ಮೋದಿ ಭೇಟಿಗಾಗಿ ಡಾಂಬರು ಹಾಕಿದ್ದ ಮಂಗಳೂರು ರಸ್ತೆಯಲ್ಲಿ ಮತ್ತೆ ಗುಂಡಿ
ಮಂಗಳೂರು, ಸೆಪ್ಟೆಂಬರ್ 13: ಸೆಪ್ಟೆಂಬರ್ 2 ರಂದು ಮಂಗಳೂರು ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿದ್ದ ನರೇಂದ್ರ ಮೋದಿ ಅವರು ಸಂಚರಿಸಲು ಕೂಳೂರು ಸೇತುವೆ ರಸ್ತೆಗೆ ಡಾಂಬರು ಹಾಕಲಾಗಿದ್ದು ಈಗ ಆ ರಸ್ತೆಯಲ್ಲಿ ಗುಂಡಿಬಿದ್ದು ಕಳಪೆ ಕಾಮಗಾರಿ ಪ್ರದರ್ಶನವಾಗಿದೆ. ಈಗ ರಸ್ತೆಯಲ್ಲಿ ಗುಂಡಿ ಬಿದ್ದಿವೆ.
ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡಿ ಕಳಪೆ ಕಾಮಗಾರಿ ಬಗ್ಗೆ ದೂರಿದ್ದಾರೆ.
ಪ್ರಧಾನಿ ಮೋದಿ ಊರಿನ ರೈತರಿಗೆ ಪುತ್ತೂರಿನ ಯುವಕನಿಂದ ಜೇನು ತರಬೇತಿ
ನರೇಂದ್ರ ಮೋದಿ ಅವರೇ ಮಂಗಳೂರಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು. ಈಗ ನಾವು ನೀವು ಹಾದುಹೋದ ಪ್ರದೇಶಗಳಲ್ಲಿ ಗುಂಡಿ ಮುಕ್ತ ರಸ್ತೆಗಳನ್ನು ಆನಂದಿಸಬಹುದು. ಈ ರಸ್ತೆಗಳು ಮೂರು ತಿಂಗಳವರೆಗೆ ಮಾತ್ರ ಇರುತ್ತವೆ. ಏಕೆಂದರೆ ಎಲ್ಲಾ ಮಂಗಳೂರಿಗರ ಪರವಾಗಿ ನಾನು ಮತ್ತೆ ಮೂರು ತಿಂಗಳಲ್ಲಿ ಹಿಂತಿರುಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಜುನೈಜ್ ಮೊಹಮ್ಮದ್ ಅವರು ಟ್ವೀಟ್ ಮಾಡಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ರೋಶ
ರಾಷ್ಟ್ರೀಯ ಹೆದ್ದಾರಿ 66 ನಲ್ಲಿ ಹೊಸದಾಗಿ ಹಾಕಲಾದ ಬಿಟುಮೆನ್ ಡಾಂಬರು ಕೇವಲ ಬರೀ 10 ದಿನಗಳ ಕಾಲ ಬಾಳಿಕ ಬಂದಿದೆ. ಪ್ರಧಾನಿಯವರ ಆಗಮನದ ಕೆಲವೇ ದಿನಗಳ ಮೊದಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಧಿಕಾರಿಗಳು ನವಮಂಗಳೂರು ಬಂದರು ಮತ್ತು ಕೂಳೂರು ನಡುವಿನ ಸಂಪೂರ್ಣ ರಸ್ತೆಯನ್ನು ಗುಂಡಿಗಳನ್ನು ಮುಚ್ಚುವ ಮತ್ತು ಡಾಂಬರೀಕರಣ ಮಾಡುವ ಕಾರ್ಯಾಚರಣೆಯನ್ನು ನಡೆಸಿದ್ದರು. ದಶಕಗಳಷ್ಟು ಹಳೆಯದಾದ ಕೂಳೂರು ಸೇತುವೆಗೂ ಹೊಸ ಬಣ್ಣವನ್ನು ಹೊಡೆಯಲಾಗಿತ್ತು.
ಪ್ರಧಾನಿ ಮೋದಿ ಸಮಾವೇಶಕ್ಕೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಭರ್ಜರಿ ಸಿದ್ಧತೆ
ದುರಸ್ತಿಗೆ ವ್ಯಯಿಸಿದ ಹಣವೆಲ್ಲ ವ್ಯರ್ಥ
ಮೋದಿ ಭೇಟಿಯ ಕೇವಲ 10 ದಿನಗಳ ನಂತರ ಹೊಸದಾಗಿ ಹಾಕಲಾದ ಡಾಂಬರು ರಸ್ತೆಯ ಅನೇಕ ಕಡೆಗಳಲ್ಲಿ ಎದ್ದು ಬಂದಿದೆ. ಜುನೈಜ್ ಮೊಹಮ್ಮದ್ ಅವರಂತಹ ಅನೇಕ ಜನರು ಕಳಪೆ ಗುಣಮಟ್ಟದ ಬಿಟುಮೆನ್ ಡಾಂಬರು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಗುಂಡಿಗಳನ್ನು ತುಂಬುವಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇಲ್ಲದಿರುವುದರಿಂದ ಸಾರ್ವಜನಿಕರು ಇಂತಹ ಕಳಪೆ ಕಾಮಗಾರಿಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಕೇವಲ ಒಂದು ವಾರದ ಅವಧಿಯಲ್ಲೇ ಕಿತ್ತು ಬಂದಿರುವುದರಿಂದ ರಸ್ತೆ ದುರಸ್ತಿಗೆ ವ್ಯಯಿಸಿದ ಹಣವೆಲ್ಲ ಚರಂಡಿ ಪಾಲಾಗಿದೆ ಎಂದು ಹೋರಾಟಗಾರ ಎಂ ಜಿ ಹೆಗಡೆ ಆರೋಪಿಸಿದ್ದಾರೆ.
ಸೋಮವಾರ ರಾತ್ರಿ ಮತ್ತೆ ಡಾಂಬರು
ಈ ಬಗ್ಗೆ ಎನ್ಎಚ್ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ನವಮಂಗಳೂರು ಬಂದರಿನಿಂದ ಪ್ರಧಾನಿಯವರ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ತಾತ್ಕಾಲಿಕ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಈ ಕೂಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯು ಡಾಂಬರು ಕಿತ್ತುಬಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸೋಮವಾರ ರಾತ್ರಿ ಅಧಿಕಾರಿಗಳು ಮತ್ತೆ ಡಾಂಬರು ಹಾಕಿ ತೇಪೆ ಹಾಕಿದ್ದಾರೆ. ಆದರೆ ಈ ರಸ್ತೆಯ ಆಯಸ್ಸು ಎಷ್ಟರವರೆಗೆ ಎಂದು ನೋಡಬೇಕಿದೆ.
ಮೋದಿ ಬಂದಿ ಹೋದ ಕೆಲವೆ ದಿನದಲ್ಲಿ ಕಿತ್ತು ಬಂದ ರಸ್ತೆ
ಕಳಪೆ ಕಾಮಗಾರಿಗಳ ಪ್ರಕರಣಗಳು ಹೆಚ್ಚಾಗುತ್ತಲೆ ಇದೆ. ಯೋಗ ದಿನಾಚರಣೆಗಾಗಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾಗಲೂ ಅವರು ಸಂಚರಿಸುವ ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಆದರೆ ಈ ರಸ್ತೆಗಳು ಕಳಪೆ ಕಾಮಗಾರಿಯಿಂದ ಡಾಂಬರು ಹಾಕಿದ್ದ ಕೆಲವೇ ದಿನಗಳಲ್ಲಿ ಕಿತ್ತು ಬಂದಿದ್ದವು. ಇದು ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಬಗ್ಗೆ ಧ್ವನಿಗಳು ಎದ್ದಿದ್ದವು. ಬಿಬಿಎಂಪಿಯಿಂದ ನಡೆದಿದ್ದ ಈ ಕಾಮಗಾರಿಯು ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಬಿಬಿಎಂಪಿಯು ಕಾರ್ಯನಿರ್ವಹಿಸಿದ್ದ ಎಂಜಿನಿಯರ್ಗೆ 3 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿತ್ತು.