ಚುನಾವಣೆಯಲ್ಲಿ ಬಿಜೆಪಿಗೆ ಅಪಪ್ರಚಾರವೇ ಬಂಡವಾಳ: ರಮಾನಾಥ್ ರೈ ಕಿಡಿ
ಮಂಗಳೂರು, ಮೇ 08: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಯಾವುದೇ ಮತೀಯ ಸಂಘಟನೆಗಳೊಂದಿಗೆ ಕೈ ಜೋಡಿಸಿಲ್ಲ; ಒಪ್ಪಂದ ಮಾಡಿಕೊಂಡಿಲ್ಲ. ಎಸ್ ಡಿಪಿಐ ಅವರನ್ನು ನಮಗೆ ಬೆಂಬಲಿಸಿ ಎಂದು ನಾವು ಹೇಳಿಲ್ಲ. ಆದರೆ ಅವರೇ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಚಿವ ರಮಾನಾಥ್ ರೈ ತಿಳಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅವರು ಕಾಂಗ್ರೆಸ್ ವಿರುದ್ದ ಅಪ ಚಾರ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭಿವೃದ್ದಿಯ ವಿಚಾರವನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ. ಆದರೆ ಬಿಜೆಪಿಯವರು ಕೇವಲ ಅಪಪ್ರಚಾರವನ್ನೆ ಚುನಾವಣೆಯಲ್ಲಿ ತಮ್ಮ ಬಂಡವಾಳವಾಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಪರ ಘೋಷಣೆ ಹೆಚ್ಚಾಗುತ್ತಿದ್ದಂತೇ ಸಿಟ್ಟಿನಿಂದ ಕಾಲ್ಕಿತ್ತ ಸಚಿವ ರೈ
ಅಪಪ್ರಚಾರದ ಮೂಲಕ ಬಿಜೆಪಿ ಗೆಲ್ಲುವ ವಿಶ್ವಾಸ ಹೊಂದಿದೆ ಎಂದು ವ್ಯಂಗ್ಯವಾಡಿದ ಅವರು, ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 8 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅದರೆ ಈ ಬಾರಿ 8ಕ್ಕೆ 8 ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯಿತು. ಈ ಬಾರಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜನರು ಹಿಂದೆಂದೂ ಕಾಣದ ಅಭಿವೃದ್ದಿ ಕಂಡಿದ್ದಾರೆ. ರಾಜ್ಯ ಸರಕಾರದ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಆದರೆ ಬಿಜೆಪಿ ಮುಖಂಡರು ಕಾಂಗ್ರೆಸ್ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಅವರು ಕಿಡಿಕಾರಿದರು.
ಬಿಜೆಪಿ ಮುಖಂಡರಿಗೆ ಅಭಿವೃದ್ದಿಯ ಯಾವುದೇ ಅಜೆಂಡಾ ಇಲ್ಲ. ಅವರಿಗಿರುವುದು ಕೇವಲ ಸುಳ್ಳು ಅಪಪ್ರಚಾರ ಅಜೆಂಡಾ ಮಾತ್ರ ಎಂದು ಅವರು ಆರೋಪಿಸಿದರು.
ಈ ಚುನಾವಣೆಯಲ್ಲಿ ಕಳೆದ 5 ವರ್ಷದ ಮೌಲ್ಯ ಮಾಪನದ ಆಧಾರದ ಮೇಲೆ ಜನರು ಮತ ಚಲಾಯಿಸುತ್ತಾರೆ ಎಂದು ಹೇಳಿದ ಅವರು ಬಂಟ್ವಾಳ ಕ್ಷೇತ್ರದಲ್ಲಿ ನನಗೆ ಹಿಂದೂಗಳ ಮತ ಬೇಡ ಎಂದು ನಾನು ಎಲ್ಲಿಯೂ ಹೇಳಲಿಲ್ಲ. ಆದರೆ ಬಿಜೆಪಿ ಮುಖಂಡರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗೆ ಪ್ರಮಾಣಿತೆ ಇಲ್ಲ, ನಾವು ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯಾ ಪ್ರಕರಣಗಳ ಬಂಧಿತ ಆರೋಪಿಗಳಲ್ಲಿ ಒಬ್ಬರೂ ಕಾಂಗ್ರೆಸ್ ನವರಿಲ್ಲ. ಆದರೆ ಬಿಜೆಪಿಯ ಅಂಗ ಸಂಸ್ಥೆಗಳ ಕಾರ್ಯಕರ್ತರಿದ್ದಾರೆ. ಮೋದಿಯವರು ಹಿಂದೂಗಳ ಹತ್ಯೆ ಬಗ್ಗೆ ಹೇಳ್ತಾರೆ, ಆದರೆ ಮನುಷ್ಯರ ಹತ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.