ಕಾಸರಗೋಡು: ಬೆಳಗ್ಗೆ-ಸಂಜೆ ಈ ಊರು ಸಂಪೂರ್ಣ ಸೈಕಲ್ ಮಯ: ಯಾಕೆ ಗೊತ್ತಾ..?
ಮಂಗಳೂರು, ಡಿಸೆಂಬರ್ 16: ಈ ಶಾಲೆಯ ಮಕ್ಕಳಿಗೆ ಬಸ್ ವ್ಯವಸ್ಥೆಯ ಅನಿವಾರ್ಯತೆಯಿಲ್ಲ, ಟ್ರಾಫಿಕ್ ಜಾಮ್ನಲ್ಲಿ ಸಿಲುಕುವ ಟೆನ್ಷನ್ ಇಲ್ಲ. ಈ ಶಾಲೆಯ ಮಕ್ಕಳೆಲ್ಲಾ ಸಾರಿಗೆಗಾಗಿ ನೆಚ್ಚಿಕೊಂಡಿರೋದು ತಮ್ಮ ಸೈಕಲ್ಗಳನ್ನು ಮಾತ್ರ. ಕೇರಳದ ಸೈಕಲ್ ಶಾಲೆ ಎಂದೇ ಗುರುತಿಸಲ್ಪಟ್ಟಿರುವ ಈ ಶಾಲೆಯು ಇಕೋ ಫ್ರೆಂಡ್ಲಿ ಶಾಲೆಯಾಗಿಯೂ ಮಾರ್ಪಟ್ಟಿದೆ.
ಇದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಊದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ. ಈ ಶಾಲೆಯ ವಿದ್ಯಾರ್ಥಿಗಳು ವಿಶಿಷ್ಟ ಕಾರಣ ಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಸೈಕಲ್ ಏರಿ ಶಾಲೆಗೆ ಬರುವ ಕಾರಣ ಬೆಳಗ್ಗೆ ಹಾಗೂ ಶಾಲೆ ಬಿಡುವ ಸಂಜೆ ಅವಧಿಯಲ್ಲಿ ಇಡೀ ಊರಿಗೆ ಊರೇ ಸೈಕಲ್ ಮಯವಾಗುತ್ತಿದೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಈ ಹಿಂದೆ ರಾಜ್ಯದ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗಿದ್ದ ಈ ಯೋಜನೆ ಬಳಿಕದ ದಿನಗಳಲ್ಲಿ ನಿಂತು ಹೋಗಿತ್ತು. ಸರಕಾರ ನೀಡುತ್ತಿದ್ದ ಈ ಸೈಕಲ್ ಯೋಜನೆ ಎಷ್ಟು ಪ್ರಮಾಣದಲ್ಲಿ ಉಪಯೋಗಿಯಾಗಿತ್ತೋ, ಅದರಷ್ಟೇ ದುರುಪಯೋಗವೂ ಆಗಿತ್ತು. ಆದರೆ ಈ ಶಾಲೆಯ ಮಕ್ಕಳಿಗೆ ಸರಕಾರದಿಂದ ಸೈಕಲ್ ಪೂರೈಕೆಯಾಗುತ್ತಿಲ್ಲ. ಆದರೂ ಈ ಶಾಲೆಯ ಸುಮಾರು 90 ಶೇಕಡಾ ಮಕ್ಕಳು ಸೈಕಲ್ನಲ್ಲೇ ಶಾಲೆಗೆ ಬರೋದು ಇಲ್ಲಿನ ವಿಶೇಷತೆಯಾಗಿದೆ.
ಊದಿನೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಕಳೆದ ಎರಡುವರೆ ದಶಕದಿಂದ ಸೈಕಲ್ ಸಂಪ್ರದಾಯ ಜಾರಿಯಲ್ಲಿದೆ. ಈ ಶಾಲೆಯಲ್ಲಿ 1600 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಇವರಲ್ಲಿ 1,000ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಸೈಕಲ್ ಏರಿ ಶಾಲೆಗೆ ಬರುತ್ತಾರೆ.

ಇಲ್ಲಿನ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯದ ಗೊಡವೆಯೇ ಇಲ್ಲ. 5 ಕಿಲೋಮೀಟರ್ ದೂರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡಾ ಸೈಕಲ್ನಲ್ಲೇ ಶಾಲೆಗೆ ಬರುತ್ತಾರೆ. ಪ್ರತಿದಿನ ಸೈಕಲ್ ಏರಿ ಬರುವ ಮಕ್ಕಳಲ್ಲಿ ಇದರಿಂದ ಕ್ರೀಡಾದಕ್ಷತೆ ಬೆಳೆಯುತ್ತದೆ ಅನ್ನೋದು ಶಾಲೆಯ ಶಿಕ್ಷಕರ ಮಾತು.
ಶಾಲೆ ಆರಂಭವಾಗಿವ ಬೆಳಗ್ಗಿನ ಸಮಯ ಮತ್ತು ಸಂಜೆ ಸಮಯ ಸೈಕಲ್ ಏರಿ ಬರುವ ಮಕ್ಕಳಿಗೆ ರಸ್ತೆಯಲ್ಲಿ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಈ ಶಾಲೆಯ ಮಕ್ಕಳೇ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುತ್ತಾರೆ. ಶಾಲೆಯ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಈ ಕೆಲಸವನ್ನು ಪ್ರತಿದಿನ ನಿರ್ವಹಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೂ ಮಕ್ಕಳ ಸೂಚನೆಗಳನ್ನು ಪಾಲಿಸುತ್ತಾರೆ.

ಸೈಕಲ್ ಕಳ್ಳತನ ನಡೆಯುವುದು ಹಾಗೂ ಗುರುತಿಸಲು ಅನುವಾಗುವಂತೆ ಪ್ರತ್ಯೇಕ ರಿಜಿಸ್ಟರ್ ವ್ಯವಸ್ಥೆಗೊಳಿಸಿ ನಂಬರ್ ನೀಡಲಾಗುತ್ತದೆ. ಪ್ರತಿಯೊಂದು ಸೈಕಲ್ಗೂ ನಂಬರ್ ಒಳಗೊಂಡ ಕಿತ್ತು ತೆಗೆಯಲು ಸಾಧ್ಯವಾಗದ ಸ್ಟಿಕ್ಟರ್ ಅಳವಡಿಸಲಾಗಿದೆ. ಸಾವಿರ ಸಂಖ್ಯೆಯಲ್ಲಿರುವ ಸೈಕಲ್ ನಿಂದಾಗಿ ಒಂದೋ ಎರಡು ಸೈಕಲ್ ರಿಪೇರಿ ಮಾಡುವ ಕುಟುಂಗಳಿಗಳ ಕೈಗೆ ಉದ್ಯೋಗವನ್ನೂ ಈ ಮಕ್ಕಳೇ ತಮ್ಮ ಸೈಕಲ್ಗಳ ಮೂಲಕ ನೀಡುತ್ತಾರೆ.
ಸೈಕಲ್ ಖರೀದಿಸಲು ಅಶಕ್ತರಾದ ಮಕ್ಕಳಿಗೆ ದಾನುಗಳ ಸಹಕಾರದಿಂದ ಮತ್ತು ಅಧ್ಯಾಪಕರೇ ತಮ್ಮ ಸಂಬಳದ ಹಣ ಒಟ್ಟುಗೂಡಿಸಿ ಸೈಕಲ್ ತೆಗೆಸಿಕೊಟ್ಟಿರುವ ಹಲವು ಉದಾಹರಣೆಗಳೂ ಇಲ್ಲಿದೆ. ಅಲ್ಲದೆ ಈ ಶಾಲೆಯನ್ನು ಸಂಫೂರ್ಣ ವಿಷಮುಕ್ತ ವಾತಾವರಣವನ್ನಾಗಿ ಮಾಡಲು ಕ್ಯಾಂಪಸ್ ತುಂಬಾ ಮರ-ಗಿಡಗಳನ್ನು ನೆಡಲಾಗಿದೆ. ಈ ಮೂಲಕ ಪರಸರ ಸ್ನೇಹಿ ಶಾಲೆಯಾಗಿಯೂ ಈ ಶಾಲೆ ಮೂಡಿ ಬಂದಿದೆ.
ವರ್ಷದಿಂದ ವರ್ಷಕ್ಕೆ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪಠ್ಯ-ಪತ್ಯೇತರ ವಲಯಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚುತ್ತಿದೆ. ಕ್ರೀಡಾ ವಲಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಳುಗಳನ್ನು ಈ ಶಾಲೆ ಕೊಡುಗೆಯಾಗಿ ನೀಡಿದೆ. ಕಾಮನ್ವೆಲ್ತ್ ಯೂತ್ ಗೇಮ್ಸ್ನ ಶಾಟ್ಪುಟ್ನಲ್ಲಿ ಕಂಚಿನ ಪದಕ ಪಡೆದ ವಿ.ಎಸ್.ಅನುಪ್ರಿಯಾ ಉದಿನೂರು ಶಾಲೆಯ ಹಳೆ ವಿದ್ಯಾರ್ಥಿನಿ ಎಂಬುದು ವಿಶೇಷವಾಗಿದೆ.












Click it and Unblock the Notifications