ಮಂಗಳೂರು: 'ಜನಸುರಕ್ಷಾ ಯಾತ್ರೆ'ಯಲ್ಲಿಂದು ಯೋಗಿ ಸಮಾರೋಪ ಭಾಷಣ
ಮಂಗಳೂರು, ಮಾರ್ಚ್ 6: ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಆರಂಭಿಸಿದ್ದ ಬೃಹತ್ ಜನಸುರಕ್ಷಾ ಯಾತ್ರೆ - 'ಮಂಗಳೂರು ಚಲೋ' ಇಂದು ಸಂಪನ್ನಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದಿಂದ ಹಾಗೂ ಕೊಡಗು ಜಿಲ್ಲೆಯ ಕುಶಾಲನಗರದಿಂದ ಆರಂಭವಾಗಿದ್ದ ಈ ಬೃಹತ್ ಜನಸುರಕ್ಷಾ ಯಾತ್ರೆ - 'ಮಂಗಳೂರು ಚಲೋ' ಇಂದು ಮಂಗಳೂರು ತಲುಪಲಿದೆ.
ಇಂದು ಮಧ್ಯಾಹ್ನ ಕುಶಾಲನಗರದಿಂದ ಬರುವ ಯಾತ್ರೆ ಪಂಪ್ ವೆಲ್ ಹಾಗೂ ಅಂಕೋಲಾ ದಿಂದ ಬರುವ ಯಾತ್ರೆ ಕದ್ರಿ ದೇವಾಲಯಕ್ಕೆ ಆಗಮಿಸಲಿದೆ. ನಂತರ ಏಕಕಾಲದಲ್ಲಿ ಎರಡೂ ಕಡೆಯಿಂದ ಬಂದ ಬಿಜೆಪಿ ಕಾರ್ಯಕರ್ತರು ಮಂಗಳೂರಿನ ಜ್ಯೋತಿ ವೃತ್ತದಿಂದ ಮಧ್ಯಾಹ್ನ 3:30 ಕ್ಕೆ ರಾಜ್ಯ ನಾಯಕರ ಸಮ್ಮುಖದಲ್ಲಿ ಸಮಾವೇಶ ನಡೆಯುವ ಕೇಂದ್ರ ಮೈದಾನಕ್ಕೆ ಬೃಹತ್ ಪಾದಯಾತ್ರೆ ಮೂಲಕ ತೆರಳಲಿದ್ದಾರೆ.
ನಗರದ ಕೇಂದ್ರ ಮೈದಾನದಲ್ಲಿ ನಡೆಯುವ 'ಮಂಗಳೂರು ಚಲೋ' ಸಮಾರೋಪ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಭಾಷಣ ಮಾಡಲಿದ್ದಾರೆ.

ಯೋಗಿ ಆದಿತ್ಯನಾಥ್ ಬಜ್ಪೆ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಸಾಯಂಕಾಲ 5 ಗಂಟೆಗೆ ಆಗಮಿಸಲಿದ್ದಾರೆ. ಅಲ್ಲಿಂದ ನೇರವಾಗಿ ಕೇಂದ್ರ ಮೈದಾನಕ್ಕೆ ತೆರಳಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

ಈ ಬೃಹತ್ ಸಮಾವೇಶದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಹಿಸಲಿದ್ದು, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.












Click it and Unblock the Notifications