ಬಿಜೆಪಿ ಪಾಲಾದ ಎನ್ ಸಿಪಿ ಮಾಜಿ ಸಂಸದ ಮೋಹಿತೆ ಪಾಟೀಲ್
ಮುಂಬೈ, ಮಾರ್ಚ್ 21: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ -ಎನ್ ಸಿಪಿ ಮೈತ್ರಿಕೂಟಕ್ಕೆ ಮತ್ತೆ ಆಘಾತವಾಗಿದೆ. ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಬಿಜೆಪಿ ಪಾಲಾದ ಬೆನ್ನಲ್ಲೇ ಎನ್ ಸಿಪಿ ಮಾಜಿ ಸಂಸದ ರಂಜಿತ್ ಸಿಂಗ್ ಮೋಹಿತೆ ಪಾಟೀಲ್ ಅವರು ಪಕ್ಷವನ್ನು ತೊರೆದು, ಕೇಸರಿ ಪಡೆ ಜತೆ ಸೇರಿಕೊಂಡಿದ್ದಾರೆ.
ಹಿರಿಯ ಎನ್ ಸಿಪಿ ನಾಯಕಾ ವಿಜಯ್ ಸಿಂಗ್ ಮೋಹಿತೆ ಪಾಟೀಲ್ ಅವರ ಪುತ್ರ ರಂಜಿತ್ ಅವರು ಬುಧವಾರದಂದು ಬಿಜೆಪಿ ಸೇರಿದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಂಜಿತ್ ಅವರನ್ನು ಸ್ವಾಗತಿಸಿದರು. ಮಾಧಾ ಕ್ಷೇತ್ರದ ಎನ್ ಸಿಪಿಯ ಲೋಕಸಭಾ ಸದಸ್ಯ, ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ರಂಜಿತ್ ಸಿಂಗ್ ಅವರು ರಾಜ್ಯಸಭಾ ಸದಸ್ಯರಾಗಿದ್ದರು.
ಕಾಂಗ್ರೆಸ್ ವಿಪಕ್ಷ ನಾಯಕರ ಮಗ ಸುಜಯ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ 7 ಬಾರಿ ಶಾಸಕರಾಗಿರುವ ಕಾಳಿದಾಸ್ ಕೊಲಂಬ್ಕರ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ದೇವೇಂದ್ರ ಫಡ್ನವೀಸ್ ಗೆ ನನ್ನ ಬೆಂಬಲ ಎಂದಿದ್ದಾರೆ.

ಎನ್ ಸಿಪಿ ಮುಖಂಡ ಶರದ್ ಪವಾರ್ ಅವರ ಸ್ವಜನಪಕ್ಷಪಾತವನ್ನು ಖಂಡಿಸಿ, ವಿಪಕ್ಷ ನಾಯಕ ರಾಧಾಕೃಷ್ಣ ಪಾಟೀಲ್ ಹಾಗೂ ಸುಜಯ್ ಪಾಟೀಲ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ಸಿನ ಪ್ರಾಬಲ್ಯವಿರುವ ಅಹ್ಮದ್ ನಗರದಲ್ಲಿ ಈ ಬಾರಿ ನ್ಯೂರೋ ಸರ್ಜನ್ ಡಾ. ಸುಜಯ್ ವಿಖೆ ಪಾಟೀಲ್ ಅವರು ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.












Click it and Unblock the Notifications