ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯಲು ಮುಹೂರ್ತ ಫಿಕ್ಸ್
ಮಂಗಳೂರು, ಅಕ್ಟೋಬರ್ 18: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ವಿವಾದ ಮತ್ತೆ ತೀವ್ರಗೊಂಡಿದೆ. ಈ ಟೋಲ್ ಗೇಟ್ ಅಕ್ರಮ ಎಂದು ಸಾಕಷ್ಟು ಬಾರಿ ಹೋರಾಟ ನಡೆಸಿದ್ದ ಹೋರಾಟಗಾರರು ಇಂದು (ಅಕ್ಟೋಬರ್ 18) ಟೋಲ್ ಗೇಟ್ ಅನ್ನು ನೇರ ಕಾರ್ಯಾಚರಣೆ ಮಾಡಿ ಕಿತ್ತೆಸೆಯಲು ತೀರ್ಮಾನಿಸಿದ್ದಾರೆ.
ಸುರತ್ಕಲ್ ಎನ್ಐಟಿಕೆ ಟೋಲ್ ಪ್ಲಾಜಾ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಹೋರಾಟ ಮಾಡಿ ಸುಸ್ತಾದ ಹೋರಾಟಗಾರರು ನೇರ ಕಾರ್ಯಾಚರಣೆಯ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಆದರೆ ಪೊಲೀಸರು ಈಗಾಗಲೇ ನೋಟಿಸ್ ನೀಡಿ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.
Breaking; ಶಾಸಕ ಹರೀಶ್ ಪೂಂಜಾಗೆ ಬೆದರಿಕೆ, ಸಿಐಡಿ ತನಿಖೆಗೆ ಆದೇಶ
60 ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್ಗೇಟ್ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್ಗೇಟ್ ಅಕ್ರಮ ಎಂಬುದು ಟೋಲ್ ವಿರೋಧಿ ಹೋರಾಟಗಾರರ ಆರೋಪವಾಗಿದೆ.
ಟೋಲ್ ಗೇಟ್ ಕಿತ್ತೆಸೆಯಲು ಹೋರಾಟಗಾರರ ನಿರ್ಧಾರ
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್ ಗೇಟ್, ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. ಆದರೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾದ ಟೋಲ್ ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು, ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಕ್ಟೋಬರ್18ರಂದು ಹೋರಾಟಗಾರರೇ ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್ ಅನ್ನು ಕಿತ್ತೆಸೆಯಲು ತೀರ್ಮಾನಿಸಿದ್ದಾರೆ.
ಸುರತ್ಕಲ್ ಟೋಲ್ ತೆರವಿಗೆ 20 ದಿನ ಸಮಯ ಕೊಡಿ; ನಳಿನ್ ಕುಮಾರ್ ಕಟೀಲ್
ಸುರತ್ಕಲ್ ಟೋಲ್ ಗೇಟ್ ತೆರವಿಗೆ ಜನಪ್ರತಿನಿಧಿಗಳ ಭರವಸೆ
ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು 60 ಕಿಲೋ ಮೀಟರ್ ಒಳಗಿನ ಎಲ್ಲಾ ಟೋಲ್ ಗೇಟ್ಗಳನ್ನು 90 ದಿನಗಳೊಳಗೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಹೇಳಿದ್ದರು. ಭಾರತದಲ್ಲಿ ಈ ರೀತಿ 187 ಟೋಲ್ ಬೂತ್ಗಳಿದ್ದು ಕರ್ನಾಟಕದಲ್ಲಿ 28 ಟೋಲ್ ಗೇಟ್ಗಳಿವೆ. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕರು ಸುರತ್ಕಲ್ ಟೋಲ್ ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡುವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದು, ಟೋಲ್ ತೆರವಿಗೆ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ನೇರ ಕಾರ್ಯಾಚರಣೆಯ ಪ್ರಯತ್ನಕ್ಕೆ ಹೋರಾಟಗಾರರು ಮುಂದಾಗಿದ್ದಾರೆ.
ಕಾನೂನು ಕೈಗೆತ್ತಿಕೊಂಡರೆ ಸೂಕ್ತ ಕ್ರಮದ ಎಚ್ಚರಿಕೆ
ಈ ನಡುವೆ ಪೊಲೀಸರು ಪ್ರಮುಖ 100ಕ್ಕೂ ಹೆಚ್ಚು ಹೋರಾಟಗಾರರಿಗೆ ನೋಟಿಸ್ ನೀಡಿ ಬಾಂಡ್ ಪಡೆಯಲು ಮುಂದಾಗಿದ್ದರು.ಆದರೆ ಇದಕ್ಕೆ ಜಗ್ಗದ ಹೋರಾಟಗಾರರು ಇಂದು ಕಾರ್ಯಾಚರಣೆಯ ಮಾಡಿಯೇ ಸಿದ್ಧ ಎಂದಿದ್ದಾರೆ. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಹೋರಾಟಗಾರರನ್ನು ತಡೆಯುವ ಪ್ರಯತ್ನ ಮಾಡಲಿದ್ದಾರೆ. ಕಾನೂನು ಕೈಗೆತ್ತಿಕೊಂಡರೆ ಕ್ರಮಕ್ಕೆ ಸೂಚಿಸಲಾಗಿದೆ. ಈ ನಡುವೆ ಜಿಲ್ಲಾಧಿಕಾರಿ ಈಗಾಗಲೇ ಸಭೆ ನಡೆಸಿ ಈ ತಿಂಗಳ ಅಂತ್ಯಕ್ಕೆ ಈ ಟೋಲ್ ಗೇಟ್ ಅನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.
ಹೋರಾಟಗಾರರನ್ನು ತಡೆಯಲು ಪೊಲೀಸರು ಸಜ್ಜು
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ನಿರ್ಣಾಯಕ ಹೋರಾಟ ಹಿನ್ನೆಲೆಯಲ್ಲಿ ಟೋಲ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ಸದಸ್ಯರು ಇಂದು ಟೋಲ್ ಗೇಟ್ ಅನ್ನು ಕಿತ್ತೆಸೆಯಲು ಪ್ರತಿಭಟನೆ ನಡೆಸುವುದಾಗಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆಯಿಂದಲೇ ಸುರತ್ಕಲ್ ಟೋಲ್ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಹೋರಾಟಗಾರರನ್ನು ತಡೆಯಲು ಪೊಲೀಸರು ಸಜ್ಜಾಗಿದ್ದಾರೆ.