ಕೇರಳದಲ್ಲಿ ಅಧರ್ಮ ತಾಂಡವ, ಕಿಡಿಕಾರಿದ ಯೋಗಿ ಆದಿತ್ಯನಾಥ್
ಮಂಗಳೂರು, ಅಕ್ಟೋಬರ್ 5: ಮಂಗಳೂರಿನ ಕದ್ರಿಯ ಯೋಗೇಶ್ವರ ಮಠಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿನ್ನೆ ರಾತ್ರಿ ಭೇಟಿ ನೀಡಿದರು. ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ವಿರೋಧಿಸಿ ಆಯೋಜಿಸಿರುವ 'ಜನರಕ್ಷಾ ಯಾತ್ರೆ'ಯಲ್ಲಿ ಭಾಗವಹಿಸಿ ಆದಿತ್ಯನಾಥ್ ಮಂಗಳೂರಿಗೆ ಮರಳಿದರು.
ಕೇರಳದಿಂದ ನೇರವಾಗಿ ಮಂಗಳೂರಿನ ಕದ್ರಿಯಲ್ಲಿರುವ ಯೋಗೇಶ್ವರ ಮಠಕ್ಕೆ ಬಂದ

ಯೋಗಿ ಆದಿತ್ಯನಾಥ್ ರನ್ನು ಕದ್ರಿ ಯೋಗೇಶ್ವರ ಮಠದ ಮಠಾಧೀಶ ನಿರ್ಮಲಾನಂದ ಜಿ ಸ್ವಾಗತಿಸಿದರು. ನಂತರ ಮಠದ ಆವರಣದಲ್ಲಿರುವ ಕಾಲಭೈರವೇಶ್ವರ ದೇವಾಲಯದಲ್ಲಿ ಯೋಗಿ ಆದಿತ್ಯನಾಥ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ನೂರಾರು ಅನುಯಾಯಿಗಳು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ನಾಥ ಸಂಪ್ರದಾಯದ ಪ್ರತಿಷ್ಠಿತ ಸ್ಥಳ ಕದ್ರಿಯ ಈ ಯೋಗೇಶ್ವರ ಮಠವಾಗಿದೆ.

ಈ ಮಠದಲ್ಲಿ ಪ್ರಾಚೀನ ಪರಂಪರೆ ಇದೆ. ಸನಾತನ ಹಿಂದೂ ಧರ್ಮದ ರಕ್ಷಣೆ ಮಠಗಳಿಂದಾಗುತ್ತಿದೆ," ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೇರಳದ ಸಿಪಿಐಎಂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, "ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕೇರಳ ಶ್ರೀ ನಾರಾಯಣಗುರುಗಳು ನಡೆದಾಡಿದ ಪುಣ್ಯ ಭೂಮಿ. ಆದರೆ ಇದೀಗ ಕೇರಳದಲ್ಲಿ ಅಧರ್ಮ ತಾಂಡವಾಡುತ್ತಿದೆ," ಎಂದು ಕಿಡಿಕಾರಿದರು.

ಕೇರಳದಲ್ಲಿ ಸಿಪಿಐಎಂ ಸರಕಾರದಿಂದ ಸನಾತನ ಧರ್ಮಕ್ಕೆ ಹಾನಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, "ಸಂತರು ನಡೆದಾಡಿದ್ದ ಕೇರಳದ ಭೂಮಿ ಮಲಿನವಾಗಿದೆ" ಎಂದು ಹೇಳಿದರು. ನಾವು ಒಂದು ರಾಜ್ಯಕ್ಕೆ ಮಾತ್ರ ಸೀಮಿತರಲ್ಲ. ಸನಾತನ ಧರ್ಮಕ್ಕೆ ಹಾನಿಯಾದಾಗ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications