ಪ್ರಧಾನಿ ಮೋದಿ ಊರಿನ ರೈತರಿಗೆ ಪುತ್ತೂರಿನ ಯುವಕನಿಂದ ಜೇನು ತರಬೇತಿ
ಕರಾವಳಿಯಲ್ಲಿ ಸ್ವ ಉದ್ಯೋಗ ಅಂತಾ ಯೋಚನೆ ಮಾಡುವ ಯುವಕರು ಮೊದಲು ಕೈ ಹಾಕೋದು ಜೇನು ಉದ್ಯಮಕ್ಕೆ. ಜೇನು ಉದ್ಯಮ ಕೈ ಹಿಡಿದರೆ ಕೈ ತುಂಬಾ ಆದಾಯ ಎಂಬ ಗುಟ್ಟನ್ನು ಅರಿಯುವ ಯುವಕರು ಜೇನು ಉದ್ಯಮಕ್ಕೆ ಧುಮುಕುತ್ತಾರೆ. ಆದರೆ ಜೇನು ಉದ್ಯಮ ಕೆಲವೇ ಕೆಲವು ಯುವಕರ ಕೈ ಹಿಡಿಯುತ್ತದೆ. ಅಂತಹ ಜೇನು ಉದ್ಯಮದಲ್ಲಿ ಯಶಸ್ವಿಯಾದವರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ಎಂಬುವವರು ಒಬ್ಬರು.
ಜೇನು ಉದ್ಯಮದಲ್ಲಿ ಯಶಸ್ವಿ ಯಾಗಿ ಸಾಧನೆ ಮಾಡಿದ ಮನಮೋಹನ್ ಅರಂಬ್ಯ ಈಗ ಪ್ರಧಾನಿ ಮೋದಿ ತವರು ಗುಜರಾತ್ ರಾಜ್ಯದ ರೈತರಿಗೆ ಜೇನು ಕೃಷಿಯ ಬಗ್ಗೆ ತರಬೇತಿ ನೀಡಲು ಆಹ್ವಾನಿತರಾಗಿದ್ದಾರೆ.
20 ಸಾವಿರದಿಂದ 18 ಕೋಟಿ ರೂ.ವರೆಗೆ ವಹಿವಾಟು: ಜೇನುಕೃಷಿಯಲ್ಲಿ ಮೋದಿ ಗಮನ ಸೆಳೆದ ಕೃಷಿಕ
ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಮಧು ಕಾಂತ್ರಿಯನ್ನು ನನಸು ಮಾಡಲು ದೇಶದೆಲ್ಲೆಡೆ ಜೇನು ಕೃಷಿಯ ಮೇಲೆ ಒಲವು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ತವರು ಗುಜರಾತ್ ನ ರೈತರು ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ್ದಾರೆ. ಗುಜರಾತ್ ರೈತರಿಗೆ ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಲು ದಕ್ಷಿಣಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೇನು ಉತ್ಪಾದಕ ಮನಮೋಹನ್ಗೆ ಗುಜರಾತ್ಗೆ ತೆರಳಲಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ 100 ಜೇನು ಕುಟುಂಬಗಳನ್ನು ಗುಜರಾತಿಗೆ ರವಾನಿಸಿರುವ ಇವರಿಗೆ ಒಟ್ಟು 1 ಸಾವಿರ ಜೇನು ಕುಟುಂಬಗಳನ್ನು ಅಲ್ಲಿ ಬೆಳೆಸುವ ಜವಾಬ್ದಾರಿಯನ್ನು ನೀಡಲಾಗಿದೆ.
ಗುಜರಾತ್ನಲ್ಲಿಯು ಇವರ ಜೇನು ಕೃಷಿಗೆ ಬೇಡಿಕೆ
ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ತುಡುವೆ ಜೇನಿನ ಸಿಹಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಲ್ಲಿ ಹೆಜ್ಜೆ ಇರಿಸಿದ್ದು ಗುಜರಾತ್ನಲ್ಲಿಯು ಇವರ ಜೇನು ಕೃಷಿಗೆ ಬೇಡಿಕೆ ವ್ಯಕ್ತವಾಗಿದೆ. ಜೇನು ಕೃಷಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ರಾಜ್ಯದ ಜೇನು ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುವ ಇವರು ರಾಜ್ಯದಾದ್ಯಂತ ಜೇನು ಮತ್ತು ಕುಟುಂಬಗಳನ್ನ ಒದಗಿಸಿಕೊಟ್ಟು ಜೇನು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ.
ಗುಜರಾತಿನ ಕೃಷಿಕರಿಂದ ಭಾರಿ ಬೇಡಿಕೆ
ಜೇನು ಕೃಷಿಯಲ್ಲಿನ ಇವರ ಸಾಧನೆ ಮತ್ತು ಯಶಸ್ಸನ್ನು ಗುರುತಿಸಿಕೊಂಡ ಗುಜರಾತಿನ ಕೃಷಿಕರಿಂದ 1000 ಪೆಟ್ಟಿಗೆಗೆ ಬೇಡಿಕೆ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ಆಗಿರುವ ಮಧು ಕ್ರಾಂತಿಯ ಕಲ್ಪನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಯೋಗಾತ್ಮಕವಾಗಿ ಮನಮೋಹನ್ ಅವರು ಗುಜರಾತ್ಗೆ 100 ಜೇನು ಕುಟುಂಬಗಳನ್ನು ಕಳುಹಿಸಿದ್ದಾರೆ. ಈಗಾಗಲೇ 1000 ಜೇನು ಕುಟುಂಬದ ಪೆಟ್ಟಿಗೆಗೆ ಬೇಡಿಕೆ ವ್ಯಕ್ತವಾಗಿದೆ. ಈ ಮೂಲಕ ರಾಜ್ಯದಾದ್ಯಂತ ಜೇನು ಕೃಷಿಯಲ್ಲಿ ಹೆಸರುವಾಸಿಯಾಗಿರುವ ಮನಮೋಹನ್ ರಾಷ್ಟ್ರದಾದ್ಯಂತ ತುಡುವೆ ಜೇನಿನ ಸಿಹಿ ಹಂಚಲು ಹೊರಟಿದ್ದಾರೆ.
1 ಪೆಟ್ಟಿಗೆಯಿಂದ 4000 ಪೆಟ್ಟಿಗೆವರೆಗೆ ಸಾಧನೆ
ಮನಮೋಹನ 8ನೇ ತರಗತಿಯಲ್ಲಿ ಇರುವಾಗಲೇ ಜೇನು ಕೃಷಿಗೆ ತೊಡಗಿದ್ದರು. ಕೇವಲ ಒಂದು ಪೆಟ್ಟಿಗೆಯಿಂದ ಆರಂಭಗೊಂಡ ಕಾಯಕ ನಾಲ್ಕು ಸಾವಿರ ದಾಟಿದೆ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕಿಲೋ ಜೇನು ಸಂಗ್ರಹಿಸಿದ್ದೂ ಇದೆ. ಅರಂಬ್ಯ ಬೆಟ್ಟಂಪಾಡಿಯಿಂದ ಇಡಿದು ರಾಜ್ಯದ ನಾನಾ ಕಡೆಗಳಲ್ಲಿ ಜೇನು ಪೆಟ್ಟಿಗೆ ಇರಿಸಿದ್ದಾರೆ. ಇವರ ಜಾಗದಲ್ಲಿ ಅಲ್ಲ, ಯಾರದ್ದೋ ಜಮೀನಿನಲ್ಲಿ ಸ್ಥಳ ಬಾಡಿಗೆಯಾಗಿ ಜೇನು ಪೆಟ್ಟಿಗೆ ಇಟ್ಟಿದ್ದಾರೆ. ಇದರಿಂದ ಇವರಿಗೆ ಜೇನು ಹಾಗೂ ಪರಾಗಸ್ಪರ್ಶದಿಂದ ಮಾಲೀಕನಿಗೆ ಫಸಲು ಕೂಡ ಹೆಚ್ಚಾಗುತ್ತದೆ.
ವರ್ಷಕ್ಕೆ 20,000 ಕೆ. ಜಿ. ಜೇನು ತುಪ್ಪ,450 ಕೆ. ಜಿ. ಮೇಣ ಸಂಗ್ರಹ
ವಾರ್ಷಿಕವಾಗಿ 20,000 ಕೆ. ಜಿ. ಜೇನು, 450 ಕೆ. ಜಿ. ಮೇಣ ಸಂಗ್ರಹ, 4000 ಜೇನುಕುಟುಂಬ ಮಾರಾಟ ಮನಮೋಹನರ ಸಾಧನೆ. 'ಹನಿ ವರ್ಲ್ಡ್' ಇವರ ಬ್ರಾಂಡ್. ಜೇನು ಕುಟುಂಬ ಮಾರಾಟ ಮಾಡುವ, ಹಾಗು ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ಕೇರಳ, ಕರ್ನಾಟಕ ರಾಜ್ಯದ ದಕ್ಷಿಣಕನ್ನಡ, ಕೊಡಗು, ಚಿತ್ರದುರ್ಗ ಹೀಗೆ ನಾನಾ ಕಡೆಗಳಲ್ಲಿ ಮನಮೋಹನ ಅವರ ಜೇನಿನ ಪೆಟ್ಟಿಗೆ ಇದೆ. ಜೇನು ಕೃಷಿಯಲ್ಲೇ ಸುಮಾರು 20 ಜನರಿಗೆ ನೇರ ಉದ್ಯೋಗ ನೀಡುತ್ತಿರುವ ಮನಮೋಹನ್ ಜೇನಿನ ಕೃಷಿ ತನ್ನ ಅಗಾಧ ಅನುಭವವನ್ನು ಜೇನು ಸಾಕಾಣಿಕೆಗಾಗಿ ತಮ್ಮ ಬಳಿ ಬರುವವರಿಗೆಲ್ಲಾ ಧಾರೆ ಎರೆದಿದ್ದಾರೆ.
ಇದೀಗ ಗುಜರಾತಿನಿಂದ 1000 ತುಡುವೆ ಜೇನಿನ ಕುಟುಂಬಕ್ಕೆ ಬೇಡಿಕೆ ವ್ಯಕ್ತವಾಗಿದೆ. 100 ಪೆಟ್ಟಿಗೆ, ಕುಟುಂಬವನ್ನು ಒದಗಿಸಿದ್ದೇನೆ. ನಾಲ್ಕು ದಿನದಲ್ಲಿ ಅಲ್ಲಿಗೆ ತೆರಳಿ ಕೃಷಿಗೆ ಸಹಕಾರ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.