು ಗಾಯಗೊಂಡಿದ್ದರು.












Click it and Unblock the Notifications