ಭ್ರಷ್ಟಾಚಾರ ಪ್ರಕರಣ: ಸಿಬಿಐನಿಂದ ಅನಿಲ್ ದೇಶ್ಮುಖ್ ಆಪ್ತ ಸಹಾಯಕರ ವಿಚಾರಣೆ
ಮುಂಬೈ, ಏಪ್ರಿಲ್ 12: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಆದೇಶದಂತೆ ಪ್ರಾಥಮಿಕ ತನಿಖೆ ಆರಂಭಿಸಿರುವ ಸಿಬಿಐ, ಅನಿಲ್ ದೇಶ್ಮುಖ್ ಅವರ ಇಬ್ಬರು ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಿದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿದ್ದ ಪತ್ರದಲ್ಲಿ, ಪ್ರತಿ ತಿಂಗಳೂ ಅಕ್ರಮ ಮಾರ್ಗಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡಿ ನೀಡುವಂತೆ ಅಮಾನತಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇತರರಿಗೆ ಅನಿಲ್ ದೇಶ್ಮುಖ್ ಸೂಚನೆ ನೀಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್, 15 ದಿನಗಳ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐಗೆ ಸೂಚನೆ ನೀಡಿತ್ತು.
ಬಾಂಬ್ ಬೆದರಿಕೆ: ಸಚಿನ್ ವಾಜೆಗೆ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ
ಈ ಸಂಬಂಧ ಮುಂಬೈಗೆ ಆಗಮಿಸಿರುವ ಸಿಬಿಐ ತಂಡ, ಅನಿಲ್ ದೇಶ್ಮುಖ್ ಅವರ ಆಪ್ತ ಸಹಾಯಕರಾದ ಸಂಜೀವ್ ಪಾಲಂಡೆ ಮತ್ತು ಎಸ್ ಕುಂದನ್ ಅವರನ್ನು ಡಿಆರ್ಡಿಒದ ಅತಿಥಿ ಗೃಹಕ್ಕೆ ಕರೆಸಿಕೊಂಡು ಕೆಲವು ಪ್ರಶ್ನೆಗಳನ್ನು ಕೇಳಿದೆ. ಎಂಟುಗಂಟೆಗಳ ವಿಚಾರಣೆ ಬಳಿಕ ಅವರನ್ನು ಕಳುಹಿಸಿದೆ. ಅಲ್ಲದೆ ಎನ್ಐಎದಿಂದ ಬಂಧನಕ್ಕೆ ಒಳಗಾಗಿರುವ ಸಚಿನ್ ವಾಜೆಯ ಚಾಲಕರನ್ನು ಕೂಡ ಸಿಬಿಐ ಪ್ರಶ್ನಿಸಿದೆ. ಸಚಿನ್ ವಾಜೆ ಭೇಟಿ ನೀಡಿದ ಸ್ಥಳಗಳು, ಅವರು ಅನಿಲ್ ದೇಶ್ಮುಖ್ ಅವರನ್ನು ಭೇಟಿಯಾಗಿದ್ದರೇ, ಆಗಿದ್ದರೆ ಎಷ್ಟು ಬಾರಿ ಮಾತುಕತೆ ನಡೆಸಿದ್ದರು ಮುಂತಾದವುಗಳನ್ನು ತಿಳಿಯಲು ತನಿಖಾಧಿಕಾರಿಗಳು ಬಯಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ವಾಜೆ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಕೂಡ ಸಿಬಿಐ ವಿಚಾರಣೆ ನಡೆಸಲಿದೆ.
ಮಹಾರಾಷ್ಟ್ರದಲ್ಲಿ ಇನ್ನು 15 ದಿನದಲ್ಲಿ ಮತ್ತಿಬ್ಬರು ಸಚಿವರ ರಾಜೀನಾಮೆ: ಬಿಜೆಪಿ
ಈ ನಡುವೆ ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಮತ್ತು ಮನ್ಸುಖ್ ಹಿರೇನ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ, ಮುಂಬೈ ಅಪರಾಧ ಗುಪ್ತಚರ ಘಟಕದ ಮಾಜಿ ಅಧಿಕಾರಿ ಮತ್ತು ಸಚಿನ್ ವಾಜೆಯ ಆಪ್ತ ರಿಯಾಜ್ ಖಾಜಿಯನ್ನು ಬಂಧಿದೆ. ಅವರನ್ನು ಏ. 16ರವರೆಗೂ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ.