ನಯಾರ ಕಂಪೆನಿ ವಿರುದ್ಧ ತಿರುಗಿಬಿದ್ದ ಪೆಟ್ರೋಲ್ ಬಂಕ್ ಮಾಲೀಕರು; ಮೋಸದ ಆರೋಪ
ಮಂಗಳೂರು, ಮಾರ್ಚ್ 30: ನಯಾರ ಎನರ್ಜಿ ಕಂಪೆನಿ ಏಕಾಏಕಿ ಯಾವುದೇ ಮುನ್ಸೂಚನೆಯಿಲ್ಲದೆ ರಾಜ್ಯಾದ್ಯಂತ ಇರುವ ಪೆಟ್ರೋಲ್ ಬಂಕ್ಗಳಿಗೆ ತೈಲ ಸರಬರಾಜು ಸ್ಥಗಿತಗೊಳಿಸಿದೆ. ಪರಿಣಾಮ ಪೆಟ್ರೋಲ್ ಬಂಕ್ ಮಾಲೀಕರು ಅನಿವಾರ್ಯವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಆದ್ದರಿಂದ ತಕ್ಷಣ ಕಂಪೆನಿಯು ತೈಲ ಸರಬರಾಜು ಮಾಡಬೇಕೆಂದು ಆಗ್ರಹಿಸಿ ಪೆಟ್ರೋಲ್ ಬಂಕ್ ಮಾಲೀಕರು ಮಂಗಳೂರು ನಗರದ ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿರುವ ನಯಾರ ಡಿಪೋ ಬಳಿ ಪ್ರತಿಭಟನೆ ನಡೆಸಿದ್ದಾರೆ.
ನಯಾರ ಎನರ್ಜಿ ಕಂಪೆನಿಯಿಂದ ಮಾನ್ಯತೆ ಪಡೆದ ಸುಮಾರು 500-600 ಪೆಟ್ರೋಲ್ ಬಂಕ್ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದೆ. ಮಾಲೀಕರು 1-2 ಕೋಟಿ ರೂ. ನಯಾರ ಕಂಪೆನಿಗೆ ಖರ್ಚು ಮಾಡಿ ಪೆಟ್ರೋಲ್ ಬಂಕ್ ಅನ್ನು ಆರಂಭಿಸಿದ್ದರು. ಆದರೆ ಮಾರ್ಚ್ 23ರಿಂದ ಸ್ಟಾಕ್ ಇದ್ದರೂ ಕಂಪೆನಿಯು ಸರಿಯಾಗಿ ತೈಲ ಪೂರೈಕೆ ಮಾಡುತ್ತಿಲ್ಲ. ತಾವು ಬೇಡಿಕೆ ಇಟ್ಟಿರುವಷ್ಟು ತೈಲಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ನಯಾರ ಕಂಪೆನಿಗೆ ಪಾವತಿ ಮಾಡಿದ್ದರೂ, ನಮಗೆ ಇನ್ನೂ ತೈಲ ಪೂರೈಕೆ ಆಗಿಲ್ಲ. ಪರಿಣಾಮ ತಾವು 5-6 ದಿನಗಳಿಂದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಅವಲತ್ತುಕೊಂಡಿದ್ದಾರೆ.
ಪೆಟ್ರೋಲ್ ಬಂಕ್ಗೆ ಬರುವ ಗ್ರಾಹಕರು ತೈಲ ಸ್ಟಾಕ್ ಇಲ್ಲದ ಪರಿಣಾಮ ನಮ್ಮನ್ನೇ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ತೈಲ ಸ್ಟಾಕ್ ಇದ್ದರೂ, ಬೆಲೆ ಏರಿಕೆಗಾಗಿ ಕಾಯ್ದುಕೊಂಡು ಆ ಬಳಿಕ ಮಾರಾಟ ಮಾಡುತ್ತಿದ್ದೇವೆ ಎಂಬ ರೀತಿಯಲ್ಲಿ ಮಾತುಗಳು ಕೇಳಿ ಬರುತ್ತಿವೆ. ಬೇರೆ ಕಂಪೆನಿಗಳ ತೈಲಕ್ಕಿಂತ ನಯಾರ ಎನರ್ಜಿ ಕಂಪೆನಿಯಲ್ಲಿ ಒಂದು ರೂ. ಹೆಚ್ಚು ಇದೆ. ಆದರೂ ನಾವು ಯಾವುದೇ ರೀತಿ ತಕರಾರು ಇಲ್ಲದೆ ತೈಲ ಖರೀದಿ ಮಾಡುತ್ತೇವೆ. ಆದರೆ ಕಳೆದ 15 ದಿನಗಳಿಂದ ನಮ್ಮನ್ನು ಕಂಪೆನಿ ಸರಿಯಾಗಿ ತೈಲ ಪೂರೈಕೆ ಮಾಡದೆ ಸತಾಯಿಸುತ್ತಿದೆ ಎಂದು ಆರೋಪಿಸಿದರು.

