ಮೋದಿ ಹೆಸರಿನ ಸ್ಟೇಡಿಯಂನಲ್ಲಿ ಸೋಲುವ ಮಾತಿಲ್ಲ; ಹೇಳಿಕೆಗೆ ಠಾಕ್ರೆ ವಿರೋಧ
ಮುಂಬೈ, ಮಾರ್ಚ್ 03: ಅಹಮದಾಬಾದ್ನಲ್ಲಿನ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಈಚೆಗೆ ಮರುನಾಮಕರಣ ಮಾಡಿದ್ದು, ಈ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಸ್ಟೇಡಿಯಂ ಹೆಸರು ಬದಲಾವಣೆ ಮಾಡಿದ್ದರಿಂದ ಇನ್ನು ಮುಂದೆ ಯಾವ ಕ್ರಿಕೆಟ್ ಪಂದ್ಯದಲ್ಲೂ ಭಾರತ ಸೋಲುವುದಿಲ್ಲ. ಸ್ಟೇಡಿಯಂಗೆ ಮೋದಿ ಹೆಸರು ಇಟ್ಟಿದ್ದರಿಂದ ಸೋಲುವ ಮಾತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನೀವು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರು ಅಳಿಸಿದ್ದೀರಿ ಎಂಬುದನ್ನು ಮರೆಯಬೇಡಿ. ವೀರ ಸಾವರ್ಕರ್ಗೆ ಭಾರತ ರತ್ನ ನೀಡುವುದನ್ನು ನಿರಾಕರಿಸಿದ್ದೀರಿ ಎಂಬುದನ್ನೂ ನೆನಪಿಟ್ಟುಕೊಳ್ಳಿ. ಹೀಗಿದ್ದಾಗೂ ನಮಗೆ ಹಿಂದುತ್ವದ ಪಾಠ ಕಲಿಸಲು ಪ್ರಯತ್ನಿಸಬೇಡಿ. ನಿಮ್ಮಿಂದ ನಮ್ಮ ಪಕ್ಷ ಹಿಂದುತ್ವದ ಪಾಠ ಕಲಿಯಬೇಕಿಲ್ಲ" ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆಯೂ ಸ್ಟೇಡಿಯಂ ಹೆಸರಿಗೆ ಮೋದಿ ಹೆಸರನ್ನು ನಾಮಕರಣ ಮಾಡಿದ್ದರ ಕುರಿತು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿತ್ತು. ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ದೊರಕಿರುವ ಭಾರಿ ಬಹುಮತವು ಬೇಜವಾಬ್ದಾರಿಯಿಂದ ವರ್ತಿಸಲು ನೀಡಿರುವ ಪರವಾನಗಿ ಅಲ್ಲ ಎಂದು ಎಚ್ಚರಿಕೆ ನೀಡಿತ್ತು.
ಮೊಟೆರಾ ಕ್ರೀಡಾಂಗಣದ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಿಸಲಾಗಿದೆ. ಇಲ್ಲಿಯವರೆಗೂ ಮೆಲ್ಬರ್ನ್ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿತ್ತು. ಈಗ ಅತಿ ದೊಡ್ಡ ಮೈದಾನಕ್ಕೆ ಮೋದಿ ಹೆಸರು ಇರಿಸಲಾಗಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿತ್ತು.












Click it and Unblock the Notifications