ಅಧಿಕಾರಕ್ಕೆ ಬಂದರೆ ರಾಜಕೀಯ ಪ್ರೇರಿತ ಹತ್ಯೆಗಳಿಗೆ ಕಡಿವಾಣ: ರಾಜನಾಥ್ ಸಿಂಗ್
ಮಂಗಳೂರು, ಏಪ್ರಿಲ್ 23: ಕರ್ನಾಟಕದಲ್ಲಿ ರಾಜಕೀಯ ಪ್ರೇರಿತ ಹತ್ಯೆಗಳು ನಡೆಯುತ್ತಿವೆ, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಂತಹ ರಾಜಕೀಯ ಪ್ರೇರಿತ ಹತ್ಯೆಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಬೆಳ್ತಂಗಡಿಯಲ್ಲಿ ಅಯೋಜಿಸಿದ್ದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಗುಡಿ ಗುಂಡಾರ ಸುತ್ತಿದ ದಕ್ಷಿಣ ಕನ್ನಡ ಅಭ್ಯರ್ಥಿಗಳು
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 20 ಸಾವಿರ ಕೋಟಿ ಮಾತ್ರ ನೀಡಲಾಗಿತ್ತು ಆದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 14 ನೇ ಹಣಕಾಸು ಆಯೋಗದಿಂದ 2 ಲಕ್ಷ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇಷ್ಟು ಹಣ ನೀಡಿದರೂ ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ. ಒಂದೋ ಈ ಹಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿನಿಯೋಗಿಸಿಲ್ಲ ಅಥವಾ ಆ ಹಣವನ್ನು ಭ್ರಷ್ಟಾಚಾರದಲ್ಲಿ ತೊಡಗಿಸಿದೆ ಎಂದು ಅವರು ಆರೋಪಿಸಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ನಿದ್ದೆ ಮಾಡಲು ಬಿಡಿ!
ಸಿದ್ದರಾಮಯ್ಯ ಅವರದ್ದು ನಿದ್ದೆ ಸರ್ಕಾರ. ಈ ಸರ್ಕಾರಕ್ಕೆ ನಿದ್ದೆ ಮಾಡಲು ಬಿಡಿ ಎಂದು ಅವರು ವ್ಯಂಗ್ಯವಾಡಿದರು. ಕಾಂಗ್ರೆಸ್ ಮತ್ತು ಕರಪ್ಷನ್ ಒಂದೇ ನಾಣ್ಯದ ಎರಡು ಮುಖಗಳು. ಕ್ಷುಲ್ಲಕ ವಿಚಾರಗಳನ್ನು ಎತ್ತಿಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.
ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಕೇಂದ್ರ ಸರ್ಕಾರದ ಬದ್ಧತೆಯಾದರೆ, ರಾಜ್ಯ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು ಟಿಪ್ಪು ಜಯಂತಿಯಂತಹ ವಿಚಾರದಲ್ಲೇ ಮಗ್ನವಾಗಿದೆ. ಹನುಮಾನ್ ಜಯಂತಿಯ ಆಚರಣೆಗೆ ನಿಷೇಧ ಹೇರಲು ಕಾರಣವೇನು ಎಂದು ಅವರು ಕಿಡಿಕಾರಿದರು.
ಒಡೆದು ಆಳುವ ನೀತಿ
ಜಾತಿ, ಧರ್ಮದ ಮೂಲಕ ಒಡೆದು ಆಡುವ ನೀತಿ ಕಾಂಗ್ರೆಸ್ನದ್ದು. ಅಧಿಕಾರಕ್ಕೋಸ್ಕರ ರಾಜಕೀಯವಲ್ಲ, ದೇಶಕ್ಕೋಸ್ಕರ ರಾಜಕೀಯಕ್ಕೆ ಬಳಸಬೇಕಿದೆ ಎಂದು ಹೇಳಿದ ಅವರು, ಧರ್ಮ ಹಾಗೂ ಧ್ವಜದ ವಿಷಯವನ್ನು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ನಾಲ್ಕು ವರ್ಷದ ಹಿಂದೆ ಈ ವಿಷಯದ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದನ್ನು ಯಾವ ಶಕ್ತಿಯೂ ತಡೆಯಲಾರದು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಕೀರ್ತಿ ಯಡಿಯೂರಪ್ಪ ಅವರದ್ದಾಗಿದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ರಾಜ್ಯದಲ್ಲಿ 3,700ಕ್ಕೂ ಅಧಿಕ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿದ ಬಳಿಕ ಪರಿಹಾರ ನೀಡುವ ಸರ್ಕಾರ ಸಿದ್ಧರಾಮಯ್ಯರದ್ದಾಗಿದೆ. ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆದ ಕಾರಣ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಲೋಕಾಯುಕ್ತರಿಗೆ ಚೂರಿ ಇರಿತ ಪ್ರಕರಣ ನಡೆದಿದೆ. ಐಎಎಸ್ ಅಧಿಕಾರಿ ಶಿಖಾ ಅವರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದರು.
ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಿದೆ. ಅದು ಕರ್ನಾಟಕ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಕೃಷ್ಣನ ದರ್ಶನ ಪಡೆದ ರಾಜನಾಥ್
ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಸಚಿವ ರಾಜನಾಥ್ ಸಿಂಗ್, ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಬಳಿಕ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ನಂತರ ಪರ್ಯಾರ ಪಲಿಮಾರುಶ್ರೀ ಅವರನ್ನು ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದರು. ಶ್ರೀಗಳಿಂದ ಗೌರವ ಸ್ವೀಕರಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.