ಗಡಿದಾಟಿ ಬಂದವರನ್ನು ಕರೆತಂದು ಸರ್ಕಾರ ಫೋಸ್ ನೀಡುತ್ತಿದೆ; ಖಾದರ್
ಮಂಗಳೂರು, ಮಾರ್ಚ್ 06; " ಉಕ್ರೇನ್ ಗಡಿದಾಟಿದ ವಿದ್ಯಾರ್ಥಿಗಳನ್ನು ಕರೆತಂದು ಕೇಂದ್ರ ಸರ್ಕಾರ ರಕ್ಷಣೆ ಮಾಡಿದ ಫೋಸ್ ನೀಡುತ್ತಿದೆ" ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು. ಟಿ. ಖಾದರ್ ಆರೋಪಿಸಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಿರ್ಣಯ ಆಗಿರೋದು ರಾತ್ರಿ ಹಗಲಿನ ನಡುವೆ ನಿರ್ಧಾರ ಆಗಿರೋದು ಅಲ್ಲ. ಒಂದು ತಿಂಗಳ ಮೊದಲೇ ಯುದ್ಧ ಆಗುತ್ತದೆ ಅಂತಾ ಗೊತ್ತಿತ್ತು. ಆದರೂ ಭಾರತೀಯ ರಾಯಭಾರಿ ಕಛೇರಿ ಮೊದಲೇ ಮಕ್ಕಳನ್ನು ರಕ್ಷಣೆ ಮಾಡಲಿಲ್ಲ ಏಕೆ?" ಎಂದು ಪ್ರಶ್ನಿಸಿದರು.
"ಉಕ್ರೇನ್ನಿಂದ ವಾಪಸ್ ಬಂದ ವಿದ್ಯಾರ್ಥಿಗಳನ್ನು ಕೇಳಿದರೆ ಅಲ್ಲಿ ಎದುರಿಸಿದ ಕಷ್ಟ ಏನು ಎಂದು ಗೊತ್ತಾಗುತ್ತದೆ. ವಿದ್ಯಾರ್ಥಿಗಳು ಜೀವ ಕೈ ಯಲ್ಲಿ ಹಿಡಿದುಕೊಂಡು ನಡೆದುಕೊಂಡೇ ಗಡಿ ದಾಟಿದ್ದಾರೆ. ಆದರೆ ಸರ್ಕಾರ ಗಡಿ ದಾಟಿದ ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಕರೆತಂದು ರಕ್ಷಣೆ ಮಾಡಿದ ಫೋಸ್ ನೀಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.

"ಉಕ್ರೇನ್ ಯುದ್ಧ ಸಂದರ್ಭದಲ್ಲೂ ಬೇರೆ ದೇಶದ ವಿದ್ಯಾರ್ಥಿಗಳಿಗೆ ಉಕ್ರೇನ್ನಿಂದ ಹೊರಬರಲು ಸುರಕ್ಷಿತ ದಾರಿ ಸಿಕ್ಕಿದೆ. ಆದರೆ ಭಾರತಕ್ಕೆ ಮಾತ್ರ ಇದು ಸಾಧ್ಯವಾಗಿಲ್ಲ. ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ನಲ್ಲಿ ಥಳಿಸಲಾಗಿದೆ. ಭಾರತ ಯಾರ ಜೊತೆಯೂ ಸರಿಯಿಲ್ಲ. ಬೇರೆ ದೇಶದವರ ಜೊತೆ ನಮ್ಮ ಸಂಬಂಧ ಚೆನ್ನಾಗಿ ಇಲ್ಲ. ರಾಜತಾಂತ್ರಿಕತೆ ಮತ್ತು ವಿದೇಶಾಂಗ ವ್ಯವಹಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ" ಎಂದು ಯು. ಟಿ. ಖಾದರ್ ದೂರಿದರು.
"ಕೇಂದ್ರ ಸರ್ಕಾರ ಆಚಾರದ ಸರ್ಕಾರ ಅಲ್ಲ. ಇದು ಕೇವಲ ಪ್ರಚಾರದ ಸರ್ಕಾರ ಆಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಂಕಷ್ಟದಲ್ಲಿದ್ದರೂ, ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲ ಆಗಿದೆ. ಪ್ರಧಾನಿ ಒಂದು ಫೋನ್ ಮಾಡಿದರೆ ಯುದ್ಧ ನಿಲ್ಲುತ್ತದೆ ಅಂತಾ ಅವರ ಹಿಂಬಾಲಕರು ಹೇಳುತ್ತಾರೆ. ಆದರೆ ಈಗ ಮೋದಿ ಯಾಕೆ ಫೋನ್ ಮಾಡಿಲ್ಲ. ಈಗ ಯಾಕೆ ಮೋದಿ ಯುದ್ಧ ನಿಲ್ಲಿಸಿಲ್ಲ?" ಎಂದು ವ್ಯಂಗ್ಯವಾಡಿದರು.
ನಿರಾಸೆ ಮೂಡಿಸಿದ ಬಜೆಟ್; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಚೊಚ್ಚಲ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಯು. ಟಿ. ಖಾದರ್, "ರಾಜ್ಯ ಸರ್ಕಾರದ ಬಜೆಟ್ ಎಲ್ಲರಿಗೂ ನಿರಾಸೆ ತಂದಿದೆ. ಸಾರಾಯಿ ಮತ್ತು ಸಾಲದ ಮೇಲೆ ಬೊಮ್ಮಾಯಿ ಬಜೆಟ್ ಅವಲಂಬಿತವಾಗಿದೆ. ಈ ಬಜೆಟ್ ರಿವರ್ಸ್ ಗೇರ್ ಬಜೆಟ್ ಆಗಿದೆ. ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಈ ಬಜೆಟ್ ಹಿಂದಕ್ಕೆ ಕೊಂಡೊಯ್ಯಲಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸಾಲ ಬಿಟ್ಟು ಬೇರೆ ಏನೂ ಮಾಡಿಲ್ಲ. 2018ರವರೆಗೆ ರಾಜ್ಯದಲ್ಲಿ ಸಾಲದ ಪ್ರಮಾಣ ಕಡಿಮೆ ಇತ್ತು. ಆದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಲದ ಪ್ರಮಾಣ ದುಪ್ಪಟ್ಟಾಗಿದೆ" ಎಂದರು.
"ರಾಜ್ಯ ಬಜೆಟ್ನಲ್ಲಿ ಕರಾವಳಿ ಭಾಗಕ್ಕೆ ಏನೂ ದಕ್ಕಿಲ್ಲ. ಈ ಬಜೆಟ್ನಲ್ಲಿ ಕರಾವಳಿಗೆ ಒಂದೇ ಒಂದು ಹೊಸ ಯೋಜನೆಗಳು ಸಿಕ್ಕಿಲ್ಲ. ಕರಾವಳಿ ಪ್ರದೇಶದ ಜನರಿಗೆ ಇದು ಮೋಸದ ಮತ್ತು ದೋಖಾದ ಬಜೆಟ್ ಆಗಿದೆ. ರಾಜ್ಯ ಸರ್ಕಾರ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅಂಗವಿಕಲವಾಗಿದೆ" ಎಂದು ಟೀಕಿಸಿದರು.
"ಉಕ್ರೇನ್ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಮೃತದೇಹವನ್ನು ತರಲು ಸರ್ಕಾರಕ್ಕೆ ಇನ್ನು ಸಾಧ್ಯವಾಗಿಲ್ಲ. ನವೀನ್ ಮೃತದೇಹ ತರುವ ಕನಿಷ್ಠ ಪ್ರಯತ್ನವೂ ಸರ್ಕಾರದಿಂದ ಆಗಿಲ್ಲ. ನವೀನ್ ಮೃತದೇಹ ಬದಲು ಎಂಟು ಮಂದಿ ಪ್ಯಾಸೆಂಜರ್ ಬರಬಹುದು ಅಂತಾ ಬಿಜೆಪಿ ಶಾಸಕರೊಬ್ಬರು ಉಡಾಫೆಯ ಉತ್ತರ ನೀಡಿದ್ದಾರೆ. ಮಗನನ್ನು ಕಳೆದುಕೊಂಡ ನೋವು ಕರುಣೆ ಇದ್ದವರಿಗೆ ಅರ್ಥ ಆಗುತ್ತದೆ. ಕರುಣೆ ಇಲ್ಲದವರಿಗೆ ಇದೆಲ್ಲಾ ಅರ್ಥ ಆಗಲ್ಲ. ಕೊನೆ ಪಕ್ಷ ಸರ್ಕಾರ ಅಧಿಕೃತವಾಗಿ ಮೃತದೇಹ ತರಲು ಸಾಧ್ಯ ಇಲ್ಲ ಎಂದು ನೇರವಾಗಿ ಹೇಳಲಿ" ಎಂದರು.












Click it and Unblock the Notifications