"ಯಡಿಯೂರಪ್ಪ' ಸೂತ್ರ' ಸರ್ಕಾರ ಮಹಾರಾಷ್ಟ್ರದಲ್ಲಿ ಸಾಧ್ಯವಿಲ್ಲ"
ನವದೆಹಲಿ, ನವೆಂಬರ್ 03: ಮಹಾರಾಷ್ಟ್ರದಲ್ಲಿ ಬಹುಮತ ಪಡೆಯಲು ಸಾಧ್ಯವಾಗದೆ ಬಿಜೆಪಿ ಹಾಗೂ ಶಿವಸೇನಾ ಅಧಿಕಾರ ಸ್ಥಾಪನೆಯೂ ಸಾಧ್ಯವಾಗದೆ ಒದ್ದಾಡುತ್ತಿದೆ. ಈ ನಡುವೆ ಅಧಿಕಾರ ಹಿಡಿಯಲು ಯಾರು ಯಾವ ತಂತ್ರ ಅನುಸರಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಕರ್ನಾಟಕ ಮಾದರಿ ಸರ್ಕಾರ ರಚನೆ ಬಗ್ಗೆ ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಸರಣಿ ರಾಜೀನಾಮೆ ತಂತ್ರ ಅನುಸರಿಸಿ, ಮತ್ತೊಮ್ಮೆ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿಯಲಾಗಿದೆ. ಯಡಿಯೂರಪ್ಪ ಅವರ ಈ ಸೂತ್ರ, ಸರ್ಕಾರ ರಚನೆ ತಂತ್ರವನ್ನು ಮಹಾರಾಷ್ಟ್ರದಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು ಸಂಜಯ್ ಹೇಳಿದ್ದಾರೆ.
ಸಾಮ್ನಾದಲ್ಲಿ ಬಿಜೆಪಿಯನ್ನು ಮೊಘಲರಿಗೆ ಹೋಲಿಸಿದ ಶಿವಸೇನಾ
ರಾಜಕೀಯದಲ್ಲಿ ಈಗ ಕ್ರಿಮಿನಲ್ ಗಳು ಸೇರಿದ್ದು, ಕಳೆದ 10 ದಿನಗಳಿಂದ ಗೂಂಡಾಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಪ್ರಯೋಜನವಿಲ್ಲ. ಯಡಿಯೂರಪ್ಪ ಫಾರ್ಮುಲಾ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಶಿವಸೇನೆಯ ಸಂಸದ ಬಿಜೆಪಿಯನ್ನು ಎಚ್ಚರಿಸಿದ್ದಾರೆ.
ಆಪರೇಶನ್ ಕಮಲ ಮೂಲಕ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅನುಮತಿ ಇತ್ತು ಎಂದು ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಭೆಯ ವೇಳೆ ಯಡಿಯೂರಪ್ಪ ಹೇಳುತ್ತಿರುವ ಧ್ವನಿಮುದ್ರಣ ವೈರಲ್ ಆಗಿದ್ದು, ಈ ಆಡಿಯೊ ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡಿದೆ
"ನವೆಂಬರ್ 8ರಂದು ಈಗಿನ ಸರ್ಕಾರದ ಅವಧಿ ಮುಗಿಯುತ್ತದೆ. ನವೆಂಬರ್ 7ರೊಳಗೆ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಆಗದಿದ್ದರೆ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ" ವಿತ್ತ ಸಚಿವ ಸುಧೀರ್ ಹೇಳಿಕೆ ಸಂಚಲನ ಉಂಟು ಮಾಡಿದೆ.
2014ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. 1995 ರಿಂದ 1999ರ ಸೇನಾ- ಬಿಜೆಪಿ ಸರ್ಕಾರದ ಮೇಲೆ ಸೇನಾದ ಬಾಳಾ ಠಾಕ್ರೆ ಹೇಗೆ ಹಿಡಿತ ಹೊಂದಿದ್ದರೋ ಅದೇ ರೀತಿ ಈ ಬಾರಿಯೂ ಹಿಡಿತ ಸಿಕ್ಕಿದೆ ಎಂದು ಘೋಷಿಸಿಕೊಂಡಿದೆ. 2014ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 122 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 105 ಸ್ಥಾನ ಗಳಿಸಿದೆ. 288 ವಿಧಾನಸಭಾ ಸ್ಥಾನಗಳುಳ್ಳ ಮಹಾರಾಷ್ಟ್ರದಲ್ಲಿ ಅಧಿಕಾರ ಸ್ಥಾಪಿಸಲು 146 ಸ್ಥಾನಗಳು ಅವಶ್ಯ. ಸೇನಾ ಕೂಡಾ 2014ರಲ್ಲಿ 63 ಸ್ಥಾನ ಗೆದ್ದಿತ್ತು. ಈ ಬಾರಿ 56 ಸ್ಥಾನ ಗೆದ್ದಿದೆ. ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.