ಕಿಸಾನ್-ಮಜ್ದೂರ್ ಮಹಾಪಂಚಾಯತ್: ಯಾವ ವಿಷಯಗಳ ಬಗ್ಗೆ ಚರ್ಚೆ?
ಮುಂಬೈ ನವೆಂಬರ್ 29: ಮೂರು ವಿವಾದಿತ ಕೃಷಿ ಕಾನೂನುಗಳ ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪದ ಬಳಿಕವೂ ರೈತ ಸಂಘಟನೆಗಳು ದೆಹಲಿ ಗಡಿ ಭಾಗದಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿವೆ. ಇಂದು ಮುಂಬೈನ ಆಜಾದ್ ಮೈದಾನದಲ್ಲಿ ಸಂಯುಕ್ತ ಶೇತ್ಕಾರಿ ಕಾಮ್ಗಾರ್ ಮೋರ್ಚಾ (SSKM) ನೇತೃತ್ವದಲ್ಲಿ ಕಿಸಾನ್-ಮಜ್ದೂರ್ ಮಹಾಪಂಚಾಯತ್ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮುಂಬೈಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್, 'ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು. ಇದರಿಂದ ದೆಹಲಿಯ ಚಳವಳಿ ಹೇಗೆ ಮಾಡುವುದು ಎಂದು ನಿರ್ಧರಿಸಲು ಸಹಾಯವಾಗುತ್ತದೆ. ನಾವು ಈ ಸಭೆಗಳನ್ನು ದೇಶದಾದ್ಯಂತ ನಡೆಸಬೇಕಾಗಿದೆ' ಎಂದರು. ಜೊತೆಗೆ ಸಭೆಯಲ್ಲಿ ಚರ್ಚೆಯಾಗಲಿರುವ ಅನೇಕ ವಿಷಯಗಳ ಬಗ್ಗೆ ಟಿಕಾಯತ್ ಹೇಳಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಟಿಕಾಯತ್ ಅವರು,' ಎಂಎಸ್ಪಿ ಬೇಡಿಕೆಯ ಜೊತೆಗೆ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವುದು, ನಿರುದ್ಯೋಗ ಸೇರಿದಂತೆ ಕೃಷಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು' ಎಂದು ಹೇಳಿದರು. ವಾಸ್ತವವಾಗಿ, ನವೆಂಬರ್ 29 ರಂದು ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 ಅನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸುತ್ತದೆ. ಈಗಾಗಲೆ ಕೃಷಿ ಕಾಯಿದೆಗಳ ಹಿಂಪಡೆಯುವ ವಿಧೇಯಕವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಿಂಪಡೆಯಲು ಒಮ್ಮತಕ್ಕೆ ಬರಲಾಗಿದೆ.
Recommended Video

ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಚಳಿಗಾಲ ಅಧಿವೇಶನ ಆರಂಭವಾಗುವ ಮೊದಲ ದಿನದಿಂದಲೇ ಸಂಸತ್ ಚಲೋ (ಟ್ಯಾಕ್ಟರ್ ಮೆರವಣಿಗೆ) ನಡೆಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಇದೇ ವಾರದ ಪ್ರಾರಂಭದಲ್ಲಿ ಘೋಷಿಸಿದ್ದರು. ಪ್ರತಿದಿನ 60 ಟ್ರ್ಯಾಕ್ಟರ್ಗಳಲ್ಲಿ 1,000 ರೈತರನ್ನು ಸಂಸತ್ತಿಗೆ ಕಳುಹಿಸಿ ಕೊಡುವುದಕ್ಕೆ ರೈತರು ಯೋಜನೆ ರೂಪಿಸಿಕೊಂಡಿದ್ದರು. ಆದರೆ ಸಂಸತ್ತಿನಲ್ಲಿ ಗದ್ದಲ ಮತ್ತು ಗೊಂದಲದ ನಡುವೆ ಕಳೆದ ವರ್ಷ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಕೃಷಿ ಸಚಿವ ನರೇಂದ್ರ ತೋಮರ್ ಸೋಮವಾರ ಮಂಡಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ.
ಇನ್ನೂ ನವೆಂಬರ್ 29 ರಂದು ಸಂಸತ್ ಭವನದವರೆಗೆ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ಕಾರ್ಯಕ್ರಮವನ್ನು ರೈತರು ಸದ್ಯಕ್ಕೆ ಮುಂದೂಡಿದ್ದಾರೆ. ರೈತರ ಪರವಾಗಿ ಈ ಮಾರ್ಚ್ ಮುಂದೂಡಿದ್ದರಿಂದ ಸರ್ಕಾರಕ್ಕೆ ಸಮಯ ಸಿಕ್ಕಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಹಿಂತಿರುಗಿಸಿದ ನಂತರ, ಯುನೈಟೆಡ್ ಕಿಸಾನ್ ಮೋರ್ಚಾ ಈಗ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತದೆ.
ವಿವಾದಿತ ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಳ್ಳಬೇಕು. ಇದರ ಜೊತೆಗೆೆ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ "ನಾವು ಡಿಸೆಂಬರ್ 4ರವರೆಗೂ ಕಾದು ನೋಡುತ್ತೇವೆ, ತದನಂತರದಲ್ಲಿ ಮುಂದಿನ ನಿರ್ಧಾರದ ಬಗ್ಗೆ ಘೋಷಿಸುತ್ತೇವೆ," ಎಂದು ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.












Click it and Unblock the Notifications