Get Updates
Get notified of breaking news, exclusive insights, and must-see stories!

Melukote Elections: ಮೇಲುಕೋಟೆ ಕ್ಷೇತ್ರದ ರಾಜಕೀಯ ಚಿತ್ರಣ, ಇಲ್ಲಿದೆ ವಿವರ

ಮೇಲುಕೋಟೆ, ಮಾರ್ಚ್‌, 25: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಗೆಲುವಿಗಾಗಿ ಭರ್ಜರಿ ಸಿದ್ಧತೆಗಳನ್ನು ನಡೆದಿದ್ದಾರೆ. ಒಂದೆಡೆ ಎಲ್ಲಾ ಪಕ್ಷಗಳ ರಾಷ್ಟ್ರೀಯ ನಾಯಕರು ಈಗಾಗಲೇ ರಾಜ್ಯ ಪ್ರವಾಸ ಆರಂಭಿಸಿದರೆ, ಮತ್ತೊಂದೆಡೆ ರಾಜ್ಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ನೆಲೆಯೂರಿ ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಮಂಡ್ಯ ಜಿಲ್ಲೆಯ ಮೇಲುಕೋಟೆ ಪರಿಚಯ ಹಾಗೂ ಇಲ್ಲಿನ ರಾಜಕೀಯ ಸ್ಥಿತಿಗತಿಯನ್ನು ತಿಳಿಯೋಣ ಬನ್ನಿ.

ಮೇಲುಕೋಟೆ ಅಂದಾಕ್ಷಣ ಮೊದಲಿಗೆ ನೆನಪಾಗುವುದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ. ಈ ದೇವಸ್ಥಾನ ಬರೀ ಮಂಡ್ಯ ಜಿಲ್ಲೆಯಲ್ಲಿ ಅಲ್ಲದೇ ಇಡೀ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದೆ. ಅದೇ ರೀತಿ ಇದು ಸಿನಿಮಾ ನಟ, ನಟಿಯರು, ಹೊರದೇಶದ ಪ್ರವಾಸಿಗರಿಗೂ ಕೂಡ ಅಚ್ಚುಮೆಚ್ಚಿನ ತಾಣವಾಗಿದೆ. ಇದರ ಪರಿಚರ ದೇಶವಿದೇಶದವರೆಗೂ ಹಬ್ಬಿದೆ.

melukote constituency map

ಮೇಲುಕೋಟೆ ಕ್ಷೇತ್ರ ಪರಿಚಯ

ಇಲ್ಲಿ ರೈತ ಸಂಘದಿಂದ ಹೋರಟಗಳು ನಡೆಯುತ್ತಲೇ ಇರುತ್ತವೆ. ಸರ್ಕಾರದ ವಿರುದ್ಧ, ರೈತರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ ರಾಜಕೀಯ ರಣರಂಗಕ್ಕೂ ಕೂಡ ಹೆಸರುವಾಸಿಯಾದ ಕ್ಷೇತ್ರವಾಗಿದೆ. ಹಾಗಾದರೆ ಇಲ್ಲಿನ ಸಂಪೂರ್ಣ ರಾಜಕೀಯ ಚಿತ್ರಣವನ್ನು ನೋಡೋಣ ಬನ್ನಿ.

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಮೇಲುಕೋಟೆ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಜಯ ಸಾಧಿಸಿದ್ದರು. ಮೇಲುಕೋಟೆ ಕ್ಷೇತ್ರದ ಚುನಾವಣಾ ಇತಿಹಾಸದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದರ್ಶನ್ ಪುಟ್ಟಣ್ಣಯ್ಯ v/s ಪುಟ್ಟರಾಜು

ಇಲ್ಲಿ 2018 ರಲ್ಲಿ ಜನತಾ ದಳ (ಜಾತ್ಯತೀತ)ದ ಸಿ.ಎಸ್.ಪುಟ್ಟರಾಜು ಗೆಲುವು ಸಾಧಿಸಿದ್ದರು. ಸ್ವರಾಜ್ ಇಂಡಿಯಾ ಪಕ್ಷದ ದರ್ಶನ್ ಪುಟ್ಟಣ್ಣಯ್ಯ 22,224 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಈ ಹಿಂದೆ ಪಾಂಡವಪುರ ವಿಧಾನಸಭಾ ಕ್ಷೇತ್ರವಾಗಿದ್ದ ಇದು 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯ ಆಯಿತು. ಬಳಿಕ ಮೇಲುಕೋಟೆಯು ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟಿತು. ಇಲ್ಲಿನ ರಾಜಕೀಯವನ್ನು ನೋಡುವುದಾದರೆ, ಆಡಳಿತ ಪಕ್ಷವಾದ ಬಿಜೆಪಿ ನಾಯಕರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮತದಾರರನ್ನು ಸೆಳೆಯುತ್ತಿದ್ದಾರೆ.

melukote

ಬಿಜೆಪಿ ವಿರುದ್ಧ ಕೈ, ದಳ ವಾಗ್ದಾಳಿ

ಮತ್ತೊಂದೆಡೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷದ ನಾಯಕರು ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರ ಎದುರಿಗೆ ಬಿಹಿರಂಗಪಡಿಸುತ್ತಿದ್ದಾರೆ. ಈ ಜಟಾಪಟಿ ನಡುವೆ ಮತದಾರರನ್ನು ತಮ್ಮತ್ತ ಸೆಳೆಯಲು ಎಲ್ಲಾ ಪ್ರಯತ್ನಗಳು ಕೂಡ ನಡೆಯುತ್ತಲೇ ಇವೆ. 1952ರಿಂದ 1983ರ ಸಮಯದಲ್ಲಿ ಕಾಂಗ್ರೆಸ್​, ರೈತ ಸಂಘ ಹೀಗೆಯೇ ಹಲಲವಾರು ನಾಯಕರು ಸ್ಪರ್ಧಿಸಿ ಸೋಲು, ಗೆಲುವು ಕಂಡಿರುವುದು ಸಾಮಾನ್ಯವಾಗಿದೆ.

ಕ್ಷೇತ್ರದಲ್ಲಿ ಇದೀಗ ಕೆ. ಎಸ್​. ಪುಟ್ಟಣ್ಣಯ್ಯನವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಪುಟ್ಟಣ್ಣಯ್ಯ ರೈತಪರ ಹೋರಾಟಗಾರರಾಗಿದ್ದು, ಇವರು 1989ರಲ್ಲಿ ಚುನಾವಣಾ ಕಣಕ್ಕೆ ಇಳಿದರು. ಆಗಿನ ಸಮಯದಲ್ಲಿ ಜೆಡಿಎಸ್​, ಕಾಂಗ್ರೆಸ್​ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಅದೇ ಸಮಯದಲ್ಲಿ ಪುಟ್ಟಣ್ಣಯ್ಯನವರು ರೈತ ಸಂಘದಿಂದ ಚುನಾವಣೆ ಕಣಕ್ಕೆ ಪ್ರವೇಶ ಮಾಡಿದರು. ಆದರೆ ಆಗ ಕಾಂಗ್ರೆಸ್‌ ಪಕ್ಷದ ಹಲಗೇಗೌಡರು ಜಯಗಳಿಸಿದ್ದರು.

