ಮುಂಬೈ ಮೇಲೆ ದಾಳಿ ಮಾಡಲು ಲಷ್ಕರ್ ಉಗ್ರರ ಸಂಚು?
ಮುಂಬೈ, ಏ. 14 : ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ಮತ್ತೆ ಲಷ್ಕರ್ ಉಗ್ರರ ಕಣ್ಣುಬಿದ್ದಿದೆ. 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ ಉರ್ ರಹಮಾನ್ ಲಖ್ವಿ ಜೈಲಿನಿಂದ ಬಿಡುಗಡೆಯಾಗಿದ್ದು, ಉಗ್ರರು ಮುಂಬೈ ಮೇಲೆ ದಾಳಿ ನಡೆಸಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಗುಪ್ತಚರ ಇಲಾಖೆ ನಗರದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಮುಂಬೈ ಪೊಲೀಸರಿಗೆ ಸೂಚನೆ ನೀಡಿದೆ. 2008ರಲ್ಲಿ ನಡೆದಂತೆ ಸಮುದ್ರ ಮಾರ್ಗದ ಮೂಲಕ ಬಂದು ಉಗ್ರರು ದಾಳಿ ನಡೆಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. [ಲಖ್ವಿ ಜೈಲಿಂದ ಬಿಡುಗಡೆ, ಭಾರತದ ಗಡಿಯಲ್ಲಿ ಹೈಅಲರ್ಟ್]

ಮುಂಬೈಗೆ ಜಲ ಮಾರ್ಗದ ಮೂಲಕ ಬಂದು 8 ರಿಂದ 10 ಲಷ್ಕರ್ ಎ ತೊಯ್ಬಾ ಉಗ್ರರು ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ಹೇಳಿದೆ. ದೇಶದ ಇತರ ನಗರಗಳ ಮೇಲೂ ದಾಳಿಯಾಗುವ ಸಾಧ್ಯತೆ ಇದೆ. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿದೆ. [ರಕ್ತದ ಹೊಳೆ ಹರಿಸುತ್ತೇನೆಂದ ಉಗ್ರನಿಗೆ ಜಾಮೀನು]
ನಗರಕ್ಕೆ ಉಗ್ರರು ಬಂದರೆ ಪಂಚತಾರಾ ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.
ಶುಕ್ರವಾರ ಜೈಲಿನಿಂದ ಹೊರಬಂದಿದ್ದಾನೆ : 55 ವರ್ಷದ ಝಕಿ ಉರ್ ರೆಹಮಾನ್ ಲಖ್ವಿ ಸುಮಾರು ಆರು ವರ್ಷಗಳ ಜೈಲುವಾಸದ ನಂತರ ಶುಕ್ರವಾರ ಬಿಡುಗಡೆಗೊಂಡಿದ್ದಾನೆ. ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಕಾಯ್ದೆಯ ಅನ್ವಯ ಲಖ್ವಿಯನ್ನು ಬಂಧನದಲ್ಲಿಡಬೇಕು ಎಂದು ಪಾಕ್ ಸರ್ಕಾರ ಮಾಡಿದ್ದ ಮನವಿಯನ್ನು ತಳ್ಳಿಹಾಕಿದ್ದ ಲಾಹೋರ್ ಹೈಕೋರ್ಟ್ ತಕ್ಷಣ ಲಖ್ವಿಯನ್ನು ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿತ್ತು.











Click it and Unblock the Notifications