Karnataka Rain Death: ಸಿಡಿಲು ಬಡಿದು 10 ದಿನಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತ ಸಾವು
ಮಂಗಳೂರು, ಮೇ 04: ನಿನ್ನೆ(ಮೇ 04) ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ನವವಿವಾಹಿತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮ ಸುಂದರ್ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಸೋಮ ಸುಂದರ್ಗೆ ಕಳೆದ ಹತ್ತು ದಿನದ ಹಿಂದೆಯಷ್ಟೇ ವಿವಾಹವಾಗಿತ್ತು. ನಿನ್ನೆ ಸಂಜೆ ವೇಳೆಗೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಭಾಗದಲ್ಲಿ ಏಕಾಏಕಿ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲು ಕೂಡ ಜೋರಾಗಿತ್ತು.

ಮಳೆ ಹೆಚ್ಚಾಗಬಹುದು ಎಂದು ಸೋಮ ಸುಂದರ್ ಮನೆಯ ಅಂಗಳದಲ್ಲಿದ್ದ ಅಡಿಕೆ ರಾಶಿ ಮಾಡುತ್ತಿದ್ದರು. ಈ ವೇಳೆ ಸೋಮ ಸುಂದರ್ಗೆ ಸಿಡಿಲು ಬಡಿದಿದ್ದು ಸ್ಥಳದಲ್ಲೇ ತೀವ್ರ ಅಸ್ವಸ್ಥರಾಗಿದ್ದಾರೆ. ಕುಟುಂಬಸ್ಥರು ಕೂಡಲೇ ಸೋಮ ಸುಂದರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಸೋಮ ಸುಂದರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಮದುವೆಯಾಗಿ ಹತ್ತು ದಿನಗಳಷ್ಟೇ ಕಳೆದಿದ್ದು, ಸೋಮ ಸುಂದರ್ ಅವರನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು 1 ಲಕ್ಷ ರೂಪಾಯಿ ಮೌಲ್ಯದ ಹಸು ಸಾವು
ಕೋಲಾರ ಜಿಲ್ಲೆ ಹಲವೆಡೆ ನಿನ್ನೆ ಗುಡುಗು ಸಮೇತ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿಯಲ್ಲಿ ಸಿಡಿಲು ಬಡಿದು 1 ಲಕ್ಷ ಮೌಲ್ಯದ 2 ಹಸುಗಳು ಸಾವನ್ನಪ್ಪಿವೆ.
ಬಂಗಾರಪೇಟೆ ತಾಲೂಕಿನ ದೇಶಿಹಳ್ಳಿ ನಿವಾಸಿ ರವಿಕಿರಣ್ ಎನ್ನುವವವರ1 ಲಕ್ಷ ರೂಪಾಯಿ ಮೌಲ್ಯದ 2 ಹಸುಗಳನ್ನು ಹೊಲದಲ್ಲಿ ಕಟ್ಟಿ ಹಾಕಲಾಗಿತ್ತು. ಈ ವೇಳೆ ಏಕಾಏಕಿ ಗುಡುಗು ಸಮೇತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದು ಹಸುಗಳು ಹೊಲದಲ್ಲೇ ಸಾವನ್ನಪ್ಪಿವೆ. ಜೀವನಾಧಾರವಾಗಿದ್ದ ಹಸುಗಳ ಮೃತದೇಹಗಳನ್ನು ಕಂಡು ರೈತ ಕಣ್ಣೀರಿಟ್ಟಿದ್ದಾರೆ.












Click it and Unblock the Notifications