ಧಾರ್ಮಿಕ ಪ್ರಜಾಪ್ರಭುತ್ವವನ್ನು ವಿಶ್ವಕ್ಕೆ ನೀಡಿದ್ದೇ ಭಾರತ - ಪ್ರಫುಲ್ಲ ಕೇತ್ಕರ್
ಮಂಗಳೂರು, ನವೆಂಬರ್ 03 : ಇಂಡಿಯಾ ತನ್ನನ್ನು ಭಾರತ ಎಂದು ಗುರುತಿಸಿಕೊಂಡ ನಂತರ ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಬಹುತೇಕ ಯಾವುದೇ ಚುನಾವಣೆಗಳಲ್ಲೂ ಸೋತಿಲ್ಲ. ಸ್ಪಿರಿಚ್ಯುವಲ್ ಡೆಮಾಕ್ರಸಿಯನ್ನು ಪ್ರಪಂಚಕ್ಕೆ ನೀಡಿದ್ದೇ ಭಾರತ ಎಂದು ಆರ್ಗನೈಸರ್ ಪತ್ರಿಕೆಯ ಸಂಪಾದಕರಾದ ಪ್ರೊ. ಪ್ರಫುಲ್ಲ ಕೇತ್ಕರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಆರಂಭವಾಗಿರುವ ಎರಡು ದಿನಗಳ 'ಮಂಗಳೂರು ಲಿಟ್ ಫೆಸ್ಟ್' ಸಾಹಿತ್ಯ ಉತ್ಸವಲ್ಲಿ ಅವರ ಮಾತನಾಡಿದರು. ಮಂಗಳೂರು ಸಾಹಿತ್ಯ ಉತ್ಸವಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ.

'ಐಡಿಯಾ ಆಫ್ ಭಾರತ್' ಅಥವಾ 'ಭಾರತದ ಕಲ್ಪನೆ' ಎಂಬ ಪರಿಕಲ್ಪನೆಯಡಿ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಮಂಗಳೂರು ಸಾಹಿತ್ಯೋತ್ಸವ-2018ಕ್ಕೆ ಚಾಲನೆ ನೀಡಲಾಯಿತು. 2 ದಿನಗಳ ಕಾಲ ನಡೆಯುವ ಈ ಸಾಹಿತ್ಯ ಉತ್ಸವಕ್ಕೆ ತರಂಗ ಮತ್ತು ತುಂತುರು ವಾರಪತ್ರಿಕೆಗಳ ಸಂಪಾದಕರಾದ ಸಂಧ್ಯಾ ಪೈ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಧ್ಯಾ ಪೈ, ಪ್ರಪಂಚದ ಯಾವ ನಾಗರೀಕತೆಯೂ ಸಾಧಿಸದಷ್ಟು ಭಾರತೀಯ ನಾಗರೀಕತೆ ಸಾಧಿಸಿದೆ. ನಮಗೇ ತಿಳಿಯದ ಇತಿಹಾಸ ಮತ್ತು ಜ್ಞಾನ ಇಲ್ಲಿದೆ. ಆದರೆ ಅವುಗಳನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ಎಂಬ ಸುಗಂಧ ಸೂಸುತ್ತಿದ್ದ ಹೂವು ಈಗ ತನ್ನ ಸುಗಂಧವನ್ನು ಕಳೆದುಕೊಂಡಿದೆ. ಈಗ ಕೇವಲ ಪ್ಲಾಸ್ಟಿಕ್ ಹೂವಾಗಿ ಗೋಚರಿಸುತ್ತಿದೆ. ಭಾರತ ಎಂದರೆ ತೇಜಸ್ಸು ಮತ್ತು ಅರಿವು ಎನ್ನುವ ಪರಿಕಲ್ಪನೆಯೊಂದಿಗೆ ನಮ್ಮ ಹಿರಿಯರು ಭಾರತವನ್ನು ಕಟ್ಟಿದ್ದರು. ಕಳೆದುಕೊಂಡ ಆ ತೇಜಸ್ಸು ಮತ್ತು ಅರಿವನ್ನು ಮತ್ತೆ ಪಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ಸಾಮರ್ಥ್ಯ, ಈ ನೆಲದ ವೈಭವ, ನಮ್ಮ ಹಿಂದಿನ ವೈಜ್ಞಾನಿಕ, ಸಾಮಾಜಿಕ ಪ್ರಭುತ್ವವನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿ ಕೊಡುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಸಂಧ್ಯಾ ಪೈ ಅವರು ಕರೆನೀಡಿದರು.

