ಭಕ್ತರಿಗೆ ಸಿಹಿಸುದ್ದಿ: ಆಫ್ಲೈನ್ನಲ್ಲಿ ಪ್ರತಿದಿನ 10,000 ಮಂದಿಗೆ ಶಿರಡಿ ಸಾಯಿಬಾಬಾ ದರ್ಶನ ಅವಕಾಶ
ಶಿರಡಿ, ನವೆಂಬರ್ 17: ಶಿರಡಿ ಸಾಯಿಬಾಬಾ ಭಕ್ತರಿಗೆ ಸಿಹಿಸುದ್ದಿ ಇದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಕಡಿಮೆ ಆಗುತ್ತಿದ್ದಂತೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಪ್ರತಿ ದಿನ ಹತ್ತು ಸಾವಿರ ಭಕ್ತರಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.
ಅಹ್ಮದ್ ನಗರದ ಜಿಲ್ಲಾಡಳಿತವು ಕೊರೊನಾ ವೈರಸ್ ಸೋಂಕು ಇಳಿಕೆ ಆಗುತ್ತಿರುವ ಕಾರಣದಿಂದಾಗಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಶಿರಡಿ ಸಾಯಿಬಾಬಾನ ದರ್ಶನ ಪಡೆಯಲು ಅವಕಾಶ ನೀಡಲು ನಿರ್ಧಾರ ಮಾಡಿದೆ.
ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ, ಅಧಿಕೃತ ಆದೇಶದ ಪ್ರಕಾರ, ಆಫ್ಲೈನ್ ಪಾಸ್ಗಳನ್ನು ಹೊಂದಿರುವವರು ಶಿರಡಿ ದೇಗುಲದಲ್ಲಿ ಸಾಯಿಬಾಬಾರ ದರ್ಶನವನ್ನು ಪಡೆಯಬಹುದು. ದಿನಕ್ಕೆ 10,000 ಭಕ್ತರಿಗೆ ಅವಕಾಶ ನೀಡಲು ಅಹ್ಮದ್ನಗರ ಜಿಲ್ಲಾಡಳಿತ ನಿರ್ಧರಿಸಿದೆ.
ಇನ್ನು ಆನ್ಲೈನ್ ಪಾಸ್ ಹೊಂದಿರುವ 15,000 ಭಕ್ತರಿಗೆ ದಿನಕ್ಕೆ ದರ್ಶನಕ್ಕೆ ಅವಕಾಶ ನೀಡಿ ಜಿಲ್ಲಾಡಳಿತ ಅಕ್ಟೋಬರ್ 6 ರಂದು ಆದೇಶ ಹೊರಡಿಸಿತ್ತು. ಆದರೆ ಈಗ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಇಳಿಕೆ ಕಾಣುತ್ತಿರುವ ಹಿನ್ನೆಲೆಯಿಂದಾಗಿ ಆಫ್ಲೈನ್ ಪಾಸ್ ಹೊಂದಿರುವ ಹೆಚ್ಚಿನ ಭಕ್ತರಿಗೆ ಅವಕಾಶ ನೀಡಲು ಆಡಳಿತವು ಮುಂದಾಗಿದೆ. ಇನ್ನು 15,000 ಭಕ್ತಾದಿಗಳಿಗೆ ಆನ್ಲೈನ್ ಬುಕಿಂಗ್ ಮುಂದುವರಿಯುವುದರಿಂದ, ಒಟ್ಟು 25,000 ಭಕ್ತರು ಈಗ ಪ್ರತಿದಿನ ಸಾಯಿಬಾಬಾರ ದರ್ಶನವನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಅಹಮದ್ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. "ಇಂದು ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾಣದ ಪ್ರಕಾರವಾಗಿ ಸಾಯಿಬಾಬಾ ದೇವಾಲಯ ಟ್ರಸ್ಟ್ ಎಲ್ಲಾ ಕೋವಿಡ್ ಮಾನದಂಡಗಳನ್ನು ಅನುಸರಿಸಿ ಆಫ್ಲೈನ್ ವ್ಯವಸ್ಥೆಯ ಮೂಲಕ ಪ್ರತಿದಿನ 10,000 ಭಕ್ತರಿಗೆ ಅವಕಾಶ ಕಲ್ಪಿಸಲು ಅನುಮತಿ ನೀಡಿದೆ," ಎಂದು ಅಹಮದ್ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ಆದೇಶದಲ್ಲಿ ತಿಳಿಸಿದ್ದಾರೆ.
ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರವು ಸೂಚಿಸಿದ ಎಲ್ಲಾ ಕೊರೊನಾ ವೈರಸ್ ನಿಯಮಗಳನ್ನು ಅನುಸರಿಸುವುದಾಗಿ ದೇವಾಲಯದ ಟ್ರಸ್ಟ್ ಭರವಸೆ ನೀಡಬೇಕಾಗುತ್ತದೆ ಎಂದು ಕೂಡಾ ಅಹಮದ್ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ತನ್ನ ಆದೇಶ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನು ಕೊರೊನಾ ವೈರಸ್ ಸೋಂಕಿಗೂ ಮುನ್ನ ವಿಶ್ವ ಪ್ರಸಿದ್ದ ಶಿರಡಿ ದೇಗುಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸಿ ಶಿರಡಿ ಸಾಯಿಬಾಬಾನ ದರ್ಶನ ಪಡೆಯುತ್ತಿದ್ದರು. ಆದರೆ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ದೇಗುಲವನ್ನು ಮುಚ್ಚಲಾಗಿತ್ತು. ಈಗ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ನಿರ್ದಿಷ್ಟ ಸಂಖ್ಯೆಯ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಇನ್ನು ಸೋಂಕು ಇಳಿಕೆ ಆದ ಕಾರಣದಿಂದಾಗಿ ಕಳೆದ ಎಪ್ರಿಲ್ಗೂ ಮುನ್ನ ದೇಗುಲವನ್ನು ತೆರೆಯಲಾಗಿತ್ತು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಭಾಗಶಃ ಲಾಕ್ಡೌನ್ ವಿಧಿಸಲು ನಿರ್ಧರಿಸಿತ್ತು. ಇದಾದ ಬಳಿಕ ಮತ್ತೆ ಸೋಂಕು ಇಳಿಕೆ ಆದ ಹಿನ್ನೆಲೆಯಿಂದಾಗಿ ಅಹ್ಮದ್ ನಗರ ಜಿಲ್ಲಾಡಳಿತ ಅಕ್ಟೋಬರ್ ಆರಂಭದಲ್ಲಿ ಪ್ರಸಿದ್ಧ ಶಿರಡಿ ಸಾಯಿಬಾಬಾ ದೇಗುಲ ಹಾಗೂ ಶನಿ ಶಿಂಗ್ನಾಪುರ ದೇಗುಲಗಳನ್ನು ತೆರೆಯಲು ಅವಕಾಶ ನೀಡಿದೆ. ದೇವಾಲಯ ಆಡಳಿತ ಭಕ್ತರಿಗೆ 5 ಸಾವಿರ ಪಾಸ್ಗಳನ್ನು ನೀಡಬಹುದು. 5 ಸಾವಿರ ಆನ್ಲೈನ್, 5 ಸಾವಿರ ಆಫ್ಲೈನ್ ಪಾಸ್ಗಳನ್ನು ಭಕ್ತರಿಗೆ ವಿತರಿಸಲು ಅನುಮತಿ ನೀಡಲಾಗಿತ್ತು. ಆದರೆ ಈಗ 15,000 ಭಕ್ತಾದಿಗಳಿಗೆ ಆನ್ಲೈನ್ ಬುಕಿಂಗ್ ಹಾಗೂ 10,000 ಭಕ್ತರಿಗೆ ಆಫ್ಲೈನ್ ಬುಕ್ಕಿಂಗ್ ಇದೆ.
Recommended Video
(ಒನ್ಇಂಡಿಯಾ ಸುದ್ದಿ)