ಎಂಎಲ್ಸಿ ತೇಜಸ್ವಿನಿ ಗೌಡ ಆರೋಪಕ್ಕೆ ಠಕ್ಕರ್ ನೀಡಿದ ಮಂಗಳೂರು ಕಮೀಷನರ್
ಮಂಗಳೂರು, ಸೆಪ್ಟೆಂಬರ್ 23: ವಿಧಾನ ಪರಿಷತ್ ಕಲಾಪದಲ್ಲಿ ಮಂಗಳೂರು ಪೊಲೀಸರ ಮೇಲೆ ಎಂಎಲ್ಸಿ ತೇಜಸ್ವಿನಿ ಗೌಡ ಗಂಭೀರ ಆರೋಪ ಮಾಡಿದ್ದಾರೆ. "ಮದುವೆಯಾಗುವುದಾಗಿ ನಂಬಿಸಿ, ಯುವತಿಯ ಜೊತೆ ದೈಹಿಕ ಸಂಪರ್ಕವನ್ನು ಹೊಂದಿ, ಆಕೆಯಿಂದ ಸುಮಾರು 30 ಲಕ್ಷ ರೂಪಾಯಿ ಪಟಾಯಿಸಿದ ವ್ಯಕ್ತಿಯಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತ ಮಹಿಳೆಯಿಂದ ಮಂಗಳೂರು ಪೊಲೀಸರು ದೂರ ಸ್ವೀಕರಿಸಿಲ್ಲ," ಎಂದು ಆರೋಪಿಸಿದ್ದರು.
"ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೆಪ್ಟೆಂಬರ್ 21ರಂದು ಮಂಗಳೂರಿಗೆ ಮೈಸೂರು ಮೂಲದ ಯುವತಿ ಬಂದಿದ್ದು, ಮೈಸೂರಿನಲ್ಲಿ ಮಂಗಳೂರು ಯುವಕನಿಂದ ಯುವತಿಗೆ ಲವ್ ದೋಖಾವಾಗಿತ್ತು. ಇದನ್ನು ಪ್ರಶ್ನಿಸಲು ಮಂಗಳೂರಿನ ಕೋಣಾಜೆಗೆ ಬಂದಿದ್ದು, ಈ ವೇಳೆ ಪೊಲೀಸರು ದೂರು ಪಡೆದಿಲ್ಲ ಎಂದು ಆರೋಪಿಸಲಾಗಿದೆ. ದೂರು ನೀಡುವುದಕ್ಕೆ ಬಂದಾಕೆಯನ್ನು ಪೊಲೀಸರು ಬಸ್ ಹತ್ತಿಸಿ ವಾಪಸ್ ಮೈಸೂರಿಗೆ ಕಳುಹಿಸಿದ್ದಾರೆ," ಅಂತಾ ತೇಜಸ್ವಿನಿ ಆರೋಪ ಮಾಡಿದ್ದರು.
ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಆರೋಪಕ್ಕೆ ಮಂಗಳೂರು ಪೊಲೀಸರು ಠಕ್ಕರ್ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಈ ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.
"ಮೈಸೂರಿನ ನಂಜನಗೂಡು ಯುವತಿ ತನಗೆ ಮೋಸ ಆಗಿದೆ ಅಂತಾ ಮಂಗಳೂರಿನ ಯುವಕನ ಮನೆಗೆ ಬಂದಿದ್ದಾಳೆ. ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಇದರಿಂದ ಬೇಸರಗೊಂಡ ಯುವತಿ ಕೋಣಾಜೆ ಬಸ್ ನಿಲ್ದಾಣಕ್ಕೆ ಬಂದು ಅಳುತ್ತಾ ಕುಳಿತಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ವಿಚಾರಿಸಿ ಪೊಲೀಸ್ ಕಂಟ್ರೋಲ್ ನಂಬರ್ 112ಗೆ ಕರೆ ಮಾಡಿದ್ದಾರೆ."
"ಪೊಲೀಸರೇ ಬಸ್ಸ್ಟಾಂಡ್ಗೆ ಹೋಗಿ ಮಹಿಳೆಯ ಕಷ್ಟ ಕೇಳಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿ ವಿಚಾರಿಸಿದ್ದಾರೆ. ದೂರನ್ನು ಇಲ್ಲಿ ಕೂಡ ಕೊಡಬಹುದು ಅಂತಾ ಹೇಳಿದ್ದಾರೆ. ಆದರೆ ಮೈಸೂರಿನಲ್ಲೇ ಮೋಸ ಆಗಿರುವುದು ಅಲ್ಲೇ ದೂರು ಕೊಡುತ್ತೇನೆ ಎಂದು ಯುವತಿ ಹೇಳಿದ್ದಾರೆ. ಬಳಿಕ ಪೊಲೀಸ್ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಬಸ್ ಹತ್ತಿಸಿದ್ದಾರೆ."
"ಬಸ್ ಚಾಲಕ ಮತ್ತು ನಿರ್ವಾಹಕರಿಗೂ ಯುವತಿಯನ್ನು ಜೋಪಾನವಾಗಿ ಮೈಸೂರಿಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದರೆ ಯುವತಿ ಬಸ್ನಲ್ಲಿರುವಾಗ ಅವರ ವಕೀಲರು ಇಲ್ಲೇ ದೂರು ನೀಡಲು ಹೇಳಿದ್ದಾರೆ. ಬಳಿಕ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾವು ಅವತ್ತೇ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ," ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಂಜನಗೂಡಿನ ಯುವತಿಗೆ ಮಂಗಳೂರಿನ ಮುಡಿಪು ಮೂಲದ ಯುವಕ ಮಹಮ್ಮದ್ ಅಜ್ವಾನ್ ಎಂಬಾತ ಬೆಂಗಳೂರಿನಲ್ಲಿ ಪರಿಚಯವಾಗಿದ್ದ. ಬೆಂಗಳೂರಿನಲ್ಲಿ ಕೆಲ ವರ್ಷಗಳ ಕಾಲ ಇವರು ಜೊತೆಗಿದ್ದು, ಮಹಮ್ಮದ್ ಅಜ್ವಾನ್ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಹಲವು ಬಾರಿ ದೈಹಿಕ ಸಂಪರ್ಕ ಹೊಂದಿದ್ದಾನೆ.
ಈ ನಡುವೆ ಯುವತಿಯಿಂದ ಸುಮಾರು ಮೂವತ್ತು ಲಕ್ಷ ರೂಪಾಯಿಯನ್ನು ಪ್ರೀತಿಯ ನಾಟಕವಾಡಿ ಲಪಟಾಯಿಸಿದ್ದಾನೆ. ಯುವತಿ ತನ್ನ ಆಭರಣ ಮತ್ತು ತಾಯಿಯ ಆಭರಣಗಳನ್ನು ಒತ್ತೆ ಇಟ್ಟು ಯುವಕನಿಗೆ ಹಣ ನೀಡಿದ್ದಾಳೆ. ಇದಾದ ಕೆಲ ಸಮಯದ ಬಳಿಕ ಯುವತಿ ಯುವಕನ ಬಳಿ ಹಣ ಕೇಳಿದ್ದು, ಯುವಕ ಉಲ್ಟಾ ಹೊಡೆದಿದ್ದಾನೆ.
ಲವ್ ಬ್ರೇಕಪ್ ಎಂದು ಹೇಳಿ ಯುವತಿ ಜೊತೆ ಅಂತರ ಕಾಯ್ದುಕೊಂಡಿದ್ದಾನೆ. ಯುವತಿ ಹಲವು ಬಾರಿ ಪ್ರಯತ್ನಪಟ್ಟರೂ ಆರೋಪಿಯು ಯುವತಿಯನ್ನು ದೂರ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಬೇರೆ ದಾರಿ ಕಾಣದೆ ಮಂಗಳೂರಿನ ಮುಡಿಪುನಲ್ಲಿರುವ ಯುವಕನ ಮನೆಗೆ ಬಂದಿದ್ದಾಳೆ. ಆದರೆ ಯುವಕನ ಮನೆಯವರು ಯುವತಿಗೆ ಅವಾಚ್ಯವಾಗಿ ನಿಂದಿಸಿ ಕಪಾಳಮೋಕ್ಷ ಮಾಡಿ ಕಳುಹಿಸಿದ್ದಾರೆ.
ಇದಾದ ಬಳಿಕ ಯುವತಿ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಯುವಕ ಮಹಮ್ಮದ್ ಅಜ್ವಾನ್ ಮೇಲೆ ದೂರು ನೀಡಿದ್ದಾಳೆ. ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.