'ತಲೆಗೆ ಆಳವಾದ ಗಾಯ, ಆಂತರಿಕ ರಕ್ತಸ್ರಾವ' ಸೈರಸ್ ಮಿಸ್ತ್ರಿ ಸಾವಿಗೆ ಕಾರಣ ತಿಳಿಸಿದ ವೈದ್ಯರು
ಪಾಲ್ಘರ್, ಸೆಪ್ಟೆಂಬರ್ 05: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಮುಂಬೈ ಬಳಿ ಭಾನುವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತದ ನಂತರ ಕಾಸಾದ ಸರ್ಕಾರಿ ಆಸ್ಪತ್ರೆಗೆ ಕರೆತಂದ ನಂತರ ಸೈರಸ್ ಮಿಸ್ತ್ರಿ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಸೈರಸ್ ಮಿಸ್ತ್ರಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಇದೀಗ ಸಾವಿಗೆ ಕಾರಣ ನೀಡಿದ್ದಾರೆ.
ಸೈರಸ್ ಮಿಸ್ತ್ರಿ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಅಪಘಾತದ ನಂತರ ಸೈರಸ್ ಮಿಸ್ತ್ರಿ ಅವರನ್ನು ಆಸ್ಪತ್ರೆಗೆ ಕರೆತರುವಾಗ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದಾರೆ. ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್ನಿಂದ ಮುಂಬೈಗೆ ಹೋಗುತ್ತಿದ್ದಾಗ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ನಾಲ್ವರು ಇದ್ದರು, ಅದರಲ್ಲಿ ಮಿಸ್ತ್ರಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
'ತಲೆಗೆ ಆಳವಾದ ಗಾಯ, ಆಂತರಿಕ ರಕ್ತಸ್ರಾವ'
ಸುದ್ದಿ ಸಂಸ್ಥೆ ANI ಯೊಂದಿಗೆ ಮಾತನಾಡಿದ ಡಾ. ಶುಭಂ ಸಿಂಗ್, "ಮೊದಲು ಸೈರಸ್ ಮಿಸ್ತ್ರಿ ಮತ್ತು ಜಹಾಂಗೀರ್ ದಿನಶಾ ಪಂಡೋಲ್ ಸೇರಿದಂತೆ ಇಬ್ಬರು ರೋಗಿಗಳನ್ನು ಕರೆತರಲಾಯಿತು. ಅವರನ್ನು ಕರೆತಂದ ಸ್ಥಳೀಯ ಜನರು ಸೈರಸ್ ಮಿಸ್ತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನಮಗೆ ತಿಳಿಸಿದರು. ಜಹಾಂಗೀರ್ ದಿನಶಾ ಪಂಡೋಲ್ ಸ್ಥಳದಲ್ಲೇ ಜೀವಂತವಾಗಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಕರೆತರುವಾಗ ನಿಧನರಾದರು. ನಾವು ಸಂಜೆ 5 ಗಂಟೆಯ ಸುಮಾರಿಗೆ ಅವರು ಸತ್ತಿದ್ದಾರೆ ಎಂದು ಘೋಷಿಸಿದ್ದೇವೆ.
ವೈದ್ಯರು ಹೇಳುವ ಪ್ರಕಾರ, "10 ನಿಮಿಷಗಳ ನಂತರ, ಮತ್ತೊಂದು ಆಂಬ್ಯುಲೆನ್ಸ್ ಇತರ ಇಬ್ಬರು ರೋಗಿಗಳನ್ನು ಕರೆತಂದಿತು. ಇಬ್ಬರಿಗೂ ಗಾಯಗಳಾಗಿವೆ. ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಅವರನ್ನು ರೇನ್ಬೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಅವರನ್ನು ಮುಂಬೈಗೆ ಕರೆದೊಯ್ಯಲಾಯಿತು,'' ಎಂದು ಹೇಳಿದರು.
ಜೆಜೆ ಆಸ್ಪತ್ರೆ ಮರಣೋತ್ತರ ಪರೀಕ್ಷೆ
ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ "ತಜ್ಞರ ಅಭಿಪ್ರಾಯ"ಕ್ಕಾಗಿ ಅವರನ್ನು ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸುವುದಾಗಿ ಜಿಲ್ಲಾಧಿಕಾರಿಗಳಿಂದ ಕರೆ ಬಂದಿದೆ. ಅವರಿಗೆ ಮೂಳೆ ಮುರಿತ ಮತ್ತು ತಲೆಗೆ ಗಾಯವಾಗಿದೆ. ಅವರ ಮರಣೋತ್ತರ ಪರೀಕ್ಷೆಯನ್ನು ಜೆಜೆ ಆಸ್ಪತ್ರೆಯಲ್ಲಿ ನಡೆಸಬೇಕಾಗಿದೆ ಎಂದು ನಮಗೆ ಕರೆ ಬಂದಿದೆ. ತಜ್ಞರ ಅಭಿಪ್ರಾಯಕ್ಕಾಗಿ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಎಸ್ಪಿ ಹೇಳಿದ್ದಾರೆ.
ಚಾಲಕನ ನಿಯಂತ್ರ ತಪ್ಪಿ ಅವಪಘಾತ
ಪಾಲ್ಘರ್ ಪೊಲೀಸ್ ಅಧೀಕ್ಷಕ ಬಾಳಾಸಾಹೇಬ್ ಪಾಟೀಲ್ ಪ್ರಕಾರ, ಅತಿವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಬಾಳಾಸಾಹೇಬ ಪಾಟೀಲ ಮಾತನಾಡಿ, 'ಪ್ರಾಥಮಿಕವಾಗಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ತನಿಖೆಯ ನಂತರವಷ್ಟೇ ಹೆಚ್ಚಿನ ವಿವರಗಳು ಹೊರಬರಲಿವೆ. ಆದರೆ ಮೇಲ್ನೋಟಕ್ಕೆ ಅತಿ ವೇಗ ಮತ್ತು ಚಾಲಕ ಸರಿಯಾದ ನಿರ್ಧಾರ ತೆಗೆದುಕೊಳ್ಳದ ಕಾರಣ ಅಪಘಾತ ಸಂಭವಿಸಿದೆ. ಕಾರಿನಲ್ಲಿ 4 ಜನರಿದ್ದು, ಒಬ್ಬ ಮಹಿಳೆ ಮತ್ತು ಮಹಿಳೆ ಕಾರು ಚಲಾಯಿಸುತ್ತಿದ್ದರು. ಸದ್ಯ ಮಹಿಳೆ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈರಸ್ ಮಿಸ್ತ್ರಿ ಪ್ರಮುಖ ಉದ್ಯಮಿ
ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್ಎಕ್ಸಿ (ಭಾರತ) ನಿರ್ದೇಶಕ. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆಗೆ ರಚಿಸಲಾಗಿದ್ದ ಐದು ಮಂದಿ ಸಮಿತಿಯ ಸದಸ್ಯರೂ ಆಗಿದ್ದರು. 1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು.
ಟಾಟಾ ಉಪನಾಮ ಹೊಂದದ ಐರಿಷ್ ಪ್ರಜೆ ಮಿಸ್ತ್ರಿ ಅವರು ಕೂಡಾ ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಲಂಡನ್ನ ಇಂಪಿರಿಯಲ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್, ಲಂಡನ್ನ ಬಿಸಿನೆಸ್ ಸ್ಕೂಲ್ನ ಆಡಳಿತ ನಿರ್ವಹಣೆ ಸ್ನಾತಕೋತ್ತರ ಪದವೀಧರಾಗಿದ್ದರು. ಶಪೂರ್ಜಿ ಪಲ್ಲೊಂಜಿ ಸಂಸ್ಥೆ, ಟಾಟಾ ಸನ್ಸ್ ಬೆಳವಣಿಗೆಗೆ ಕಾರಣದ ಪ್ರಮುಖ ಉದ್ಯಮಿ ಎನಿಸಿಕೊಂಡಿದ್ದರು.