ಸಿ.ಎಸ್.ಪುಟ್ಟರಾಜು ರಾಜಕೀಯದ ಹಾದಿ

ಬಳಿಕ ನಡೆದ 1994ರ ಚುನಾವಣೆಯಲ್ಲಿ ಜನತಾ ದಳ ಸಿ.ಎಸ್.ಪುಟ್ಟರಾಜು ಅವರಿಗೆ ಟಿಕೆಟ್ ನೀಡಿತ್ತು. ಆದ್ರೆ ಈ ಸಂದರ್ಭದಲ್ಲಿ ಬಿ ಫಾರಂನಲ್ಲಿ ಗೊಂದಲ ಉಂಟಾಗಿತ್ತು. ಆದ್ದರಿಂದ ಆಗ ಮತ್ತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತಾಯಿತು. ಅದೇ ಸಂದರ್ಭದಲ್ಲಿ 12,584 ಮತಗಳ ಗೆಲುವು ಸಾಧಿಸಿದ ಪುಟ್ಟಣ್ಣಯ್ಯ ತಮ್ಮ ಹೋರಾಟದ ದನಿಯನ್ನು ವಿಧಾನಸೌಧದಲ್ಲಿ ಮೊಳಗಿಸಿ ಗಮನ ಸೆಳೆದಿದ್ದರು.

ಇನ್ನು 1999ರಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಕೆಂಪೇಗೌಡಗೆ ಟಿಕೆಟ್ ನೀಡಿತ್ತು. ಅದೇ ವೇಳೆ ಅವರ ಅಣ್ಣನ ಮಗ ಸಿ.ಎಸ್‌.ಪುಟ್ಟರಾಜು ಜನತಾ ದಳದಿಂದ ಅಖಾಡಕ್ಕೆ ಇಳಿಯುತ್ತಾರೆ. ಜೊತೆಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮತ್ತೆ ರೈತ ಸಂಘದಿಂದ ಸ್ಪರ್ಧೆಗಿಳಿಯುತ್ತಾರೆ. ಈ ಮೂರು ಜನರ ಸಮರದಲ್ಲಿ ಕೊನೆಯದಾಗಿ ಕೆ.ಕೆಂಪೇಗೌಡ ಅವರೇ ಗೆಲುವು ಸಾಧಿಸುತ್ತಾರೆ.

ಬಳಿಕ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್.ಡಿ ರವಿ ಅವರಿಗೆ ಟಿಕೆಟ್ ನೀಡಿದ್ದರು, ಇದು ಪಕ್ಷಕ್ಕೆ ದೊಡ್ಡ ಹೊಡೆತ ಕೊಡುತ್ತದೆ. ಜೆಡಿಎಸ್‌ ಪಕ್ಷದಿಂದ ನಿಂದ ಸಿ.ಎಸ್ ಪುಟ್ಟರಾಜು ಅವರು ಕಣಕ್ಕಿಳಿದಿದ್ದು, ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್ ಪುಟ್ಟಣ್ಣಯ್ಯ ಅವರನ್ನು ಪರಾಭವಗೊಳಿಸುತ್ತಾರೆ.

ಮೇಲುಕೋಟೆ ಕ್ಷೇತ್ರವಾಗಿದ್ದು ಹೇಗೆ?

2008ರ ಚುನಾವಣೆ ಸಂದರ್ಭದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಎಂದು ಹೆಸರು ಪಡೆಯುತ್ತದೆ. ಸಿ.ಎಸ್.ಪುಟ್ಟರಾಜು ಜೆಡಿಎಸ್‌ನಿಂದ ಅಖಾಡಕ್ಕಿಳಿದರೆ, ಮತ್ತೊಂದೆಡೆ ಸರ್ವೋದಯ ಕರ್ನಾಟಕದಿಂದ ಕೆ.ಎಸ್.ಪುಟ್ಟಣ್ಣಯ್ಯ ಅವರು ಅಖಾಡಕ್ಕಿಳಿಯುತ್ತಾರೆ. ಆದರೆ ಅತ್ತ ಕಾಂಗ್ರೆಸ್​ನಲ್ಲಿ ಆದ ಬದಲಾವಣೆಗಳಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಗ ಬಂಡಾಯ, ಪಕ್ಷಾಂತರಗಳು ಆರಂಭವಾಗುತ್ತವೆ. ಆದರೆ ನಿರೀಕ್ಷೆಯಂತೆಯೇ ಪುಟ್ಟರಾಜು ಭರ್ಜರಿ ಗೆಲುವು ಸಾಧಿಸುತ್ತಾರೆ.

ಇನ್ನು 2013ರ ಚುನಾವಣೆಯಲ್ಲೂ ಹ್ಯಾಟ್ರಿಕ್​ ಗೆಲುವು ಸಾಧಿಸುವ ಹಂಬಲ ಪುಟ್ಟರಾಜು ಅವರದ್ದಾಗಿತ್ತು. ಆದರೆ ಪುಟ್ಟಣ್ಣಯ್ಯ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗುತ್ತಾರೆ. ಈ ಮೂಲಕ ಪುಟ್ಟಣ್ಣಯ್ಯ ಸರ್ವೋದಯ ಕರ್ನಾಟಕ ಪಕ್ಷವನ್ನು ಮತ್ತಷ್ಟು ಬಲಗೊಳಿಸುತ್ತಾರೆ.

2018ರಲ್ಲಿ ಕೆ.ಎಸ್‌.ಪುಟ್ಟಣ್ಣಯ್ಯ ನಿಧನ

2018ರ ಫೆಬ್ರವರಿ ತಿಂಗಳಲ್ಲಿ ಶಾಸಕರಾಗಿದ್ದ ಕೆ.ಎಸ್‌.ಪುಟ್ಟಣ್ಣಯ್ಯನವರು ಹೃದಯಾಘಾತದಿಂದ ನಿಧನರಾದರು. ಅದೇ ವರ್ಷ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ವಿದೇಶದಲ್ಲಿದ್ದ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಪಕ್ಷದಿಂದ ಅಖಾಡಕ್ಕೆ ಇಳಿಯುತ್ತಾರೆ. ಆಗ ಕಾಂಗ್ರೆಸ್​ ಈ ಕ್ಷೇತ್ರದಿಂದ ಅಭ್ಯರ್ಥಿ ಹಾಕದೇ ಪುಟ್ಟಣ್ಣಯ್ಯನವರ ಪುತ್ರನನ್ನು ಬೆಂಬಲಿಸಿತ್ತು.

ಇದೇ ಸಂದರ್ಭದಲ್ಲಿ ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜುರವರು ಸ್ಪರ್ಧೆಗೆ ಇಳಿಯುತ್ತಾರೆ. ಒಕ್ಕಲಿಗರ ಬೆಂಬಲ ಹಾಗೂ ಸಾಲಮನ್ನಾದಂತಹ ಭರವಸೆಗಳು ಜೆಡಿಎಸ್​ ಪಕ್ಷವನ್ನು ಜಯದ ಹಾದಿಯತ್ತ ತಲುಪಿಸಿತ್ತು.

2023ರ ಟಿಕೆಟ್​ ಆಕಾಂಕ್ಷಿಗಳು ಯಾರು?

ಕಳೆದ ವರ್ಷ ಎಚ್‌.ಡಿ.ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡಿದ್ದ ಸಿ.ಎಸ್. ಪುಟ್ಟರಾಜು ಪಕ್ಷ ತೊರೆಯುವ ಸುಳಿವು ನೀಡಿ ಶಾಕ್‌ ನೀಡಿದ್ದರು. ಆದರೆ ಕೋಪ ಶಮನವಾದ ನಂತರ ಅವರು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್‌ ಪಕ್ಷದಿಂದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಲಾರಿ ರೇವಣ್ಣ ಎಂದೇ ಪ್ರಸಿದ್ಧರಾಗಿದ್ದ ಬಿ.ರೇವಣ್ಣ ರಾಜಕೀಯ ಅಖಾಡವನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಅವರು ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಡಾ. ಎಚ್.ಎನ್. ರವೀಂದ್ರ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಎನ್.ತ್ಯಾಗರಾಜು, ಕಾಗೇಪುರ ಆನಂದ್‌ ಕುಮಾರ್, ನಾಗಭೂಷಣ್, ಸಚಿನ್ ಮಿಗ ಅರ್ಜಿ ಸಲ್ಲಿಸಿದ್ದಾರೆ.

