ನವ ಮಂಗಳೂರು ಬಂದರು ಟ್ರಸ್ಟ್ ಅಧ್ಯಕ್ಷರಾಗಿ ಕೃಷ್ಣ ಬಾಬು
ಮಂಗಳೂರು, ಜುಲೈ 2: ಕರ್ನಾಟಕದ ಅತೀ ದೊಡ್ಡ ವಾಣಿಜ್ಯ ಬಂದರು ನವ ಮಂಗಳೂರು ಬಂದರು ಟ್ರಸ್ಟ್ ಗೆ ಅಧ್ಯಕ್ಷರನ್ನಾಗಿ ಐಎಎಸ್ ಅಧಿಕಾರಿ ಎಂ.ಟಿ. ಕೃಷ್ಣಬಾಬು ಅವರನ್ನು ನೇಮಿಸಲಾಗಿದೆ.
1993ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಕೃಷ್ಣ ಬಾಬು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈಗ ಸದ್ಯ ವಿಶಾಖಪಟ್ಟಣಂ ಬಂದರು ಅಧ್ಯಕ್ಷರಾಗಿದ್ದು ಸದ್ಯದಲ್ಲೇ ಮಂಗಳೂರಿಗೆ ಬಂದು ಕೆಲಸ ನಿರ್ವಹಣೆ ಆರಂಭಿಸಲಿದ್ದಾರೆ.
ಸರಕು ನಿರ್ವಹಣೆಯಲ್ಲಿ ವಿಶಾಖಪಟ್ಟಣ ಬಂದರು ಅತ್ಯುನ್ನತ ಸಾಧನೆ ತೋರುವಲ್ಲಿ ಕೃಷ್ಣ ಬಾಬು ಅವರ ಬುದ್ಧಿಮತ್ತೆ ಕೆಲಸ ಮಾಡಿತ್ತು. ಜೊತೆಗೆ ಬಂದರನ್ನು ಹಸಿರು ಬಂದರಾಗಿ ಅವರು ಅಭಿವೃದ್ಧಿಗೊಳಿಸಿದ್ದರು.

ಎಂಜಿನಿಯರಿಂಗ್ ಶೈಕ್ಷಣಿಕ ಓದಿನ ಹಿನ್ನೆಲೆ ಇರುವ ಕೃಷ್ಣ ಬಾಬು 'ರಾಷ್ಟ್ರೀಯ ಅಣು ಶಕ್ತಿ ನಿಗಮ'ದಿಂದ ತಮ್ಮ ವೃತ್ತಿ ಆರಂಭಿಸಿದ್ದರು. ಅವರು ಹಲವು ಸ್ಥಳೀಯ, ವಿಭಾಗವಾರು ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಆದರೆ ಹೆಚ್ಚಾಗಿ ಬಂದರು ಕ್ಷೇತ್ರದಲ್ಲಿ ತಮ್ಮ ಸೇವಾವಧಿಯನ್ನು ಕಳೆದಿದ್ದಾರೆ. ವಿಶಾಖಪಟ್ಟಣ ಬಂದರು ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು ಹೆಚ್ಚುವರಿಯಾಗಿ ಪಾರದೀಪ್ ಬಂದರು ಟ್ರಸ್ಟ್, ಕೊಲ್ಕತ್ತಾ ಬಂದರು ಟ್ರಸ್ಟ್ ಮತ್ತು ಹಲ್ದಿಯಾ ಡಾಕ್ ಕಾಂಪ್ಲೆಕ್ಸ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಮಂಗಳೂರು ಬಂದರಿನ ಉಪಾಧ್ಯಕ್ಷರಾಗಿದ್ದ ಸುರೇಶ್ ಪಿ ಶಿರ್ವಾಡ್ಕರ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಶಿರ್ವಾಡ್ಕರ್ ಕೈಯಿಂದ ಕೃಷ್ಣ ಬಾಬು ಅಧಿಕಾರ ಪಡೆದುಕೊಂಡಿದ್ದಾರೆ.












Click it and Unblock the Notifications