ಎಲ್ಲಾ ಮಾಲೀಕರು ಸಾಲ ಮಾಡಿ ಕಂಪನಿಗೆ ಕೋಟ್ಯಂತರ ರೂಪಾಯಿ ನೀಡಿ ಪೆಟ್ರೋಲ್ ಬಂಕ್ ಆರಂಭಿಸಿದ್ದೇವೆ. ಆದರೆ ಕಂಪೆನಿ ಈಗ ಏಕಾಏಕಿ ತೈಲ ಸರಬರಾಜನ್ನೇ ನಿಲ್ಲಿಸಿದೆ. 30 ವರ್ಷಗಳಿಗೆ ಕಂಪೆನಿಯೊಂದಿಗೆ ತೈಲ ಖರೀದಿಯ ಒಪ್ಪಂದದೊಂದಿಗೆ ಎಲ್ಲಾ ಮಾಲೀಕರು ಪೆಟ್ರೋಲ್ ಬಂಕ್ ಆರಂಭಿಸಿದ್ದೇವೆ. ಆದರೆ ಒಂದೆರಡು ವರ್ಷಗಳಲ್ಲೇ ನಮ್ಮ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂದರು.
ಅಲ್ಲದೆ ನಯಾರ ಕಂಪೆನಿಯ ಪೆಟ್ರೋಲ್ ಬಂಕ್ಗಳು ಮಂಗಳೂರು ನಗರದಿಂದ ಹೊರಗಡೆ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿಯೇ ಇದೆ. ಪರಿಣಾಮ ಗ್ರಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ನಯಾರ ಎನರ್ಜಿ ಕಂಪೆನಿಯ ಡಿಪೋಗೆ ಬಂದು ತೈಲ ಸ್ಟಾಕ್ ಅನ್ನು ಪರೀಕ್ಷಿಸಿ ತಕ್ಷಣದಿಂದ ನಮಗೆ ತೈಲ ಪೂರೈಕೆ ಮಾಡಬೇಕು. ಇಲ್ಲದಿದ್ದಲ್ಲಿ ತಾವು ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಡೀಲರ್ಗಳೂ ಮುಂಗಡ ಹಣ ಪಾವತಿಸಿ ಇಂಧನಕ್ಕೆ ಆರ್ಡರ್ ಹಾಕಿದ್ದರೂ ಪೂರೈಕೆ ಮಾಡಲಾಗುತ್ತಿಲ್ಲ. ಆದರೆ ಮಂಗಳೂರಿನ ತಣ್ಣೀರುಬಾವಿಯಲ್ಲಿರುವ ನಯಾರ ಕಂಪನಿಯ ಸಹವರ್ತಿ ಸಂಸ್ಥೆ ಏಜಿಸ್ನವರ ಇಂಧನ ಸಂಗ್ರಹಣಾಗಾರದಲ್ಲಿ ಲಕ್ಷಾಂತರ ಲೀಟರ್ ಪೆಟ್ರೋಲ್ ಡೀಸೆಲ್ ಸಂಗ್ರಹಿಸಿ ಇರಿಸಲಾಗಿದೆ. ಅದನ್ನು ವಿತರಣೆ ಮಾಡಲಾಗುತ್ತಿಲ್ಲ ಎನ್ನುವುದು ಬಂಕ್ ಮಾಲೀಕರ ಆರೋಪವಾಗಿದೆ.
ಅಲ್ಲದೆ ಪೆಟ್ರೋಲ್ ಬಂಕ್ ಮಾಲೀಕರೇ ಸ್ವಯಂ ಆಗಿ ತಮಗೆ ಬೇಕಾದ ಇಂಧನ ಪೂರೈಕೆ ಮಾಡಿಕೊಳ್ಳಲು ಹಣ ಹಾಕಿ ಟ್ಯಾಂಕರ್ ಇರಿಸಿಕೊಂಡಿದ್ದಾರೆ. ಅಥವಾ ಟ್ರಾನ್ಸ್ಪೋರ್ಟ್ ಕಂಪನಿಯವರ ಮೊರೆಹೋಗಿದ್ದಾರೆ. ಅಂತಹ ಲಾರಿ ಚಾಲಕರು ಕಳೆದ ಕೆಲವು ದಿನಗಳಿಂದ ಏಜಿಸ್ ಬಳಿಯ ರಸ್ತೆಯಲ್ಲೇ ಕಾಯುತ್ತಿದ್ದಾರೆ. ಆದರೆ ಇಂಧನ ಸಿಗುತ್ತಿಲ್ಲ ಎಂದು ಡೀಲರ್ ಝಾಹಿರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

15 ದಿನಗಳಿಂದ ನಮ್ಮ ಪಂಪ್ಗಳಿಗೆ ಕಂಪನಿಗಳಿಂದ ಸರಬರಾಜು ನಿಲ್ಲಿಸಲಾಗಿದೆ. ಯಾವುದೇ ಮುನ್ಸೂಚನೆ ನೀಡಿಲ್ಲ, ಎಲ್ಲಾ ಡೀಲರ್ಗಳೂ ಹಣ ಹಾಕಿದ್ದರೂ ಇಂಧನ ಕೊಟ್ಟಿಲ್ಲ. ಇದರಿಂದ ನಾವು ಮಾಲೀಕರಿಗೆ, ನೂರಾರು ಕೆಲಸಗಾರರಿಗೆ ತೊಂದರೆಯಾಗಿದೆ, ಸಾರ್ವಜನಿಕರಿಗೆ ಬೇಕಾದಾಗ ಇಂಧನ ಕೊಡಲಾಗದೆ ಅವರ ಹಿಡಿಶಾಪ ಕೇಳುವಂತಾಗಿದೆ ಡೀಲರ್ ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಬಂಕ್ ಮಾಡಿ ಅಂತ ಹೇಳಿ 30 ವರ್ಷ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಇನ್ನೂ ಒಂದು ವರ್ಷವೂ ಆಗಿಲ್ಲ, ಈಗಲೇ ಈ ರೀತಿ ಕೈಕೊಟ್ಟರೆ ಇನ್ನು 29 ವರ್ಷ ಇವರ ಜೊತೆ ವ್ಯಾಪಾರ ಮಾಡುವುದು ಹೇಗೆ? ಕನಿಷ್ಠ ರಾಜ್ಯದಲ್ಲಿ 500ರಷ್ಟು ಬಂಕ್ಗಳು ನಯಾರದವರನ್ನು ನಂಬಿಕೊಂಡಿದ್ದಾರೆ. ನಮ್ಮನ್ನು ಬಿಸಿನೆಸ್ ಪಾರ್ಟನರ್ ತರ ನೋಡದೆ ಗುಲಾಮರ ರೀತಿ ನೋಡುತ್ತಿದ್ದಾರೆ. ಯಾವುದೇ ಕಾರಣ ಕೊಡದೆ ಇಂಧನ ಪೂರೈಕೆ ನಿಲ್ಲಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ, ಅಕ್ರಮವಾಗಿ ಇಂಧನ ದಾಸ್ತಾನು ಇಟ್ಟಿರುವ ಕಂಪನಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗದ ಡೀಲರ್ ಕೊಟ್ರೇಶ್ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ವಿತರಕರು, ಟ್ಯಾಂಕರ್ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications