ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸೋಲಿಗೆ ಕಾರಣ ಹುಡುಕುತ್ತಿರುವ ಬಾವಾ
ಮಂಗಳೂರು, ಮೇ 17: ಕರಾವಳಿಯಲ್ಲಿ ಎದ್ದ ಹಿಂದುತ್ವದ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಿದೆ. ರಂಗುರಂಗಿನ ರಾಜಕೀಯ ವ್ಯಕ್ತಿತ್ವದ ಮೂಲಕ ಮತ್ತೆ ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಮೊಯ್ದೀನ್ ಬಾವಾ ಬಿಜೆಪಿಯ ಡಾ. ಭರತ್ ಶೆಟ್ಟಿ ಎದುರು ಪರಾಭವ ಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರು
2013 ರಲ್ಲಿ ನಡೆದ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರವನ್ನು ಬಿಜೆಪಿ ಕೈಯಿಂದ ಕಾಂಗ್ರೆಸ್ ಕಸಿದುಕೊಂಡಿತ್ತು. ಬಿಜೆಪಿಯ ಅಂದಿನ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ವಿರುದ್ಧ ಕಾಂಗ್ರೆಸ್ ನ ಮೊಯ್ದೀನ್ ಬಾವಾ ಅಚ್ಚರಿಯ ಫಲಿತಾಂಶದೊಂದಿಗೆ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಮಂಗಳೂರು ಉತ್ತರದಲ್ಲಿ ಮತದಾರ ಪ್ರಭು ಕಾಂಗ್ರೆಸ್ ನ ಮೊಯ್ದೀನ್ ಬಾವಾ ಅವರನ್ನು ತಿರಸ್ಕರಿಸಿದ್ದಾನೆ.
ಕೋಮು ಸೂಕ್ಷ್ಮ ಪ್ರದೇಶ
ಮಂಗಳೂರು ಉತ್ತರ ಅಥವಾ ಸುರತ್ಕಲ್ ಪ್ರದೇಶ ಹೇಳಿ ಕೇಳಿ ಕೋಮು ಸೂಕ್ಷ್ಮ ಪ್ರದೇಶ ಎಂದೇ ಕುಖ್ಯಾತಿ ಪಡೆದಿದೆ. ಕೆಲವು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಎದ್ದ ಕೋಮು ದ್ವೇಷದ ಜ್ವಾಲೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಿಸಿತ್ತು. ಈ ಜ್ವಾಲೆಯಲ್ಲೇ ಕಾಂಗ್ರೆಸ್ ಹಾಗು ಬಿಜೆಪಿ ನಾಯಕರು ರಾಜಕೀಯ ತಂತ್ರಗಾರಿಕೆ ರೂಪಿಸಿದ್ದರು.
ಕಳೆದ ಬಾರಿ ಬಿಜೆಪಿ ವಿರೋಧಿ ಅಲೆ ಹಾಗು ಆಡಳಿತ ವಿರೋಧಿ ಅಲೆ ಇದ್ದ ಕಾರಣ ಅನಾಯಾಸವಾಗಿ ಮೊಯ್ದೀನ್ ಬಾವಾ ಗೆಲುವು ಸಾಧಿಸಿದ್ದರು. ಅದೇ ರೀತಿ ಈ ಬಾರಿಯೂ ಜನರು ತಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸವನ್ನು ಬಾವಾ ವ್ಯಕ್ತಪಡಿಸಿದ್ದರು. ಆದರೆ ಬಾವಾ ಅವರ ಲೆಕ್ಕಾಚಾರ ತಲೆಕೆಳಗಾಗುವಂತೆ ಮತದಾರರು ಈ ಬಾರಿ ತೀರ್ಪು ನೀಡಿದ್ದಾರೆ.
ಬಿಜೆಪಿಗೆ ಪ್ರಯಾಸದ ಜಯ
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಹೇಳಿಕೊಳ್ಳುವಷ್ಟು ಸುಲಭವಿರಲಿಲ್ಲ. ಹೊಸ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರನ್ನು ಕಣಕ್ಕಿಳಿಸಿ ಬಿಜೆಪಿ ಭಾರೀ ಸಾಹಸಕ್ಕೆ ಕೈ ಹಾಕಿತ್ತು. ಆದರೆ ಚುನಾವಣೆಯಲ್ಲಿ ಮತದಾರ ಕೈಬಿಟ್ಟಿಲ್ಲ. ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಅವರ ಟಿಕೆಟ್ ಕೈ ತಪ್ಪಿದ ಮುನಿಸು ಹಾಗು ಸ್ಪರ್ಧಿಸಲು ಅವಕಾಶ ದೊರಕದ ಕೃಷ್ಣ ಜೆ. ಪಾಲೇಮಾರ್ ಆಕ್ರೋಶದ ನಡುವೆಯು ಭಾರೀ ಅಂತರದಲ್ಲಿಡಾ. ಭರತ್ ಶೆಟ್ಟಿ ಗೆಲುವು ಸಾಧಿಸಿದ್ದರು.
ಈ ಹಿಂದೆ ಮಂಗಳೂರು ಉತ್ತರದಲ್ಲಿ ಗೆದ್ದು ಬಂದಿದ್ದ ಮೊಯ್ದೀನ್ ಬಾವ ವಿರುದ್ದ ಈ ಬಾರಿ ಕೇಳಿ ಬರುತ್ತಿದ್ದ ದೊಡ್ಡ ಆಪಾದನೆಯೆಂದರೆ ಅವರು ಒಂದು ವರ್ಗವನ್ನು ತುಷ್ಟಿಕರಣ ಮಾಡುತ್ತಿದ್ದಾರೆ ಎನ್ನುವುದು. ಅಲ್ಪಸಂಖ್ಯಾತರ ಪರ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಅವರ ಮೇಲಿನ ಆರೋಪವಾಗಿತ್ತು.
ಹಿಂದೂಗಳನ್ನು ಮನ ಮುಟ್ಟುವ ಪ್ರಯತ್ನ
ಆದರೆ ಈ ಆಪಾದನೆಗಳೆಲ್ಲ ಸುಳ್ಳು ಎಂದು ಬಿಂಬಿಸಲು ಬಾವಾ ಅವರು ದೈವಸ್ಥಾನಗಳ ರಸ್ತೆಗಳಿಗೆ ಅನುದಾನವನ್ನು ನೀಡುವ ಮೂಲಕ, ದೈವಗಳ ಪ್ರಸಾದಗಳನ್ನು ಸ್ವೀಕರಿಸುವ ಮೂಲಕ ಹಿಂದೂಗಳ ಮನಮುಟ್ಟುವ ಪ್ರಯತ್ನ ನಡೆಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಣದ ಆಮಿಷ ಹೆಚ್ಚಾಗಿ ಪ್ರಭಾವ ಬೀರುವುದಿಲ್ಲ. ಇಲ್ಲಿ ಏನಿದ್ದರೂ ಪಕ್ಷ ಹೋರಾಟ ಮುಖ್ಯ. ಆದರೆ ಶಾಸಕ ಮೊಯ್ದಿನ್ ಬಾವ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಂಚಿದ್ದು, ಸೀರೆ ಹಂಚಿದ್ದು ಸಾಕಷ್ಟು ಸುದ್ದಿಯಾಗಿತ್ತು. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಲಕ್ಷಾಂತರ ರೂಪಾಯಿ ತನ್ನ ಸ್ವಂತ ದುಡ್ಡನ್ನು ಖರ್ಚು ಮಾಡಿ ಮಾಡಿದ ದಾನ ಚುನಾವಣೆಯಲ್ಲಿ ಫಲ ನೀಡಲಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೈ ಹಿಡಿಯದ ರಾಹುಲ್ ಪ್ರಚಾರ
ಮಂಗಳೂರು ಉತ್ತರ ಕ್ಷೇತದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದು ಬಹಿರಂಗ ಪ್ರಚಾರ ನಡೆಸಿದರೂ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆ ಉಳಿಸಲಾಗಲಿಲ್ಲ. ಕಾಂಗ್ರೆಸ್ ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊಯ್ದೀನ್ ಬಾವಾ ಭಾರೀ ಅಂತರದಿಂದ ಸೋಲನುಭವಿಸಿದರು.
ಬಿಜೆಪಿಯ ಈ ಫಲಿತಾಂಶಕ್ಕೆ ಸುರತ್ಕಲ್ ನಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣ ಒಂದು ಕಾರಣವಾದರೆ ಇನ್ನೊಂದು ಕಾರಣ ಮೋದಿ ಹವಾ ಎಂದು ಹೇಳಲಾಗುತ್ತಿದೆ. ಈ ಎರಡು ಕಾರಣಗಳು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದುತ್ವದ ಮತಗಳನ್ನು ಭದ್ರಗೊಳಿಸಲು ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.