ರೈತ ನಾಯಕರಿಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌

ಆದರೆ ಕಾಂಗ್ರೆಸ್ ಪಕ್ಷವು​ ಈ ಹಿಂದೆ ನಡೆದ ಎರಡು ಚುನಾವಣೆಗಲ್ಲಿ ರೈತ ನಾಯಕರಿಗೆ ಬೆಂಬಲ ನೀಡಿತ್ತು. ಹೀಗಿರುವಾಗ ಈ ಬಾರಿಯೂ ತನ್ನ ಹಿಂದಿನ ನಡೆಯನ್ನೇ ಮುಂದುವರೆಸುತ್ತಾ ಅಥವಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಅನ್ನುವುದನ್ನು ಕಾದುನೋಡಬೇಕಿದೆ. ಇನ್ನು ಬಿಜೆಪಿಯಿಂದ ಅಭ್ಯರ್ಥಿಯಾಗಿ ಡಾ. ಇಂದ್ರೇಶ್‌ಗೆ ಟಿಕೆಟ್ ಕೊಡುವ ಸಾಧ್ಯತೆ ಇದ್ದು, ಅವರು ಪ್ರಬಲ ಪೈಪೋಟಿ ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಕ್ಕೆ ಹೋಗಿದ್ದರು. ಆದರೆ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಿ ರೈತರ ಹೋರಾಟಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಕಳೆದೆರಡು ತಿಂಗಳಿನಿಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ಅವರಿಗೆ ಸರ್ವೋದಯ ಕರ್ನಾಟಕ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.

ಕ್ಷೇತ್ರದಲ್ಲಿನ ಮತದಾರರ ವಿವರ

ಮೇಲುಕೋಟೆ ಕ್ಷೇತ್ರದಲ್ಲಿ ಒಟ್ಟು 19,5970 ಮತದಾರರಿದ್ದು, ಇದರಲ್ಲಿ 97,592 ಪುರುಷ ಮತದಾರರಿದ್ದರೆ, 98,374 ಮಹಿಳಾ ಮತದಾರು ಇದ್ದಾರೆ. ಇದರಲ್ಲಿ ಲಿಂಗಾಯತ 17,000, ಮುಸ್ಲಿಂ 8,000, ಎಸ್​ಸಿ 28,000, ಕುರುಬ 9,000, ಎಸ್​ಟ 4,000, ಒಕ್ಕಲಿಗ 95,000, ಸವಿತಾ ಸಮಾಜ 4000, ಬ್ರಾಹ್ಮಣ 5,000, 5,000 ವಿಶ್ವಕರ್ಮ ಮತದಾರರಿದ್ದರೆ, 14,000 ಇತರೆ ಮತದಾರರಿದ್ದಾರೆ.

Melukote Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಸಿ.ಎಸ್. ಪುಟ್ಟರಾಜು ಜೆಡಿ(ಎಸ್) 66626 ಕೆ.ಎಸ್. ಪುಟ್ಟಣ್ಣಯ್ಯ (SKP) 54,681
2013 ಕೆ.ಎಸ್. ಪುಟ್ಟಣ್ಣಯ್ಯ (ಎಸ್‌ವಿಕೆಪಿ) 80,041 ಸಿ.ಎಸ್. ಪುಟ್ಟರಾಜು ಜೆಡಿ(ಎಸ್) 70,193
2008 ಸಿಎಸ್ ಪುಟ್ಟರಾಜು ಜೆಡಿ(ಎಸ್) 96,003 ದರ್ಶನ್ ಪುಟ್ಟಣ್ಣಯ್ಯ (ಸ್ವರಾಜ್ ಇಂಡಿಯಾ) 73,779
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+