ಈ ಸಂದರ್ಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಆರ್ಗನೈಸರ್ ಪತ್ರಿಕೆಯ ಸಂಪಾದಕರಾದ ಪ್ರೊ. ಪ್ರಫುಲ್ಲ ಕೇತ್ಕರ್, ಭಾರತೀಯ ಧರ್ಮ ಪರಿಕಲ್ಪನೆಯನ್ನು ಸೆಮಿಟಿಕ್ ಧರ್ಮಗಳಿಗಿಂತಲೂ ಕೆಳಗಿಡುವಲ್ಲಿ ವಸಾಹತುಶಾಹಿ ವ್ಯವಸ್ಥೆಯಲ್ಲೇ ಓದಿ ಬೆಳೆದ ಬಹುತೇಕ ಬೌದ್ಧಿಕರ ಪ್ರಭಾವವಿದೆ ಎಂದು ಅಭಿಪ್ರಾಯ ಪಟ್ಟರು.
ಸ್ಪಿರಿಚ್ಯುವಲ್ ಡೆಮಾಕ್ರಸಿಯನ್ನು ಪ್ರಪಂಚಕ್ಕೆ ನೀಡಿದ್ದೇ ಭಾರತ ಎಂದು ಹೇಳಿದ ಅವರು, ಬೇರೆ ಬೇರೆ ಕಾರಣಗಳಿಗಾಗಿ ಇತರ ಧರ್ಮೀಯರು ಭಾರತಕ್ಕೆ ಕಾಲಿಟ್ಟಾಗ ಅವರ ರೀತಿ ರಿವಾಜುಗಳಿಗನುಗುಣವಾಗಿ ಪ್ರಾರ್ಥಿಸಲು, ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಜಾಗ ನೀಡಿದವರು, ನಿರ್ಮಿಸಿ ಕೂಡ ಕೊಟ್ಟರು. ಆದರೆ ಇಂದು ಕೆಲ ಜನರ ಷಡ್ಯಂತ್ರದಿಂದ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.

ವಿವಿಧತೆಯಲ್ಲಿ ಏಕತೆ ಇಂದಿನ ಪರಿಕಲ್ಪನೆಯಲ್ಲ, ಅದು ಭಾರತದ ಮೂಲ ಸಂಸ್ಕೃತಿಯಲ್ಲೇ ಇದೆ ಎಂದು ಅವರು ಹೇಳಿದರು. ನಿಜವಾದ ಭಾರತೀಯ ಪರಿಕಲ್ಪನೆಯನ್ನು ನೆನಪಿಸಲು ಈ ರೀತಿಯ ಇನ್ನಷ್ಟು ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ವಿನಯ್ ಹೆಗ್ಡೆಯವರು, ಮಂಗಳೂರು ನಗರ ದೇಶಕ್ಕೇ ಮಾದರಿಯಾದ ನಗರವಾಗಿದೆ ಮತ್ತು ಈ ದೇಶದಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಿದೆ ಎಂದರು. ಈ ದೇಶದಲ್ಲಿ ಎಲ್ಲರಿಗೂ ಆದರ್ಶವಾಗಿರುವ ಪುರುಷೋತ್ತಮನ ದೇವಾಲಯವನ್ನು ನಿರ್ಮಿಸುವುದಕ್ಕೂ ವಿರೋಧ ವ್ಯಕ್ತವಾಗುತ್ತಿರುವುದು ಬೇಸರದ ಸಂಗತಿ ಎಂದ ಅವರು, ನಂಬಿಕೆಗಳಲ್ಲಿ ನ್ಯಾಯಾಲಯಗಳು ಮೂಗು ತೂರಿಸಬಾರದು, ರಾಜಕೀಯದಲ್ಲಿ ಧಾರ್ಮಿಕ ವಿಷಯಗಳು ಮೂಗು ತೂರಿಸಬಾರದು, ಧಾರ್ಮಿಕ ವಿಚಾರಗಳಲ್ಲಿ ರಾಜಕೀಯವೂ ಮೂಗು ತೂರಿಸಬಾರದು. ಆದರೆ ಅವೆಲ್ಲವೂ ಈಗ ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications